ಆದ್ಯತೆ…

Share Button

.
ಸಾವು ಹೊಸ್ತಿಲ ಕದ ಬಡಿದಾಗ
ಅದು ಹೇಗೆ ತಯಾರಿಲ್ಲದ ನಾನು
ಎದ್ದು ಹೋಗಿಬಿಡುವುದು

ನನ್ನ ಕಣ್ಣಿಂದೊಮ್ಮೆ ನೋಡು
ಸಾವೇ ಎಂದು ಕೇಳಿಕೊಳುವೆ

ಇವೆ.. ಮಕ್ಕಳಿವೆ, ಮನೆಯಿದೆ, ಗಂಡನಾದಿ
ಬಳಗವಿದೆ ಹೇಗೆ ಬರಲಿ ನಿನ್ನೊಡನೆಂದು
ಕೇಳಿಕೊಳಲೇ
ಹೀಗೆಂದು ಕೇಳಿ ನೋಡಲೇ

ಸಾವಿಗೇನಂತೆ ನಿತ್ಯ ಸಮಾರಾಧನೆ-
ದಾಸೋಹ. ಹುಟ್ಟೆಂಬುದು ಬಲು ಕಷ್ಟ
ಸಂಕಟ. ನಡುವ ಈ ಬದುಕು ಮಾತ್ರ
ಅತಿ ತುಟ್ಟಿ..
ಹೀಗೆಂದು ಹೇಳಿ ನೋಡಲೇ

ಅತಿಯಾಸೆ ನನಗಿಲ್ಲ ಮಮಕಾರ
ಬಿಡುತ್ತಿಲ್ಲ, ಮಕ್ಕಳಿನ್ನೂ ಚಿಕ್ಕವೆಂದು
ಅಮ್ಮಬೇಕೆಂದು ಅಳುತ್ತವೆಂದು
ಕಾರಣ ನೀಡಲೇ.

ಮನೆಯ ಸಾರಣೆ, ಕುಂಡದ ಹೂಗಳ
ಪೋಷಣೆ ಆಗಬೇಕಿದೆ ಇನ್ನು,
ಅತಿಥಿಗಳು ಬರಬೇಕಿದೆ ಈ ಹಬ್ಬಕೆಂದು
ಹೇಳಿ ನೋಡಲೆ..

ಇವರಿಗೊಂದೂ ತಿಳಿಯದು, ಅನ್ನಕೆ
ನೀರಿಡುವುದು, ಒಗ್ಗರಣೆ ಸಿಡಿಸುವುದು
ಪಾಪ, ಹಸಿದಿರುತ್ತಾರೆ ನಾ ಹೀಗೆ
ಪಟ್ಟನೆದ್ದು ಬಂದರೆಂದು ಹೇಳಿ ನೋಡಲೆ

ಹಣೆ ಬಳಿ ಇಣುಕುವ ಬಿಳಿ ಕೂದಲಿಗಿಷ್ಟು
ಬಣ್ಣ, ತುಟಿಗೆ ರಂಗು, ಕಾಡಿಗೆಯನು
ಒಮ್ಮೆ ನನಗಾಗಿ ಹಚ್ಚಿ ; ನಗಲೊಮ್ಮೆ
ಅವಕಾಶ ನೀಡೆಂದು ಕೇಳಿಕೊಳಲೇ

ಆಗಲಿರು ಇನ್ನೂ ಕೊಂಚ ವಯಸ್ಸು
ಮುಪ್ಪೇನು ಮೈಗಡರಿದೆಯಷ್ಟೇ
ಯೌವನ ಕುಣಿದಿಲ್ಲವೇ ಮನದಲಿ
ಕಾಣದೆ ನಿನಗೆಂದು ಹೇಳಿ ನೋಡಲೇ
ಕೊಂಚ ನಿಲ್ಲೆಂದು ಕೇಳಿಕೊಳಲೇ….

– ವಸುಂಧರಾ ಕದಲೂರು
.

6 Responses

  1. Hema says:

    ಅಬ್ಬಾ..ಅದೆಷ್ಟು ಆದ್ಯತೆಗಳಿವೆ ಮಹಿಳೆಗೆ! ಕವನ ಇಷ್ಟವಾಯಿತು

  2. ನಯನ ಬಜಕೂಡ್ಲು says:

    ಸೂಪರ್. ಇವತ್ತಿನ ಪರಿಸ್ಥಿತಿ ಮಾನವನ ಸ್ವಯಂಕೃತ ಅಪರಾಧ, ಆದರೂ ಅಂಜದೆ ಸಾವಿನ ಮುಂದೆ ಮಂಡಿಸಲು ಎಷ್ಟೊಂದು ಅಹವಾಲುಗಳಿವೆ…..
    Nice one

  3. ಧರ್ಮಣ ಧನ್ನಿ says:

    ಆದ್ಯತೆ ಕವನ ಮನಸಿಗೆ ಹಿಡಿಸಿತು. ನವ್ಯ ಕಾವ್ಯ ಸಪರ್

  4. ಶಂಕರಿ ಶರ್ಮ says:

    ಮನಸ್ಸಿನ ಬೆರಗು, ತಲ್ಲಣ, ಇಚ್ಛೆ.. ಎಲ್ಲವನ್ನೂ ಹೆಣೆದ ಸೊಗಸಾದ ಕವನ.

  5. ಜಲಜಾರಾವ್ says:

    ತನಗಾಗಿ ಎಂದೂ ಬದುಕದ ಹೆಣ್ಣು ಮಕ್ಕಳ ನಿತ್ಯ ತಲ್ಲಣಗಳನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದೆ ಈ ಕವನ.

  6. Savithri bhat says:

    ಅರ್ಥ ಪೂರ್ಣ ಕವನ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: