ಮೌನ ಗೀತೆ

Share Button

ಒತ್ತಿ ಉಕ್ಕುವ  ಮನಕೆ ತಂಪೆರೆವ ಬಿಸುಪಿಲ್ಲ
ಎಲ್ಲಿಂದ ಬರಬೇಕು, ನಾನು ಬಡವಿ…..
ಬಿಸುಪಿಲ್ಲದಾ  ಭಯಕೆ ತೆರೆಯದಾತನ ತೋಳು
ಅದನರಿತ ಮೇಲೂ.. ಆತ ಬಡವ…

ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತು
ಒಲವಿತ್ತು ನಾ -ನೀನು ಬೇಧವಿರದೇ
ನಿನ್ನೊಳಗೆ  ನಾನು, ನನ್ನೊಳಗೆ ನೀನೆಂಬುವುದು
ಮುದವಿತ್ತು ಸಂಗೀತ ಲೋಪವಿರದೇ

ಈಗ ನಿಶ್ಶಬ್ದದಲಿ ಈಟಿಯಂತೆಯೆ ಇರಿವ
ನಿನ ಮೌನ ಸಹಿಸುವುದು ಕಷ್ಟ ಎನಗೆ
ಇಷ್ಟ ಇರದಿದ್ದರೂ ನನ ಮಾತು ಜೋರಾಗಿ
ಗುಡುಗು ಸಿಡಿಲುಗಳಂತೆ ಶಬ್ದ ಕೊನೆಗೆ

ಕೊಟ್ಟರೆ ಕಳೆದುಬಿಡುವಂತೆಂಬ ನಿನ ಪ್ರೀತಿ
ಇಟ್ಟರೆ ಹಳಸಿಬಿಡುವಂತೆ ನಾನೂ
ಇಟಿಗೆ ಗಾರೆಯ ಹಾಕಿ ಕಟ್ಟುವುದೆ ಗೋಡೆಯನು
ಈಚೆ ನಾ ಮರುಗುತಿಹೆ, ಆಚೆ ನೀನು

ಒಡೆದ ಗೊಂಬೆಯ ಕೆಡವಿ ಸರಿಮಾಡಬಹುದೆಂತು
ಕೆತ್ತನೆಯು ನಮಗೊಲಿದ ವಿದ್ಯೆಯೆಂದು
ಮರೆತುಹೋಯಿತೆ ಪ್ರೀತಿ ಅಂಟೆಂದು  ಜೋಡಿಸಲು
ಚೂರಾದ ಹೃದಯಗಳ ಮಾಡಲೊಂದು

ಮೆಚ್ಚಿ ಆಡುವ ಮಾತು ಚುಚ್ಚುವಂತಾಯಿತು ಏಕೆ
ಬೆಚ್ಚಿಹೆನು, ಬೆದರಿಹೆನು  ಏಕಾಂತದಿ
ಅಚ್ಚುಮೆಚ್ಚಿನ ಸೊಡರು ಕೊಚ್ಚಿ ಹೋಗುತಲಿಹಿದು
ಇಚ್ಛೆಯಿದ್ದರೂ ಉಳಿಸಿಕೊಳದ ಹಠದಿ…

-ವಿದ್ಯಾ ಶ್ರೀ ಎಸ್ ಅಡೂರ್

3 Responses

  1. ನಯನ ಬಜಕೂಡ್ಲು says:

    “ನೀ ಗೀಚಿದ ಮೌನ ಗೀತೆ,
    ಕಾಡುತಿಹುದು ಅದೇಕೋ ಮತ್ತೆ ಮತ್ತೆ “. ವೆರಿ ನೈಸ್

  2. ಶಂಕರಿ ಶರ್ಮ says:

    ಕವನ ಚೆನ್ನಾಗಿದೆ

  3. km vasundhara says:

    ಬಹಳ ಸೊಗಸಾಗಿದೆ. ಭಾವಪೂರ್ಣ ಭಾವಗೀತೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: