ಪುನರುತ್ಥಾನದ ಪಥದಲ್ಲಿ …. ಹೆಜ್ಜೆ 23

Share Button

ವಿಯೆಟ್ನಾಂ, ಕಾಂಬೋಡಿಯ ಪ್ರವಾಸಕಥನ..
ದಿನ 7:    ಕು ಚಿ ಸುರಂಗಾಂತರಂಗ ( Cu Chi Tunnels)….

ಕು ಚಿ ಸುರಂಗಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕೊಟ್ಟ ಮಾರ್ಗದರ್ಶಿ ನಮ್ಮನ್ನು ಸುರಂಗಗಳ ಒಳಗೆ ಕರೆದೊಯ್ದರು. ಸುಮಾರಾಗಿ ನಮ್ಮ ಪಶ್ಚಿಮ ಘಟ್ಟಗಳ ಅರಣ್ಯದಂತೆ ಕಾಣುವ ಕಾಡಿನ ಕಾಲುದಾರಿಯಲ್ಲಿ ನಡೆಯುತ್ತಾ ಇದ್ದೆವು. ಸ್ವಲ್ಪ ದೂರದಲ್ಲಿ ಒಂದು ಮರದ ಕೆಳಗೆ ವೃತ್ತಾಕಾರವಾಗಿ ಹರಡಿದ್ದ ತರಗೆಲೆ ಕಾಣಿಸಿತು. ತರಗೆಲೆಗಳನ್ನು ಸರಿಸಿದಾಗ ನೀರಿನ ಸಂಪ್ ನ ಮುಚ್ಚಳದಂತೆ ಕಾಣುವ ಎರಡು ಚದರ ಅಡಿ ಇರಬಹುದಾದ ಹಲಗೆ ಕಾಣಿಸಿತು. ಆ ಹಲಗೆಯನ್ನು ಸರಿಸಿದರೆ ಕೆಳಗೆ ಇಳಿಯಲು ಮೆಟ್ಟಿಲುಗಳು ಕಾಣಿಸಿದುವು. ಇದು ಕು ಚಿ ಸುರಂಗಗಳಿಗೆ ಇರುವ ಹಲವಾರು ದಾರಿಗಳಲ್ಲಿ ಒಂದು. ಇಲ್ಲಿ ಸುರಂಗಕ್ಕೆ ಇಳಿಯುವ ವಿಧಾನ ಹೇಗೆಂದರೆ, ಆ ಹಲಗೆಯನ್ನು ಸರಿಸಿ, ಅದರ ಮೇಲೆ ಸ್ವಲ್ಪ ತರಗೆಲೆಗಳನ್ನು ಪೇರಿಸಿ, ಎರಡೂ ಕೈಗಳಿಂದ ನಮ್ಮ ತಲೆಯ ನೇರಕ್ಕೆ ಹಿಡಿದು ಜಾಗರೂಕತೆಯಿಂದ ಸುರಂಗಕ್ಕೆ ಇಳಿಯಬೇಕು. ತಕ್ಷಣ ಹಲಗೆಯನ್ನು ನಮ್ಮ ತಲೆ ಕಾಣದಂತೆ ಮುಚ್ಚಬೇಕು. ಈಗ ಸುತ್ತುಮುತ್ತಲು ಇರುವವರಿಗೆ ಅಲ್ಲಿ ಸುರಂಗದ ದಾರಿ ಇತ್ತೆಂದೇ ಕಾಣಿಸುವುದಿಲ್ಲ. ಇದು ವಿಯೆಟ್ ಕಾಂಗ್ ಪಡೆ ಸುರಂಗವನ್ನು ಪ್ರವೇಶಿಸುತ್ತಿದ್ದ ವಿಧಾನ.

ವಿಯೆಟ್ ಕಾಂಗ್ ಪಡೆ ಸುರಂಗವನ್ನು ಪ್ರವೇಶಿಸುತ್ತಿದ್ದ ವಿಧಾನ

ಹಾಗಾದರೆ, ಅವರಿಗೆ ಸುರಂಗದಲ್ಲಿ ಉಸಿರಾಡಲು ಗಾಳಿ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದೆ. ಇಲ್ಲಿಯೂ ವಿಯೆಟ್ ಕಾಂಗ್ ಯೋಧರ ಚಾಣಾಕ್ಷತೆಗೆ ಬೆರಗಾಗುತ್ತೇವೆ. ಕಾರಣ, ಗಾಳಿ, ಬೆಳಕಿಗಾಗಿ ಎದ್ದು ಕಾಣಿಸುವಂತಹ ವಾತಾಯನ ವ್ಯವಸ್ಥೆಯನ್ನು ಅವರು ಮಾಡಿಕೊಂಡಿಲ್ಲ . ಬದಲಾಗಿ ಅಲ್ಲಲ್ಲಿ ಗೆದ್ದಲಿನ ಹುತ್ತದ ಮಾದರಿಯನ್ನು ನಿರ್ಮಿಸಿಕೊಂಡು ಆ ಮೂಲಕ ಗಾಳಿ ಬರುವಂತೆ ಮಾಡಿಕೊಂಡಿದ್ದಾರೆ. ಇನ್ನು ಸುರಂಗದ ಒಳಗೆ ಅವರು ಏನನ್ನು ತಿಂದು ಬದುಕಿದ್ದರು ಎಂದು ಕೇಳಿದೆವು. ಆ ಕಾಡಿನಲ್ಲಿ ಧಾರಾಳವಾಗಿ ಲಭ್ಯವಿದ್ದ ‘ಬಾಟ್ ಸಾನ್’ ( Bot San) ಅಂದರೆ ಮರಗೆಣಸನ್ನು(Tapioca) ಬೇಯಿಸಿ ತಿನ್ನುತಿದ್ದರಂತೆ. ಸುರಂಗದ ಒಳಗೆ ಅಡುಗೆ ಮಾಡಲೆಂದು ನಿಗದಿತ ಜಾಗವಿತ್ತು. ಆದರೆ ಅಡುಗೆ ಮಾಡುವಾಗ ಹೊಗೆ ಬರುವುದಷ್ಟೆ, ಅದರಿಂದಾಗಿ ಇವರ ಇರುವಿಕೆ ಹೊರಜಗತ್ತಿಗೆ ಗೊತ್ತಾಗುತ್ತದೆಯೆಂದು, ಅಡುಗೆ ಮಾಡುವ ಜಾಗದಿಂದ ಹೊಗೆ ನಿರ್ವಹಣೆಗಾಗಿ ಪ್ರತ್ಯೇಕವಾದ ಸುರಂಗ ರಚಿಸಿ, ಅದು ಬಹಳ ದೂರ ಭೂಮಿಯ ಮೇಲ್ಪದರಕ್ಕೆ ತೆರೆದು ಹೊಗೆ ಬಿಡುವಂತೆ ಮಾಡುತ್ತಿದ್ದರಂತೆ. ಹಾಗಾಗಿ, ಹೊಗೆಯ ಜಾಡು ಹಿಡಿದು ಯಾರೂ ಸುರಂಗವನ್ನು ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ.

ಸುರಂಗದ ಒಳಗೆ ವಾತಾಯನ ವ್ಯವಸ್ಥೆಗಾಗಿ ಮಾನವ ನಿರ್ಮಿತ ಹುತ್ತಗಳು

ಈಗ ಪ್ರವಾಸೋದ್ಯಮದ ಆಕರ್ಷಣೆಯಾಗಿ ಅರಣ್ಯದಲ್ಲಿ ಕೆಲವೆಡೆ ಹುಲ್ಲಿನ ಗುಡಿಸಲು ಹಾಕಿ ಅದರ ಒಳಗೆ ವಿಯೆಟ್ ಕಾಂಗ್ ಯೋಧರ ಕಾರ್ಯವೈಖರಿಯನ್ನು ನಿರೂಪಿಸುವ ಪ್ರಾತ್ಯಕ್ಷಿಕೆಗಳಿವೆ. ಸಮವಸ್ತ್ರ ಧರಿಸಿದ ಯೋಧರು ಪಹರೆ ಕಾಯುತ್ತಿರುವುದು,ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿರುವುದು, ವೈದ್ಯಕೀಯ ಉಪಚಾರದ ಕೊಠಡಿ, ಆಹಾರ ತಯಾರಿಸುತ್ತಿದ್ದ ಸ್ಥಳ ಇತ್ಯಾದಿ. ಪ್ರವಾಸಿಗರಿಗೆ ಅಂದಾಜು 200 ಮೀ ಉದ್ದದ ಸುರಂಗದೊಳಗೆ ಹೋಗಲು ಅವಕಾಶವಿದೆ. ಅಲ್ಲಿ ಕೆಲವೆಡೆ ಕ್ಷೀಣವಾದ ಬೆಳಕು ಇತ್ತು. ಕೆಲವೆಡೆ ಬಗ್ಗಿಕೊಂಡು ಅಥವಾ ತೆವಳಿಕೊಂಡು ಹೋಗಬೇಕು. ಒಂದೆಡೆ ಸಣ್ಣ ಕೋಣೆಯಂತೆ ಇತ್ತು. ಹಂಡೆಯಲ್ಲಿ ಮರಗೆಣಸು ಬೇಯುತ್ತಿತ್ತು. ನಾವು ಬಹಳ ಕುತೂಹಲದಿಂದ ಸುರಂಗದ ಒಳಹೊಕ್ಕು ಬಂದೆವು. ಹೊರಗೆ ಬಂದಾಗ ನಮಗೆ ಬೇಯಿಸಿದ ಮರಗೆಣಸಿನ ಜೊತೆಗೆ ನೆಲಗಡಲೆಯ ಪುಡಿಯನ್ನು ತಿನ್ನಲು ಕೊಟ್ಟರು. ಆರೋಗ್ಯಕರ ತಿನಿಸು, ಆದರೆ ರುಚಿ ಸಪ್ಪೆಯಾಗಿತ್ತು.

ಮಾರ್ಗದರ್ಶಿ ವಿನ್ಸಂಟ್ , ಮರಗೆಣಸಿನ ಹೋಳುಗಳುಳ್ಳ ತಟ್ಟೆಯೊಂದಿಗೆ

ಇನ್ನೂ ಸ್ವಲ್ಪ ಮುಂದುವರಿದಾಗ ಕಾಡಿನಲ್ಲಿ ‘ಢಾಂ..ಢಾಂ…’ ಶಬ್ದ ಕೇಳಿಸಿತು. ಅಲ್ಲಿ ಒಂದು ‘ಶೂಟಿಂಗ್ ರೇಂಜ್’ ಇತ್ತು. ಆಸಕ್ತರು, ನಿಗದಿತ ಹಣ ಕೊಟ್ಟು, ಮಾರ್ಗದರ್ಶಕರ ಮೇಲುಸ್ತುವಾರಿಯಲ್ಲಿ, ಅಲ್ಲಿದ್ದ ಹಲವಾರು ಬಂದೂಕುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ನಿಜವಾದ ಬುಲೆಟ್ ನಲ್ಲಿ ಗುಂಡು ಹಾರಿಸುವ ರೋಚಕ ಅನುಭವ ಪಡೆಯಬಹುದಿತ್ತು. ಕಾಡಿನ ಒಳಗೆ ಕೆಫೆಟೇರಿಯ ಹಾಗೂ ಸ್ಮರಣಿಕೆಗಳನ್ನು ಮಾರುವ ಅಂಗಡಿಗಳೂ ಇದ್ದುವು. ಹೈಮವತಿಯವರು, ತಮ್ಮ ಮೊಮ್ಮಗನಿಗಾಗಿ , ಬಾಂಬ್ ಗಳ ಮಾದರಿಯನ್ನು ಹೋಲುವ ಆಟಿಕೆಯೊಂದನ್ನು ಖರೀದಿಸಿದರು. ಆದರೆ ಅದನ್ನು ಹೊ ಚು ಮಿನ್ಹ್ ನಗರದ ವಿಮಾನ ನಿಲ್ದಾಣದಲ್ಲಿ ತಡೆಹಿಡಿದರು. ಕು ಚಿ ಸುರಂಗಗಳ ದಶಕಗಳ ಹಿಂದಿನ ಅದ್ಭುತ, ಭಯಾನಕ ಚಿತ್ರಣ ಈಗ ನಮಗೆ ರೋಚಕ ಅನುಭವ ಕೊಟ್ಟಿತು.

ಗೂಗಲ್ ಮಾಹಿತಿ ಪ್ರಕಾರ, ಕು ಚಿ ಸುರಂಗಗಳಲ್ಲಿ ವಾಸಿಸಿದವರು ಉತ್ತರ ವಿಯೆಟ್ನಾಂನ ‘ವಿಯೆಟ್ ಕಾಂಗ್ ‘ ಪಡೆ ಮಾತ್ರವಲ್ಲ, ಯುದ್ದದ ಕೆಲವು ಹಂತಗಳಲ್ಲಿ ದಕ್ಷಿಣ ವಿಯೆಟ್ನಾಂ, ದಕ್ಷಿಣ ಕೊರಿಯಾ ಸೈನಿಕರೂ ಅಲ್ಪ ಪ್ರಮಾಣದಲ್ಲಿ ವಾಸಿಸಿದ್ದರು. ಇನ್ನು ಅಮೇರಿಕಾ ಸೈನ್ಯವು ಹೇಗಾದರೂ ತಾನೂ ಕು ಚಿ ಸುರಂಗಗಳ ಮೂಲ, ಆಳ , ವಿಸ್ತಾರ ಕಂಡುಹಿಡಿದು ಧ್ವಂಸಗೊಳಿಸಬೇಕೆಂದು ಸಣ್ಣ ಶರೀರದ, ಬಹಳ ಮಾನಸಿಕ ಸ್ಥೈರ್ಯವುಳ್ಳ ಅಮೇರಿಕನ್ ಯೋಧರನ್ನು ಈ ಕೆಲಸಕ್ಕಾಗಿ ನಿಯೋಜಿಸಿದರು. ಇವರಿಗೆ ‘ ಟನೆಲ್ ರ್‍ಯಾಟ್ಸ್ ‘ ( ಸುರಂಗದ ಇಲಿಗಳು) ಎಂಬ ಅನ್ವರ್ಥ ನಾಮವೂ ದೊರೆಯಿತಂತೆ. ಇಂತಹ ಕೆಲವು ‘ಟನೆಲ್ ರ್‍ಯಾಟ್ಸ್ ‘ಗಳು, ಕು ಚಿ ಸುರಂಗಗಳ ಒಳಗೆ ಪ್ರವೇಶಿಸಲು ಯಶಸ್ವಿಯಾಗಿ, ವಿಯೆಟ್ ಕಾಂಗ್ ಜನರಂತೆಯೇ ಸಮವಸ್ತ್ರ ಧರಿಸಿ, ಅವರ ಆಹಾರವನ್ನೇ ಸೇವಿಸಿ, ಅಲ್ಲಿಯ ಕತ್ತಲು, ನಿಶ್ಶಬ್ದ ಮತ್ತು ಇಕ್ಕಟ್ಟಿನ ವ್ಯವಸ್ಥೆಯ ಲಾಭ ಪಡೆದು ಕೆಲವು ಸುರಂಗಗಳನ್ನು ನಾಶಪಡಿಸಿದರಂತೆ. ಈ ನಡುವೆ, ಸುರಂಗಗಳ ಮತ್ತು ವಿಯೆಟ್ ಕಾಂಗ್ ಜನರ ಬಗ್ಗೆ ಮಾಹಿತಿ ಕೊಡಬೇಕೆಂದು ಅಮೇರಿಕಾ ಸೇನೆ ಬಹಳಷ್ಟು ಅಮಾಯಕರನ್ನು ಇನ್ನಿಲ್ಲದಂತೆ ಕಾಡಿ, ಚಿತ್ರಹಿಂಸೆ ಕೊಟ್ಟಿತ್ತು. ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರವಾಗಿ ಕೊಲೆ ನಡೆದಿತ್ತು. ಎರಡೂ ಕಡೆಯ ಸೇನೆಯಲ್ಲಿ ಸೆರೆ ಸಿಕ್ಕ ಯುದ್ಧ ಕೈದಿಗಳನ್ನು ಅತ್ಯಂತ ಅಮಾನವೀಯವಾಗಿ ಹಿಂಸಿಸಿ ಕೊಲ್ಲಲಾಗಿತ್ತು. ವಿಯೆಟ್ ಕಾಂಗ್ ಜನರೂ ಸೆರೆಸಿಕ್ಕ ಅಮೇರಿಕನ್ ಯೋಧರನ್ನು ಅಮಾನುಷವಾಗಿ ಹಿಂಸೆ ಕೊಟ್ಟು ಕೊಂದರಂತೆ.

ಕು ಚಿ ಸುರಂಗಗಳಿಗೆ ಭೇಟಿ ನಂತರ ನನಗೆ ಅದರ ಗುಂಗು ಬಹಳ ದಿನ ಕಾಡಿತ್ತು. ಯುದ್ಧ ಯಾರಿಗೂ ಬೇಡ, ಅದರಿಂದ ಯಾರಿಗೂ ಲಾಭವಾಗುತ್ತಿಲ್ಲ. ಆದರೂ ಯುಗಾಂತರಗಳಿಂದ ಯುದ್ದಗಳಾಗುತ್ತಿವೆ. ಲಕ್ಷಾಂತರ ಅಮಾಯಕರು ಕಷ್ಟ-ನಷ್ಟಕ್ಕೀಡಾಗುತ್ತಾರೆ. ಜಗತ್ತೇಕೆ ಶಾಂತಿಯಿಂದ ಇರಬಾರದು? ಈ ವಿಷಯದಲ್ಲಿ ನಾವು ಭಾರತೀಯರು ನಿಜಕ್ಕೂ ಧನ್ಯರು. ಚರಿತ್ರೆಯ ಪುಟಗಳಲ್ಲಿ ಎಲ್ಲಾದರೂ ಭಾರತವು ತಾನಾಗಿ ಕಾಲು ಕೆದರಿಕೊಂಡು ಅಥವಾ ಇನ್ನೊಂದು ದೇಶದ ವ್ಯವಹಾರದಲ್ಲಿ ಮೂಗು ತೂರಿಸಿಕೊಂಡು ಹೋಗಿ ಯುದ್ದ ಮಾಡಿದ ಉದಾಹರಣೆಗಳಿಲ್ಲ. ನಮ್ಮ ದೇಶದಲ್ಲಿ ಬಡತನ, ನಿರುದ್ಯೋಗ, ಅಶುಚಿತ್ವ, ಅಶಿಸ್ತು ಎಲ್ಲವೂ ಇದೆ. ಇವುಗಳನ್ನು ಸರಿಪಡಿಸಿಕೊಳ್ಳಲೇಬೇಕು. ಆದರೆ, ಭಾರತದಲ್ಲಿ, ಇನ್ನೂ ಶಾಂತಿಪ್ರಿಯತೆ ಹಾಗೂ ಸಹಬಾಳ್ವೆಗೆ ಆದ್ಯತೆ ಇದೆ. ಹಾಗಾಗಿ, ನಾವು ನೆಮ್ಮದಿಯಿಂದ ಊಟ, ನಿದ್ರೆ ಮಾಡಲು ಸಾಧ್ಯವಾಗುತ್ತಿದೆ. ಮೇರಾ ಭಾರತ್ ಮಹಾನ್!

ಪುನ: ಒಂದು ಗಂಟೆ ಪ್ರಯಾಣಿಸಿ ಹೊ ಚು ಮಿನ್ಹ್ ನಗರಕ್ಕೆ ಬಂದೆವು. ಉತ್ತರ ಭಾರತೀಯ ಹೆಸರಿನ ‘ಹೋಟೆಲ್ ತಂದೂರ್ ‘ ನಲ್ಲಿ ನಮಗೆ ಊಟದ ವ್ಯವಸ್ಥೆಯಿತ್ತು. ಅದರ ಮಾಲೀಕರು ಒಡಿಶಾದವರು. ಆಲ್ಲಿ ದಕ್ಷಿಣ ಭಾರತದ ಊಟವೂ ಲಭ್ಯವಿತ್ತು. ಊಟದ ನಂತರ ನಾವು ಉಳಕೊಂಡಿರುವ ‘ಕ್ವೀನ್ ಆನ್’ ಗೆ ಕರೆತಂದರು . ಆ ದಿನದ ನಮ್ಮ ಮಾರ್ಗದರ್ಶಿ ವಿನ್ಸಂಟ್ ಗೆ ಧನ್ಯವಾದ ತಿಳಿಸಿ, ಸ್ವಲ್ಪ ಹಣವನ್ನು ಟಿಪ್ಸ್ ಕೊಟ್ಟು ವಿದಾಯ ಕೋರಿ, ವಿಶ್ರಮಿಸಿದೆವು.

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : https://www.surahonne.com/?p=42312

(ಮುಂದುವರಿಯುವುದು)
ಹೇಮಮಾಲಾ.ಬಿ, ಮೈಸೂರು

12 Responses

  1. ನಿಮ್ಮ ವಿವರಣಾತ್ಮಕ ಪ್ರವಾಸ ಕಥನ ಚೆನ್ನಾಗಿ ಮೂಡಿಬಂದಿದೆ..ಪೂರಕ ಚಿತ್ರ ಗಳು ನಮಗೆ ಸಂಗತಿಯ ಕುತೂಹಲ ತಣಿಸಿದವು…ಗೆಳತಿ ಹೇಮಾ

  2. ಪದ್ಮಾ ಆನಂದ್ says:

    ಅತ್ಯಂತ ಕುತೂಹಲಭರಿತ ಮಾಹಿತಿಗಳಿಂದ ತುಂಬಿದ ಲೇಖನ. ಭಾರತದೊಂದಿಗಿನ ತುಲನಾತ್ಮಕತೆಯೂ ಮನಸ್ಸನ್ನು ತಟ್ಟಿತು.

  3. MANJURAJ H N says:

    ಕೇವಲ ಮಾಹಿತಿಯಷ್ಟೇ ಅಲ್ಲದ, ಅವುಗಳ ಮನವರಿತ ವ್ಯಾಖ್ಯಾನವನೂ ಜೊತೆಗೂಡಿಸಿದ
    ನಿಮ್ಮ ಪ್ರವಾಸಕಥನದ ಕಂತುಗಳು ಪ್ರತಿ ಸಲವೂ ಕುತೂಹಲಭರಿತ ; ಈ ಸಲದ ವಾತಾಯನ
    ವ್ಯವಸ್ಥೆಯ ವಿಶೇಷತ! ಎಷ್ಟೊಂದು ಅನು-ಭವ !!

    ನಮ್ಮ ದೇಶದ ಆಯಾಚಿತ ಹೋಲಿಕೆ ಸಮಯೋಚಿತ. ನಿಜಕೂ ನಮ್ಮದು ಮಹಾನ್.‌

    ಚಿಂತನೀಯ ಲೇಖನಕೆ ಧನ್ಯವಾದ

  4. ನಯನ ಬಜಕೂಡ್ಲು says:

    ಕುತೂಹಲಕಾರಿ ಮಾತ್ರವಲ್ಲ, ಜನರ ಹತ್ಯೆ, ಸಾವು ನೋವುಗಳ ಬಗ್ಗೆ ಓದುವಾಗ ಮನಸು ಆರ್ದ್ರ ಗೊಳ್ಳುತ್ತದೆ.

  5. ಮತ್ತೆ ಕು ಚಿ ಸುರಂಗಗಳನ್ನು ನೋಡಿದ ಅನುಭವವಾಯಿತು

  6. ಶಂಕರಿ ಶರ್ಮ says:

    ಕು ಚಿ ಸುರಂಗದೊಳಗೆ ಇಳಿಯುವ ವಿಶೇಷ ಕ್ರಮ, ಮರಗೆಣಸಿನ ಸಪ್ಪಗಿನ ರುಚಿ, ಹುತ್ತದ ರಚನೆಯಿಂದ ಸುರಂಗದೊಳಗಿನ ವಾತಾಯನ ವ್ಯವಸ್ಥೆ, ಅಮೇರಿಕದ ಯೋಧರ ಲೆಕ್ಕಾಚಾರವನ್ನು ಸಂಪೂರ್ಣ ತಪ್ಪಿಸಲು ಸಕಲ ವ್ಯವಸ್ಥೆಗಳನ್ನು ಹೊಂದಿದ್ದ ಸುರಂಗದೊಳಗೆ ನಮಗೇ ಹೋಗಿ ಬಂದಂತಹ ಅನುಭವವಾಯಿತು! ನಮ್ಮ ದೇಶ ಮಹಾನ್ ಭಾರತದ ಶಾಂತಿಪ್ರಿಯತೆ ಬಗ್ಗೆ ಎಲ್ಲಿಲ್ಲದ ಹೆಮ್ಮೆ ಎನಿಸಿತು.ಚಂದದ ಪ್ರವಾಸ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: