ಅಳಿದರೂ ಅಳಿಯದ ಅಪ್ಪ

Share Button

ಗೆಳೆಯರೊಂದಿಗೆ ಚಿನ್ನಿ ದಾಂಡು ಆಡಿ
ಬೆಳಗ್ಗೆಯಿಂದ ಎಮ್ಮೆಯೊಂದಿಗೆ ಓಡಿ
ಬಳಲಿದ ಕಾಲುಗಳ ಎದೆಗೆ ಮಡಿಸಿ ಜಾರಿದ್ದೆ ನಿದ್ರೆಗೆ

ಮನೆತುಂಬ ಶಿಕ್ಷಕನಾದ ಅಪ್ಪನ ಶಿಷ್ಯಂದಿರು
ದೊಡ್ಡ ಅಂಕಣದ ತುಂಬಾ ಶಾಲೆಯ ಧಡೂತಿ ಹುಡುಗರು
ಮಧ್ಯ ರಾತ್ರಿಯಲ್ಲಿ ಎಲ್ಲೋ ಅಳುವಿನ ಧ್ವನಿ
ಮೇಷ್ಟ್ರು ಹೋಗಿಬಿಟ್ಟರು ಎನ್ನುವ ಮಾತು
ಇದೇನೋ ಕನಸೋ ಎಂದು ಕಣ್ಣುಜ್ಜಿಕೊಳ್ಳುವುದರಲ್ಲಿ
ಯಾರೋ ಬಂದು ಉಳ್ಳಾಡಿಸಿ ಎಬ್ಬಿಸಿದರು
ಅಪ್ಪ ಸತ್ತ ಸುದ್ದಿಯ ಹದಿಮೂರು ವರುಷದ ಪೋರನ ಕಿವಿಯ ಮೇಲಾಕಿದರು

ಅಳುತ್ತಿರುವ ಎಲ್ಲರನು ನೋಡಿ ನನ್ನ ಮನದಲಿ
ಒಂದೇ ಪ್ರಶ್ನೆ ನಾನೂ ಬೋರಾಡಿ ಅಳಬೇಕೇ
ನಾನೇಕೆ ಅಳಬೇಕು ನನಗೆ ಸಿಗುವ ಪೆಪ್ಪರ್ ಮಿಂಟ್ ಇನ್ನು ಮುಂದೆ ಸಿಗುವುದಿಲ್ಲವೆಂದೋ
ಆದರೆ ಕೊಡಿಸಲು ಅಮ್ಮ ಇರುವಳಲ್ಲ
ಉಡಲು ಬಟ್ಟೆ ಸಿಗುವುದಿಲ್ಲ ಎಂದು ನೋವಪಡಬೇಕೆ
ಆದರೆ ಅಣ್ಣಂದಿರು ಬಿಟ್ಟ ಗಟ್ಟಿ ಉಡುಪುಗಳು ಸಾಕಷ್ಟು ಇವೆಯಲ್ಲಾ

ಕಾರಣವೇ ಇಲ್ಲ ನನಗೆ ಅಳಲು
ಇಳಿಯಲೇ ಇಲ್ಲ ನೀರು ನನ್ನ ಕಣ್ಣಲ್ಲಿ
ಬಿಟ್ಟ ಕಣ್ಣು ಬಿಟ್ಟ ಹಾಗೇ ನಿಂತಿದ್ದ ನನ್ನ ಬಳಿ
ಬಂದರು ಒಬ್ಬ ವಯಸ್ಸಾದ ಮುದುಕಿ
ಕಿವಿಯ ಬಳಿ ಉಸುರಿದರು ನನ್ನ ತಂದೆ ದೂರದೂರಿಗೆ ಹೋಗಿರುವುದಾ
ಕ್ರಮಿಸಲು ದೊಡ್ಡ ದಾರಿ ಇರುವುದಾ

ಪುಟ್ಟ ಮನಸ್ಸು ಇದೇ ಸತ್ಯವೆಂದು ನಂಬಿತ್ತು
ಊರಿಗೆ ಹೋದವರು ಬಂದೇ ಬರುವರೆಂಬ ನಿರೀಕ್ಷೆಯಲಿ ಕಾಲ ಕಳೆದಿತ್ತು
ಅದೇನು ಪವಾಡವೋ ಪುಟ್ಟ ಮಗುವಿನ ನಂಬಿಕೆಯ ಹುಸಿಯ ಮಾಡದೆ
ಈಗಲೂ ನಮ್ಮ ತಂದೆ ದೂರದೂರಿನಿಂದ ಬರುವರು
ಬಳಲಿ ಬಂದ ಅವರಿಗೆ ನೀರು ನೀಡುವೆನು ನಾನು
ಉಸ್ಸೆಂದು ಕುಳಿತ ಅವರ ಬಳಿ ಜಗಳ ಕಾಯುವೆನು
ತುಂಬಾ ದಿನಗಳ ಕಾಲ ಹೋಗಿದ್ದಕ್ಕೆ ದೂರು ಹೇಳುವೆನು

ತಪ್ಪಿಲ್ಲ ಇದು ಇಷ್ಟು ವರುಷಗಳು ಕಳೆದರೂ
ನಿಂತಿಲ್ಲ ನಮ್ಮ ತಂದೆ ಮನೆಗೆ ಬರುವುದು
ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂಬಂತೆ
ಅವರ ನೆನಪು‌ ಗಾಢವಾಗಿ ಮನಸ್ಸಲ್ಲಿ ಬೇರೂರಿದೆ
ದೇಹ ಬಿಟ್ಟ ಆತ್ಮವ ವಿಶ್ವಾಸದೀ ಕೂಗಿದೆ
ಸಾವಿನಾಚೆ ಸತ್ಯವ ಅನಾವರಣಗೊಳಿಸಿದೆ

-ಕೆ. ಎಂ ಶರಣಬಸವೇಶ

13 Responses

  1. ಹೃದಯ ಸ್ಪರ್ಷಿ ಕವಿತೆ …ಧನ್ಯವಾದಗಳು ಸಾರ್.

    • Anonymous says:

      ನೀವು ಓದಿ ಇಷ್ಟಪಟ್ಟು ಪ್ರತಿಕ್ರಿಯೆ ನೀಡುವುದು ಕಂಡು ದೈರ್ಯ ಬಂದಿದೆ. ನೀವೆಲ್ಲಾ ಓದುವಷ್ಟು ಅದು ತಕ್ಕುದಾಗಿದೆ ಅಂತಾ. ಧನ್ಯವಾದ ನಾಗರತ್ನ ಮೇಡಂ

    • SHARANABASAVEHA K M says:

      ಧನ್ಯವಾದ ನಾಗರತ್ನ ಮೇಡಂ

  2. ನಯನ ಬಜಕೂಡ್ಲು says:

    ಹೃದಯಸ್ಪರ್ಶಿ ಕವನ

  3. ಕವನ ಓದುತ್ತಾ ಕಣ್ಣಂಚಿನಲ್ಲಿ ನೀರಿನ ಹನಿಗಳು ಮನಕಲಕಿದ ಕವನ

    • SHARANABASAVEHA K M says:

      ಹೌದು ಮೇಡಂ ನನಗೂ ಓದಿದಾಗಲೆಲ್ಲಾ ಇದೇ ಅನುಭವ. ನಿಮ್ಮ ಮಾತೃ ಹೃದಯ ಸಹಜವಾಗಿ ದುಃಖ ಪಡುತ್ತದೆ. ಧನ್ಯವಾದ ಗಾಯತ್ರಿ ಮೇಡಂ

  4. PRAKASH K N says:

    Heart touching poetry sharani

    • SHARANABASAVEHA K M says:

      ಧನ್ಯವಾದ ಪ್ರಕಾಶ್. ದೆಹಲಿಯಲ್ಲಿ ಬಿಡುವಿಲ್ಲದ ವಿದ್ಯುತ್ ಅಭಿಯಂತರ ಕೆಲಸದಲ್ಲಿದ್ದರೂ. ಸಾಹಿತ್ಯ ಓದಿ ಖುಷಿಪಡುತ್ತೀಯಾ ಜೊತೆಗೆ ಈ ಪ್ರತಿಕ್ರಿಯೆ

  5. Padma Anand says:

    ನನ್ನದೂ ಅದೇ ಅಭಿಪ್ರಾಯ. ಹೃದಯಸ್ಪರ್ಶಿ ಕವಿತೆ.

    • SHARANABASAVEHA K M says:

      ಧನ್ಯವಾದ ಪದ್ಮಾ ಆನಂದ್ ಮೇಡಂ. ನಿಮ್ಮ ಈ ಪ್ರೋತ್ಸಾಹ ಮತ್ತೆ ಬರೆಯಲು ಸ್ಪೂರ್ತಿ ನೀಡುತ್ತದೆ

  6. . ಶಂಕರಿ ಶರ್ಮ says:

    ಇಲ್ಲದ ಅಪ್ಪನ ನೆನಪಲ್ಲಿ ಮೂಡಿದ ಭಾವ ಲಹರಿ ಮನಮುಟ್ಟುತ್ತದೆ.

Leave a Reply to SHARANABASAVEHA K M Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: