ಶ್ರದ್ಧಾಂಜಲಿ

Share Button

ಆಫೀಸಿನಿಂದ ಮನೆಗೆ ಬಂದ ಚಂದ್ರು ಫ್ರೆಶ್‌ಅಪ್ ಆಗಿ ಸೋಫಾದ ಮೇಲೆ ಕುಳಿತು ಅವತ್ತಿನ ಪೇಪರ್ ಕೈಗೆತ್ತಿಕೊಂಡ. ಒಂದು ಕೈಯಲ್ಲಿ ಒಗ್ಗರಣೆ ಹಾಕಿದ್ದ ಪುರಿ ಇದ್ದ ತಟ್ಟೆ ಮತ್ತೊಂದರಲ್ಲಿ ನೀರಿನ ಲೋಟದೊಂದಿಗೆ ಬಂದಳು ಚಂದ್ರುವಿನ ಮಡದಿ ಸುಮ. ಅದನ್ನು ಅವನ ಮುಂದಿನ ಟೀಪಾಯಿಯ ಮೇಲಿಟ್ಟು “ತಿನ್ನುತ್ತಿರಿ ನಾನು ಕಾಫಿ ಬೆರೆಸಿಕೊಂಡು ತರುತ್ತೇನೆ” ಎಂದು ಒಳ ನಡೆದಳು.

ಹೆಂಡತಿ ಕೊಟ್ಟ ಪುರಿಯನ್ನು ತಿಂದು ಮುಗಿಸಿ ನೀರು ಕುಡಿಯುತ್ತಿರುವಷ್ಟರಲ್ಲಿ ಕಾಫಿ ತಂದುಕೊಟ್ಟು ಅವನಿಗೆದುರಾಗಿದ್ದ ಕುರ್ಚಿಯಲ್ಲಿ ಕುಳಿತಳು. ಅದೂ ಇದೂ ಮಾತನಾಡುತ್ತಾ ಏನೋ ನೆನಪಿಸಿಕೊಂಡವಳಂತೆ “ರೀ..ನಿಮ್ಮ ಗೆಳೆಯ ಕೃಷ್ಣಪ್ಪ ಬಂದಿದ್ದರು. ನಾನು ನೀವಿನ್ನೂ ಆಫೀಸಿನಿಂದ ಬಂದಿಲ್ಲ ಎಂದುದಕ್ಕೆ ಹೌದೇ.. ಹಾಗಾದರೆ ಪೇಟೆಯಲ್ಲಿ ನನಗೆ ಸ್ವಲ್ಪ ಕೆಲಸವಿದೆ, ಅದನ್ನು ಮುಗಿಸಿ ಬರುತ್ತೇನೆ. ಸಾಹೇಬರಿಗೆ ತಿಳಿಸಿಬಿಡಿ, ಮರೆಯಬೇಡಿ ಎಂದು ಉತ್ತರಕ್ಕೂ ಕಾಯದೇ ಹೊರಟುಹೋದರು” ಎಂದು ಹೇಳಿದಳು ಸುಮ.

ಹೆಂಡತಿ ಹೇಳಿದ ಮಾತುಗಳು ‘ಮತ್ತೆ ಬರುತ್ತಾರಂತೆ ಕೃಷ್ಣಪ್ಪ’ ಎಂದದ್ದು ಚಂದ್ರುವನ್ನು ಚಿಂತೆಗೀಡುಮಾಡಿತು. ಇವನ್ಯಾಕೆ ಮತ್ತೆ ನನ್ನನ್ನು ನೋಡಲು ಬರುತ್ತಾನೆ? ಅವನ ವಸ್ತುವನ್ನು ನಾನವತ್ತೇ ಕೊಟ್ಟಾಯಿತಲ್ಲಾ ! ಮತ್ಯಾವ ಸಮಸ್ಯೆಯನ್ನು ಹೊತ್ತು ತರುತ್ತಿದ್ದಾನಪ್ಪಾ. ಫೋನ್ ಮಾಡಿ ತಿಳಿಸಬಹುದಿತ್ತಲ್ಲಾ, ನೇರವಾಗಿ ನನ್ನ ಬಳಿ ಮಾತನಾಡುವಂತದ್ದೇನಿತ್ತು? ಮತ್ಯಾವದಕ್ಕಾದರೂ ಮಧ್ಯಸ್ಥಿಕೆ ವಹಿಸಿ ಎಂದು ಕರೆದರೆ ಖಂಡಿತ ಒಪ್ಪಿಕೊಳ್ಳುವುದಿಲ್ಲ. ಅವತ್ತೇನೋ ಮಾನವೀಯತೆಯ ದೃಷ್ಟಿಯಿಂದ ಹೋಗಿ ಪಡಬಾರದ ಭಂಗಪಟ್ಟು ಬಂದದ್ದಾಯಿತು, ನೋಡಬಾರದ್ದನ್ನು ನೋಡಿ, ಕೇಳಬಾರದಂತಹ ಮಾತುಗಳನ್ನು ಕೇಳಿಸಿಕೊಂಡದ್ದಾಯಿತು. ಈಗೇಕೆ ಮತ್ತೆ? ಅದೇನು ಜನಗಳೋ, ಎಲ್ಲರೂ ವಿದ್ಯಾವಂತರಂತೆ, ಕನಿಷ್ಟ ನಡವಳಿಕೆಯೂ ಇಲ್ಲದವರು. ನಾನೂ ಸರಿ ಅವನು ಕರೆದಾಂತ ಪುಂಗಿನಾದಕ್ಕೆ ತಲೆದೂಗುವ ನಾಗಪ್ಪನಂತೆ ಅವನನ್ನು ಹಿಂಬಾಲಿಸಿ ಹೋಗಿಬಿಟ್ಟೆ. ಹೀಗೆಂದುಕೊಳ್ಳುತ್ತಾ ಆಗ್ಗೆ ಸುಮಾರು ಇಪ್ಪತೈದು ದಿನಗಳ ಹಿಂದೆ ನಡೆದ ಪ್ರಕರಣವನ್ನು ನೆನಪಿಸಿಕೊಂಡ. ಎಲ್ಲ ದೃಶ್ಯಗಳೂ ಕಣ್ಮುಂದೆ ಮರುಕಳಿಸಿದಂತಾಯಿತು.

ಚಂದ್ರು ಮಾಗಡಿ ತಾಲ್ಲೂಕ್ ಕಛೇರಿಯಲ್ಲಿ ಅಕೌಂಟೆಂಟಾಗಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ತಮ್ಮೂರಿಗೆ ಸಂಬಂಧಿಸಿದ ಹಲವಾರು ಕೆಲಸಗಳಿಗಾಗಿ ಸುಮಾರು ಇಪ್ಪತ್ತೈದು ಕಿ.ಮೀ. ದೂರದಲ್ಲಿದ್ದ ಹರಸೂರಿನಿಂದ ರೈತಾಪಿ ಕುಟುಂಬದ ವ್ಯಕ್ತಿ ಕೃಷ್ಣಪ್ಪ ಕಛೇರಿಗೆ ಬರುತ್ತಿದ್ದ. ಆತನು ಅದೇ ಊರಿನ ಪ್ರಾಥಮಿಕ ಶಾಲೆಯಲ್ಲಿಯೇ ಶಿಕ್ಷಕನಾಗಿದ್ದ. ಇತರೆ ವ್ಯವಹಾರದಲ್ಲೂ ಬುದ್ಧಿವಂತ. ತನ್ನ ಹಳ್ಳಿಯ ಜನರ ಕೆಲಸಗಳಿಗಾಗಿ ತಮ್ಮೂರಿಗೂ ಮಾಗಡಿಗೂ ಅಗಿಂದಾಗ್ಗೆ ಎಡತಾಕುತ್ತಿದ್ದ. ಇರಿಂದಾಗಿ ಇವನ ಪರಿಚಯ ಚಂದ್ರುವಿಗಾಗಿತ್ತು. ಒಳ್ಳೆಯ ಸ್ವಭಾವನಾದ್ದರಿಂದ ಪರಸ್ಪರ ಆತ್ಮೀಯತೆಯೂ ಬೆಳೆದಿತ್ತು. ಕೃಷ್ಣಪ್ಪನ ಜೊತೆಯಲ್ಲಿ ಹುಟ್ಟಿದ ಸಹೋದರರೂ ತಕ್ಕಮಟ್ಟಿಗೆ ವಿದ್ಯಾವಂತರಾಗಿದ್ದರು. ಅವನ ಹಿರಿಯಣ್ಣ ಅವರೂರಿನ ಪಕ್ಕದ ಹಳ್ಳಿಯಲ್ಲಿ ಶಾಲಾ ಮಾಸ್ತರನಾದರೆ, ಕಿರಿಯವನು ಊರಿನಲ್ಲಿಯೇ ಚಿಕ್ಕದೊಂದು ಅಂಗಡಿಯಿಟ್ಟು ವ್ಯಾಪಾರಮಾಡುತ್ತಿದ್ದ. ಜೊತೆಗೆ ಮನೆಯಲ್ಲಿ ಅವನು ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಿದ್ದ. ತಂದೆಯವರು ತೀರಿಕೊಂಡಿದ್ದರು. ತಾಯಿ ಹಿರಿಯರಿಂದ ತಮಗೆ ಬಂದಿದ್ದ ಮನೆಯಲ್ಲಿ ಪಾಲಿಗಿದ್ದ ಜಮೀನಿನ ಕಾರುಬಾರು ನಿಭಾಯಿಸಿಕೊಂಡು ವಾಸವಾಗಿದ್ದರು. ಯಾರ ಜೊತೆಯಲ್ಲಿ ಯಾರೂ ಇರಲಿಲ್ಲ. ಎಲ್ಲರೂ ಪ್ರತ್ಯೇಕವಾಗಿ ತಮ್ಮ ಬದುಕನ್ನು ನಡೆಸಿಕೊಂಡಿದ್ದರು. ಇವನ್ನೆಲ್ಲ ಚಂದ್ರುವಿನ ಬಳಿ ಕೃಷ್ಣಪ್ಪನೇ ಹೇಳಿಕೊಂಡಿದ್ದ ಹಾಗೂ ಆಗೀಗ ವ್ಯಯಕ್ತಿಕ ಕಷ್ಟಸುಖಗಳ ಬಗ್ಗೆ ಕೂಡ ವಿಚಾರ ವಿನಿಮಯ ನಡೆಯುತ್ತಿತ್ತು.

ಒಂದುದಿನ ಕೃಷ್ಣಪ್ಪ ಮನೆಗೆ ಧಾವಿಸಿ ಬಂದವನೇ “ಸಾರ್, ನಮ್ಮ ತಾಯಿಯ ಆರೋಗ್ಯ ಸರಿಯಿಲ್ಲ, ಹಠಾತ್ತನೆ ಸುಸ್ತಾಗಿಬಿಟ್ಟಿದ್ದಾರೆ. ಅವರನ್ನು ಇಲ್ಲಿನ ಆಶಾ ನರ್ಸಿಂಗ್ ಹೋಮಿಗೆ ಸೇರಿಸಿದ್ದೇನೆ. ಅಲ್ಲಿನ ಡಾಕ್ಟರು ಮಧುಕರ್ ತಮಗೆ ತುಂಬ ಪರಿಚಯದವರು ಎಂದು ಕೇಳಿದೆ. ದಯವಿಟ್ಟು ತಾವು ಬಂದು ಅವರಿಗೊಂದು ಮಾತು ಹೇಳಿದರೆ ಮುತುವರ್ಜಿ ವಹಿಸುತ್ತಾರೆ. ಪ್ಲೀಸ್ ಬನ್ನಿ ಸಾರ್” ಎಂದು ಅಂಗಲಾಚಿದ. ಅವನ ಮುಖದ ಛಾಯೆ ದಯನೀಯವಾಗಿತ್ತು. ಅದನ್ನು ಕಂಡು ಮನಸ್ಸು ಕರಗಿತು. ಅವನೊಡನೆ ನರ್ಸಿಂಗ್‌ಹೋಮಿಗೆ ಹೋದ ಚಂದ್ರು. ವಾರ್ಡಿನ ಎದುರಿಗೇ ಸಿಕ್ಕಿದರು ಡಾ ಮಧುಕರ್. ಚಂದ್ರು ಮಾತನಾಡಲು ಬಾಯಿ ತೆರೆಯುವ ಮುನ್ನವೇ ಅವರೇ “ಸಾರಿ ಕೃಷ್ಣಪ್ಪಾ, ಷಿ ಈಸ್ ನೊಮೋರ್. ವಿ ಟ್ರೈಡ್ ಅವರ್ ಬೆಸ್ಟ್, ಬಟ್ ನೊ ಯೂಸ್” ಎಂದು ನಿಸ್ಸಹಾಯಕರಾಗಿ ನುಡಿದರು. ತಾನು ಕೃಷ್ಣಪ್ಪನಿಗೆ ಏನೂ ಸಹಾಯ ಮಾಡಲಾಗಲಿಲ್ಲವಲ್ಲಾ ಎಂದು ಚಂದ್ರುವಿಗೆ ಮನಸ್ಸು ಪಿಚ್ಚೆಂದಿತು. ಅವನು ಬೇಸರ ಮಾಡಿಕೊಂಡದ್ದು ಕಂಡು ಕೃಷ್ಣಪ್ಪನೇ “ನಾನೇ ತಡವಾಗಿ ಕರೆದುಕೊಂಡು ಬಂದೆನೇನೋ, ನೀವೇನೂ ಮನಸ್ಸು ಚಿಕ್ಕದು ಮಾಡಿಕೊಳ್ಳಬೇಡಿ ಸಾರ್” ಎಂದು ಸಮಾಧಾನ ಹೇಳಿದ.

“ಸರಿಯಪ್ಪ ಮುಂದಿನ ಕೆಲಸ ನೋಡು, ದೇಹವನ್ನು ಊರಿಗೆ ಸಾಗಿಸಲು ವ್ಯವಸ್ಥೆ ಮಾಡು.” ಎಂದು ಚಂದ್ರುವೇ ಹೇಳಿದ. ನರ್ಸಿಂಗ್‌ಹೋಮಿನವರು ಬಾಡಿಯನ್ನು ನೀಟಾಗಿ ಪ್ಯಾಕ್ ಮಾಡಿಸಿ ತಯಾರು ಮಾಡಿದರು. ಅದು ಹೊಸದಾದ ಆಸ್ಪತ್ರೆಯಾದದ್ದರಿಂದ ಆಂಬುಲೆನ್ಸ್ ವ್ಯವಸ್ಥೆಯಿರಲಿಲ್ಲ. ಖಾಸಗಿ ವಾಹನದರ‍್ಯಾರೂ ಶವವನ್ನು ಸಾಗಿಸಲು ಸಿದ್ದರಿರಲಿಲ್ಲ. ಖಾಸಗಿ ಆಂಬುಲೆನ್ಸ್ ಸಂಸ್ಥೆಯವರು ಕೇಳಿದ ದುಬಾರಿ ದರವನ್ನು ಕೊಡಲಾಗದೆ ಖಾಸಗಿ ವಾಹನಗಳನ್ನು ವಿಚಾರಿಸಿದ ಕೃಷ್ಣಪ್ಪ. ಒಬ್ಬ ಖಾಸಗಿ ಟ್ಯಾಕ್ಸಿಯವನು ಬರಲೊಪ್ಪಿಕೊಂಡ. ಆದರೆ ಒಂದು ಶರತ್ತು. ಬಾಡಿಯನ್ನು ಡಿಕ್ಕಿಯೊಳಗಡೆ ಇರಿಸಬೇಕು. ಗಾಡಿಯೊಳಗಲ್ಲ. ಗತ್ಯಂತರವಿಲ್ಲದೆ. “ಇನ್ನೇನು ವ್ಯವಸ್ಥೆಯಾಯಿತಲ್ಲ ಹುಷಾರಾಗಿ ಹೋಗಪ್ಪಾ, ನಾನು ಮನೆಗೆ ಹೋಗುತ್ತೇನೆ. ಏನಾದರೂ ಹಣಕಾಸು ಬೇಕಿದ್ದರೆ ಕೇಳು” ಎಂದ ಚಂದ್ರು. “ಇಲ್ಲಾ ಸಾರ್ ಅದೆಲ್ಲ ಏನೂ ಬೇಡ ಆದರೆ ನನಗೆ ತಾಯಿಯನ್ನು ಟ್ರೀಟ್‌ಮೆಂಟಿಗೆಂದು ಕರೆತಂದು ಈಗ ನೋಡಿದರೆ.. ಮುಂದೇನೋ.. ಒಬ್ಬನಿಗೇ ದಿಕ್ಕೇ ತೋಚುತ್ತಿಲ್ಲ ಸಾರ್. ಜೊತೆಗೊಬ್ಬರಿದ್ದರೆ ಸ್ವಲ್ಪ ಧೈರ್ಯ ಬರುತ್ತೆ. ನನ್ನ ಕೈಬಿಡಬೇಡಿ ಸಾರ್. ಊರಿನವರೆಗೆ ನನ್ನ ಜೊತೆಯಲ್ಲಿ ಬನ್ನಿ” ಎಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡ.

ಚಂದ್ರುವಿಗೂ ಏನು ಮಾಡಲೂ ತೋಚಲಿಲ್ಲ. ಎಂತಹ ಸಂದಿಗ್ಧತೆಯಲ್ಲಿ ಸಿಕ್ಕಿ ಹಾಕಿಕೊಂಡೆ. ಪಾಪ ಕೃಷ್ಣಪ್ಪ ಏನೋ ಆಸೆಯಿಂದ ತಾಯಿಯನ್ನು ಕರೆತಂದು ಹೀಗಾಗಿ ಹೋಯ್ತಲ್ಲ. ಎಂತಹ ಆಘಾತ!. ಅವನು ಹೇಳಿದಂತೆ ಹೆಣದ ಜೊತೆಯಲ್ಲಿ ಪ್ರಯಾಣ ಒಬ್ಬಂಟಿಯಾಗಿ ಕಷ್ಟಕರವಾದದ್ದೇ. ಏನೋ ಅನ್ನಿಸಿತು, ಮನೆಗೆ ಫೋನ್ ಮಾಡಿ ತಾನು ತಡವಾಗಿ ಬರುತ್ತೇನೆ ಎಂದು ತಿಳಿಸಿ ಕೃಷ್ಣಪ್ಪನೊಡನೆ ಹೊರಟೇ ಬಿಟ್ಟ. ದಾರಿಯಲ್ಲಿ ಹೆಣವನ್ನು ಗ್ರಾಮದೊಳಕ್ಕೆ ಅಥವಾ ಮನೆಗಾಗಲಿ ತೆಗೆದುಹೋಗುವಂತಿಲ್ಲ. ಇದನ್ನು ಕೃಷ್ಣಪ್ಪನಿಂದ ಕೇಳಿದಾಗ ಮುನ್ನೆಚ್ಚರಿಕೆಯಾಗಿ ದಾರಿಯಲ್ಲಿದ್ದ ಒಂದು ಅಂಗಡಿಯಲ್ಲಿ ಒಂದು ಟಾರ್ಚು ಮತ್ತು ಕೆಲವು ಬಾಳೆಹಣ್ಣು, ಒಂದು ಪ್ಯಾಕೆಟ್ ಬಿಸ್ಕೀಟ್, ಒಂದು ದೊಡ್ಡ ನೀರಿನ ಬಾಟಲಿಯನ್ನು ತೆಗೆದಿಟ್ಟುಕೊಂಡ ಚಂದ್ರು. ಕೃಷ್ಣಪ್ಪ ಪ್ರಯಾಣದ ವೇಳೆಯಲ್ಲಿ ಯರ‍್ಯಾರಿಗೋ ಫೋನ್ ಮಾಡುತ್ತಿದ್ದ. ತನ್ನಲ್ಲೇ ಏನೋ ಗುಣಗುಣಿಸುತ್ತಿದ್ದ. ಚಿಂತಾಕ್ರಾಂತನಾಗಿದ್ದ. ಅದು ಸಹಜವೇ ಅನ್ನಿಸುತು ಚಂದ್ರುವಿಗೆ.

“ಸಾರ್, ನೋಡಿ ನನ್ನ ಅಣ್ಣ ತಮ್ಮಂದಿರು, ವಿಷಯ ತಿಳಿಸೋಣವೆಂದರೆ ಆ ನನ್ನ ಮಕ್ಕಳು ಒಬ್ಬನೂ ಫೋನ್ ಎತ್ತುತ್ತಲೇ ಇಲ್ಲ. ಹೋದಮೇಲೆ ಏನಾದರೂ ಗಲಾಟೆ ಮಾಡಿದರೆ ಎಂಬ ಆತಂಕ. ಏನು ಮಾಡಬೇಕೆಂಬುದೇ ಹೊಳೆಯುತ್ತಿಲ್ಲ. ಊರಿನ ಹೊರಗಡೆ ಇರಿಸಲು ಅವರು ಏನಾದರೂ ಏರ್ಪಾಡು ಮಾಡುತ್ತಾರೆಂದರೆ ಅವರ ವರ್ತನೆ ನೋಡಿದರೆ ಏನಾಗುತ್ತದೋ ಎಂಬ ಭಯ ಕಾಡುತ್ತಿದೆ. ಏಕಾದರೂ ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆನೋ ಅನ್ನಿಸುತ್ತಿದೆ.” ಎಂದು ಹಲುಬಿದ. ಅದನ್ನು ನೋಡಿ ನಾನೇಕೆ ಇವನ ಜೊತೆ ಬರಲೊಪ್ಪಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡೆನೋ ಎಂದೆನ್ನಿಸಿತು ಚಂದ್ರುವಿನ ಒಳ ಮನಸ್ಸು.

“ಛೇ ಛೇ ಬಿಡ್ರು ಅನ್ನಿ, ನೀವೇನು ತಪ್ಪು ಮಾಡಿಲ್ಲ. ತಾಯಿಯನ್ನು ಕರೆತರದಿದ್ದರೆ ತಪ್ಪಾಗುತ್ತಿತ್ತು. ನಿಮ್ಮ ಕರ್ತವ್ಯ ನೀವು ಮಾಡಿದ್ದೀರಿ. ಆದರೆ ವಿಧಿಯ ಮುಂದೆ ನಾವೆಲ್ಲ ಎಷ್ಟರವರು. ಚಿಂತೆಮಾಡಬೇಡಿ ಹೇಗಿದ್ದರೂ ಊರಿನಲ್ಲಿಯೇ ಇರುವ ಇನ್ನೊಬ್ಬ ನಿಮ್ಮ ಸೋದರನ ಮನೆಗೇ ಹೋಗಿ ನೀವೇ ಹೇಳಿ ಬರುವಿರಂತೆ. ಅಣ್ಣನೂ ಅಲ್ಲೇ ಇದ್ದಾರಲ್ಲ, ನಿಮ್ಮ ಮನೆಯೂ ಅಲ್ಲಿಯೇ ಇದೆಯಲ್ಲವೇ? ಅವರ ಮನೆಯವರು ಮಕ್ಕಳು ಇದ್ದೇ ಇರುತ್ತಾರೆ.” ಎಂದು ಸಮಧಾನ ಹೇಳಿದ ಚಂದ್ರು.

“ಏನಂತ ಹೇಳಲಿ ಸಾರ್, ನನ್ನ ಮನೆಯವರು, ಮಕ್ಕಳು ತವರಿನ ಕಡೆಯವರೊಡನೆ ಒಂದು ಮದುವೆಗೇಂತ ಹೋಗಿದ್ದಾರೆ. ಈಗ ಸುದ್ಧಿ ತಿಳಿದರೂ ಅವರೆಲ್ಲ ಬೆಳಗ್ಗೇನೇ ಬರಲಿಕ್ಕಾಗುವುದು.” ಎಂದು ಪರಿತಪಿಸಿದ ಕೃಷ್ಣಪ್ಪ.
“ಹೇಗೋ ಆಗುತ್ತೆ ಬಿಡಿ ಕೃಷ್ಣಪ್ಪ, ನಿಭಾಯಿಸೋಣ” ಎಂದು ಅಭಯವಿತ್ತು ಮೌನಕ್ಕೆ ಜಾರಿದ ಚಂದ್ರು.

ಅಂತೂ ಇಂತೂ ನಿಧಾನವಾಗಿ ಸಾಗಿ ಊರನ್ನು ತಲುಪಿದ್ದಾಯಿತು. ಅಷ್ಟೊತ್ತಿಗೆ ಕತ್ತಲಾವರಿಸುತ್ತಿತ್ತು. ಊರ ಹೊರಗಿನ ಪಾಳುಬಿದ್ದ ಮಂಟಪವೊಂದರಲ್ಲಿ ಬಾಡಿ ಇಳಿಸಿ ತನ್ನ ಬಾಡಿಗೆ ಪಡೆದು ಟ್ಯಾಕ್ಸಿವಾಲಾ ಹೊರಟುಹೋದ. ಸುತ್ತಮುತ್ತ ಒಂದು ನರಪಿಳ್ಳೆಯೂ ಕಾಣಿಸಲಿಲ್ಲ. ಕತ್ತಲು ದಟ್ಟವಾಗತೊಡಗಿತು. ಸ್ವಲ್ಪ ದೂರದಲ್ಲಿ ಒಬ್ಬ ಬೀಡಾಡಿ ವ್ಯಕ್ತಿ ಅವರಿದ್ದಲ್ಲಿಗೆ ಓಡಿಬಂದ. ಅವನಿಗೆ ಪರಿಸ್ಥಿತಿಯ ಅರಿವಾಗದಿದ್ದರೂ ಸುತ್ತಮುತ್ತಲೂ ಬಿದ್ದಿದ್ದ ಕಡ್ಡಿ, ಪುಳ್ಳೆ, ಸೊಪ್ಪುಸೆದೆ ಒಟ್ಟುಗೂಡಿಸಿ ಅದಕ್ಕೆ ಬೆಂಕಿಹಚ್ಚಿದ. ತನಷ್ಟಕ್ಕೆ ತಾನೇ ಏನೋ ಗೊಣಗೊಣ ಅಂದುಕೊಂಡು ನಕ್ಕ. ಅಲ್ಲೇ ಮಲಗಿಸಿದ್ದ ಕಳೇಬರವನ್ನು ಹತ್ತಿರ ಹೋಗಿ ಬಗ್ಗಿ ನೋಡಿ ಸಮೀಪವೇ ಕುಳಿತುಕೊಂಡ.

ಅವನನ್ನು ನೋಡಿ ಕೃಷ್ಣಪ್ಪ “ಈತ ಯಾವುದೋ ಊರಿನಿಂದ ಬಂದವನು. ಬುದ್ಧಿ ಸ್ಥಿಮಿತವಿಲ್ಲ. ಹಾಗೆಂದು ಯಾರ ತಂಟೆಗೂ ಹೋಗುವುದಿಲ್ಲ. ಅಪಾಯಕಾರಿಯಲ್ಲ. ಯಾರಾದರೂ ಏನನ್ನಾದರೂ ಕೊಟ್ಟರೆ ತಿನ್ನುತ್ತಾನೆ. ಇಲ್ಲಿ ಮಲಗಿರುತ್ತಾನೆ. ಇದೇ ಅವನ ಖಾಯಂ ಜಾಗ. ಆದರೆ ಒಂದು ಅಚ್ಚರಿಯ ಸಂಗತಿ, ಒಂದುದಿನವೂ ಸ್ನಾನ ಮಾಡುವುದನ್ನು ತಪ್ಪಿಸುವುದಿಲ್ಲ. ಅದೆಲ್ಲಿ ನೀರಿನ ಜಾಗ ಹುಡುಕಿಕೊಂಡು ಹೋಗುತ್ತಾನೋ ಗೊತ್ತಿಲ್ಲ. ಬಂದ ನಂತರ ಮುರಿದು ಹೋಗಿರೋ ಒಂದು ಮೂರ್ತಿ ಇಟ್ಟುಕೊಂಡಿದ್ದಾನೆ. ಅದಕ್ಕೆ ಸಿಕ್ಕಿದ ಹೂಪತ್ರೆ ಸಿಕ್ಕಿಸುತ್ತಾನೆ. ಅದೇ ಅವನ ಪೂಜೆ. ಅವನಾಡುವ ಮಾತುಗಳೇನೂ ಅರ್ಥವಾಗುವುದಿಲ್ಲ. ನಿರುಪದ್ರವಿ ಪ್ರಾಣಿ” ಎಂದು ಹೇಳಿದ ಕೃಷ್ಣಪ್ಪ.

“ಸರಿ ಕೃಷ್ಣಪ್ಪ, ಈಗಲಾದರೂ ನಿಮ್ಮ ಕಡೆಯವರನ್ನು ಸಂಪರ್ಕಿಸಿ ಕರೆತನ್ನಿ. ಈ ನಿರ್ಜನ ಪ್ರದೇಶದಲ್ಲಿ” ಎನ್ನುತ್ತಿದ್ದ ಚಂದ್ರುವಿನ ಮಾತಿಗೆ ಅಡ್ಡ ಬಾಯಿಹಾಕಿ “ ನಾನು ಹೀಗೆ ಹೇಳ್ತೀನಿ ಅಂತ ಬೇಸರಪಟ್ಟುಕೊಳ್ಳಬೇಡಿ ಸಾರ್. ಫೋನಿಗೆ ಸಿಕ್ಕುತ್ತಿಲ್ಲ, ನಾನೇ ಊರೊಳಗೆ ಹೋಗಿ ಕರೆತರುತ್ತೇನೆ. ಅಲ್ಲಿಯವರೆಗೆ..” ಎಂದು ರಾಗವೆಳೆದ ಕೃಷ್ಣಪ್ಪ.
ಅವನು ಮಾತು ಕೇಳಿ ಚಂದ್ರುವಿಗೆ ಒಂದುಕ್ಷಣ ಎದೆ ಝಲ್ ಎಂದಿತು. ಸಾವರಿಸಿಕೊಂಡು ಮೊಂಡು ಧೈರ್ಯಮಾಡಿ “ಆಯ್ತು ಹೋಗಿ ಬೇಗ ಬನ್ನಿ, ತಡಮಾಡಬೇಡಿ” ಎಂದು ಅವನನ್ನು ಕಳಿಸಿಕೊಟ್ಟ.

ಕೃಷ್ಣಪ್ಪ ಅತ್ತ ಹೋಗುತ್ತಿದ್ದಂತೆ ಚಂದ್ರು ಎದುರಿಗೆ ಕುಳಿತಿದ್ದ ಅಪರಿಚಿತ ವ್ಯಕ್ತಿಯ ಕಡೆಗೆ ಕಣ್ಣು ಹಾಯಿಸಿದ. ಊಹುಂ ಆತ ಬಾಹ್ಯ ಪ್ರಪಂಚದ ಅರಿವೇ ಇಲ್ಲದಂತೆ ಹೆಣದ ಪಕ್ಕದಲ್ಲಿ ಕುಳಿತು ಅದನ್ನೇ ನೋಡುತ್ತಿದ್ದ. ಹಚ್ಚಿದ ಬೆಂಕಿ ಆರುತ್ತ ಬಂದಿದ್ದರಿಂದ ಮತ್ತಷ್ಟು ಪುಳ್ಳೆ ಕಡ್ಡಿಗಳನ್ನು ಆರಿಸಿ ತಂದು ಒಟ್ಟಿದ. ಅವತ್ತು ಬೆಳಗ್ಗೆ ಕಛೇರಿಗೆ ರಜೆ ಇದ್ದದ್ದರಿಂದ ನಿಧಾನವಾಗಿ ಎದ್ದು ಸ್ನಾನಪೂಜೆಗಳನ್ನು ವಿರಾಮವಾಗಿ ಮಾಡಿ ನಿಧಾನವಾಗಿಯೇ ತಿಂಡಿ ತಿಂದಿದ್ದ. ಹಾಗೆಯೇ ಮಧ್ಯಾನ್ಹದ ಊಟವೂ ಲೇಟಾಗಿಯೇ ಆಗಿತ್ತು. ಅದರೀಗ ತಿಂದದ್ದೆಲ್ಲ ಕರಗಿದಂತಾಗಿ ಹೊಟ್ಟೆ ಚುರುಗುಟ್ಟತೊಡಗಿತು. ಗಾಳಿ ಬೀಸುತ್ತಿದ್ದರಿಂದ ಥಂಡಿಕೂಡ ಹೆಚ್ಚಾಗುತ್ತಿತ್ತು. ಉರಿಯುತ್ತಿದ್ದ ಬೆಂಕಿಯ ಹತ್ತಿರಕ್ಕೆ ಸರಿದು ಕುಳಿತುಕೊಂಡ. ಸುಮಾರು ಹೊತ್ತಾದರೂ ಕೃಷ್ಣಪ್ಪನ ಸುಳಿವೇ ಇಲ್ಲ. ಬಾಯಾರಿದಂತಾಯಿತು. ಇಟ್ಟುಕೊಂಡಿದ್ದ ಬಾಟಲಿಯಿಂದ ನೀರು ಕುಡಿದ. ಬಾಳೇ ಹಣ್ಣು ಬಿಸ್ಕತ್ತು ನೆನಪಾದರೂ ತಿನ್ನಲು ಏಕೋ ಮನಸ್ಸು ಬರಲಿಲ್ಲ. ಚೀಲದಿಂದ ಅವನ್ನು ತೆಗೆಯದೇ ಹಾಗೇ ಕುಳಿತ.

ಯಾರೋ ಕರೆದಂತಾಗಿ ತಲೆಯೆತ್ತ ನೋಡಿದ. ಎದುರಿಗೆ ಆ ಮರುಳು ಮನುಷ್ಯ ತನ್ನ ಕೈಯಲ್ಲಿ ಏನನ್ನೊ ಹಿಡಿದು ಚಂದ್ರುವಿಗೆ ಕೊಡಲು ಕೈಚಾಚಿದ. ಅಲ್ಲಿ ಕಂಡದ್ದೇನು? ಕಪ್ಪಗೆ ತಲೆಕೂದಲಿನ ಬಣ್ಣಕ್ಕೆ ತಿರುಗಿದ್ದ ಎರಡು ಬಾಳೇ ಹಣ್ಣಿದ್ದವು. ಬೇಡವೆಂದರೂ ಒತ್ತಾಯಮಾಡಿ ಅವನ ಕೈಯಲ್ಲಿಟ್ಟು ತಿನ್ನುವಂತೆ ಸಂಜ್ಞೆ ಮಾಡಿದ ಮರುಳ. ಭಯದಿಂದ ತೆಗೆದಕೊಂಡು ಸಿಪ್ಪೆ ಸುಲಿದು ತಿಂದು ಮತ್ತೊಮ್ಮೆ ನೀರು ಕುಡಿದ ಚಂದ್ರು. ಅದನ್ನು ನೋಡಿ ಆ ಮರುಳ ಚಪ್ಪಾಳೆ ತಟ್ಟಿ ನಕ್ಕ. ಮತ್ತೆ ಹೆಣದ ಮುಂದೆ ಹೋಗಿ ಕುಳಿತುಕೊಂಡ. ಮರುಳನೆಂದು ಜನರು ಕರೆದರೂ ಮನುಷ್ಯತ್ವದಿಂದ ತನ್ನೊಡನೆ ನಡೆದುಕೊಂಡ. ಬುದ್ಧಿ ಇದ್ದವರನ್ನು ಕರೆತರಲು ಹೋದವ ಇನ್ನೂ ಬರಲಿಲ್ಲವಲ್ಲಾ ಎಂದುಕೊಳ್ಳುತ್ತಿದ್ದಂತೆ ದೂರದಲ್ಲಿ ಕ್ರಷ್ಣಪ್ಪ ಬರುತ್ತಿರುವುದು ಕಾಣಿಸಿತು. ಆದರೆ ಅವನ ಜೊತೆಯಲ್ಲಿ ಯಾರೂ ಕಾಣಿಸಲಿಲ್ಲ.

ಬಂದವನೇ “ಸಾರಿ ಸಾರ್, ತಡವಾಯ್ತು ಎಂದು ಹೇಳಿ ತಾನು ತಂದಿದ್ದ ಚಿನ್ನಾಚಾರಿಯ ಇಕ್ಕುಳದಿಂದ ಡೆಡ್‌ಬಾಡಿಯ ಹತ್ತಿರ ಹೋದ. ಹೆಣದ ಮೂಗಿನಲ್ಲಿದ್ದ ಚಿನ್ನದ ನತ್ತನ್ನು ಬಿಡಿಸಿ ತೆಗೆದು ತನ್ನ ಪ್ಯಾಂಟಿನ ಜೇಬಿಗಿಳಿಸಿದ. ಮತ್ತೇನನ್ನೋ ತೆಗೆದು ಎರಡನ್ನೂ ಒಂದು ಕರವಸ್ತ್ರದಲ್ಲಿ ಕಟ್ಟಿ ಚಂದ್ರುವಿನ ಬಳಿಗೆ ಬಂದು “ಸಾರ್ ಇದು ನಮ್ಮ ತಾಯಿಯ ಕಿವಿಯ ಓಲೆಗಳು ಮತ್ತು ಮೂಗುಬೊಟ್ಟು. ಈ ಗಂಟು ನಿಮ್ಮ ಜೇಬಿನಲ್ಲಿರಲಿ. ನಾನು ಕೇಳುವವರೆಗೂ ಕೊಡಬೇಡಿ.” ಎಂದು ಹೇಳಿದ ಕೃಷ್ಣಪ್ಪ. ಚಂದ್ರುವಿಗೆ ಇಂತಹ ಸಮಯದಲ್ಲಿ ಅವನ ಕೃತ್ಯ ಅಸಹ್ಯವೆನಿಸಿತು. ವಿಧಿಯಿಲ್ಲ. ಕರವಸ್ತ್ರವನ್ನು ತನ್ನ ಜೀಬಿಗಿಳಿಸಿದ.

“ಕೃಷ್ಣಪ್ಪನೋರೆ ನಿಮ್ಮ ಸೋದರ‍್ಯಾರೂ ಸಿಗಲಿಲ್ಲವೇ? ಒಬ್ಬರೇ ಬಂದ್ರಲ್ಲಾ?” ಕೇಳಿದ ಚಂದ್ರು.
“ಸಾರ್ ನೀವ್ಯಾವ ಕಾಲದಲ್ಲಿದ್ದೀರಿ, ನಮ್ಮ ತಾಯಿಯನ್ನು ಯಾರೂ ನೋಡಿಕೊಳ್ಳುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ನಾನೇ ಹೋಗಿ ನೋಡುತ್ತಿದ್ದದ್ದು. ಅವರ ಕಿವಿಯಲ್ಲಿನ ಓಲೆಗಳು ಮೂಗುಬೊಟ್ಟು ನನಗೇ ಸೇರಬೇಕು. ಅದಕ್ಕೇ ನಾನೀಗ ನನ್ನಮ್ಮನ ಮನೆಗೆ ಹೋಗಿದ್ದೆ. ಅಲ್ಲಿದ್ದ ರಾಗಿ ತುಂಬಿದ್ದ ಗೂಡೆಯಲ್ಲಿ ಓಲೆಗಳು ಸಿಕ್ಕಿದವು. ಹಾಗೇ ಮೂಗುಬೊಟ್ಟು ತೆಗೆಯಲು ಅಕ್ಕಸಾಲಿಗನ ಮನೆಗೆ ಹೋಗಿ ಇಕ್ಕಳ ತೆದುಕೊಂಡು ಬಂದೆ. ಎರಡನ್ನೂ ಈಗ ನನ್ನ ಬಳಿ ಬಂದೋಬಸ್ತು ಮಾಡಿಕೊಂಡೆ. ಬೆಳಗ್ಗೆಯಾದರೆ ಮುಗೀತು, ಏನೂ ಸಿಕ್ಕುತ್ತಿರಲಿಲ್ಲ. ನಮ್ಮಮ್ಮ ರಾಗಿಗೂಡೆಯಲ್ಲಿ ಓಲೆಗಳನ್ನಿಡುವುದನ್ನು ಕಂಡಿದ್ದೆ. ಅದಕ್ಕೇ ಈಗಲೇ ಹೋಗಿದ್ದು ಹುಡುಕಿ ತರಲು. ಇನ್ನು ಚಿಂತೆಯಿಲ್ಲ ಜಮೀನು ಮನೆ ಮೂರೂಜನಕ್ಕೆ ಸೇರಿದ್ದು.” ಇನ್ನು ಏನೋ ಹೇಳುತ್ತಿದ್ದುದನ್ನು ಕಂಡು ಚಂದ್ರುವಿಗೆ ನಖಶಿಖಾಂತ ಸಿಟ್ಟುಬಂದು “ರೀ ಕೃಷ್ಣಪ್ಪಾ ನಿಮ್ಮ ಪ್ರವರ ನಿಲ್ಲಿಸಿ, ನಿಮ್ಮ ಕಡೆಯರ‍್ಯಾರೂ ಸಿಗಲಿಲ್ಲವೇ? ಅವರೇನೆಂದರು?” ಎಂದು ಏರು ದನಿಯಲ್ಲಿ ಕೇಳಿದ.

“ ಓ ಆ ವಿಷಯಾನಾ, ದೊಡ್ಡಣ್ಣನ ಮನೆಗೆ ಹೋದೆ. ಅವನಿಗೆ ವಿಷಯ ತಿಳಿಸುತ್ತಿದ್ದಂತೆ ಅವನು ಸಿಟ್ಟಿಗೆದ್ದು ಅಮ್ಮನ್ನ ಕರೆದುಕೊಂಡು ಹೋಗೂಂತ ನಿನಗೆ ಯಾರೋ ಹೇಳಿದ್ದು? ಸಾಯಿಸಿ ಕರೆತಂದ್ಯಾ, ನಾನು ಬರಲ್ಲಾ ನೀನೇ ಹೆಣಕಾಯಿ” ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿ ಬಾಗಿಲನ್ನು ನನ್ನ ಮುಖದ ಮೇಲೆ ರಪ್ಪೆಂದು ಹಾಕಿಬಿಟ್ಟ. ಎರಡನೆಯವನು ವಿಷಯ ಕೇಳಿ “ಏನು ಅಮ್ಮ ಸತ್ತುಹೋದಳೇ? ಆಸ್ಪತ್ರೆಗೆ ಯಾಕೋ ಕರೆದುಕೊಂಡು ಹೋದೆ. ಇಲ್ಲೇ ಇನ್ನು ಸ್ವಲ್ಪ ದಿನ ಇದ್ದಿದ್ದರೆ ಇಲ್ಲೇ ತೀರಿಹೋಗ್ತಿದ್ದಳು. ಸುಮ್ಮನೆ ವೃಥಾಖರ್ಚು. ಅದೆಲ್ಲ ನಾನಂತೂ ಕೊಡಲ್ಲ. ಸರಿಯಾಗಿ ಕೇಳಿಸಿಕೋ, ಆಸ್ತಿಭಾಗ ಆಗೋತನಕ ಹೆಣ ಎತ್ತಲಿಕ್ಕೆ ನಾನು ಬಿಡಲ್ಲ. ಸಂಸ್ಕಾರ ಹೇಗೆ ಮಾಡ್ತೀಯೋ ನಾನೂ ನೋಡ್ತೀನಿ.” ಎಂದು ಅಬ್ಬರಿಸಿ ಬಾಗಿಲು ಹಾಕಿಕೊಂಡ. ಇದೇಸಾರ್ ನಡೆದದ್ದು. ಬೆಳಗ್ಗೆ ರ‍್ತೀನಿ. ನಖರಾಗಿಖರಾ ಮಾಡಿದ್ರೆ ಹುಟ್ಟಲಿಲ್ಲಂತ ಅನ್ನಿಸಿಬಿಡ್ತೀನಿ ಅಂತ ಮುಚ್ಚಿದ ಬಾಗಿಲಿನ ಹಿಂದಿನಿಂದ ಕೂಗಿ ಹೇಳಿದ ಸಾರ್. ನನಗೆ ಹೆಣಕಾಯೋ ಗತಿ ಬಂತು” ಎಂದ ಕೃಷ್ನಪ್ಪ.

“ಹುಂ ನಿಮ್ಮ ಹಣೆಯಬರಹಕ್ಕೆ ನಾನ್ಹೇಗ್ರೀ ಹೊಣೆ. ನನಗೂ ಬಂತಲ್ಲ ಹೆಣ ಕಾಯೋಗತಿ. ಹಿಂದೆಮುಂದೆ ನೋಡದೆ ನಿಮ್ಮ ಜೊತೆ ಬಂದಿದ್ದಕ್ಕೆ ನನ್ನ ಕರ್ಮ” ಎಂದು ಬೈದುಕೊಂಡು ಬೆಂಕಿಯ ಮುಂದೆ ಹೋಗಿ ಕುಳಿತುಕೊಂಡ ಚಂದ್ರು.
ಇನ್ನೇನು ಹೇಳುತ್ತಿದ್ದನೋ ನಿಲ್ಲಿಸಿ ಕೃಷ್ಣಪ್ಪ ಚೀಲದಿಂದ ಬಿಸ್ಕತ್ತು ಬಾಳೇಹಣ್ಣುಗಳನ್ನು ತೆಗೆದು ಚಂದ್ರುವಿನ ಮುಂದಿಟ್ಟು “ತಿನ್ನಿ ಸಾರ್, ತೊಗೊಳ್ಳಿ ಮನೆಯಿಂದ ಒಂದೆರಡು ಕಂಬಳಿ ತಂದಿದ್ದೇನೆ ಹೊದೆಯಿರಿ” ಎಂದು ಹೇಳಿದ.

“ಕೃಷ್ಣಪ್ಪಾ ನನಗೇನೂ ತಿನ್ನಬೇಕೆಂದು ಅನ್ನಿಸುತ್ತಿಲ್ಲ. ನಿಮ್ಮ ಆ ಮರುಳು ಮನುಷ್ಯ ನನಗೆ ಆಗಲೇ ಎರಡು ಬಾಳೇಹಣ್ಣು ತಂದುಕೊಟ್ಟಿದ್ದ. ತಿಂದಿದ್ದೇನೆ. ನೀವು ಬೇಕಾದರೆ ತಿನ್ನಿ” ಎಂದು ಒಂದು ಕಂಬಳಿ ತೆಗೆದುಕೊಂಡು ಹೊದೆದುಕೊಂಡು ಕುಳಿತ ಚಂದ್ರಪ್ಪ. ಅವರಮ್ಮನ ಹೆಣ ಮುಂದಿಟ್ಟುಕೊಂಡು ಕೃಷ್ಣಪ್ಪನ ಸೋದರರು ನಡೆದುಕೊಂಡ ರೀತಿಕೇಳಿ ಹೇಸಿಗೆಯಾಯಿತು. ಇಂಥ ಮಕ್ಕಳನ್ನು ಹೆತ್ತ ತಾಯಿಗೆ ಈ ದುರ್ಗತಿ ಸಹಜವೇ. ಬಂದಿದ್ದಾಗಿದೆ ಇನ್ನೇನು ಮಾಡಲಿಕ್ಕಾಗದು. ಬೆಳಗಾದ ಕೂಡಲೇ ಈ ಸ್ಥಳದಿಂದ ಪೇರಿ ಕೀಳಬೇಕೆಂದು ನಿರ್ಧರಿಸಿ ಕಣ್ಮುಚ್ಚಿದ. ಜೊಂಪು ಆವರಿಸಿತು.

ಚೆನ್ನಾಗಿ ಕಣ್ತೆರೆದಾಗ ಅಬ್ಬರದ ಕೂಗಾಟ ಕೇಳಿಸಿತು. ಆಗಲೇ ಬೆಳಕು ಹರಿದಿತ್ತು. ಉರಿನ ಕೆಲವು ಜನರೊಂದಿಗೆ ಬೀಸುಕಾಲಾಕುತ್ತಾ ಮಾತನಾಡಿಕೊಂಡು ಬರುತ್ತಿದ್ದವರನ್ನು ಗುರುತಿಸಿದ. ಅವರೇ ಕೃಷ್ಣಪ್ಪನ ಸೋದರರು. ರಾತ್ರಿ ನಡೆದ ಅವಾಂತರಗಳೆಲ್ಲ ನೆನಪಾಯಿತು. ಸದ್ದು ಮಾಡದೇ ನಡೆಯುವುದನ್ನು ಗಮನಿಸತೊಡಗಿದ. ಊರಿನ ಮುಖಂಡರೊಡನೆ ಬಂದಿದ್ದ ಅವರುಗಳು ತಮ್ಮ ವಾಗ್ಯುದ್ಧವನ್ನು ಮುಗಿಸಿ ಸಂಸ್ಕಾರ ಕಾರ್ಯಕ್ಕೆ ಮುಂದಾದರು. ಅದು ಮುಗಿಯುವುದಕ್ಕಾಗಿ ಕಾಯುತ್ತಿದ್ದ ಚಂದ್ರು ಮತ್ಯಾರಕಡೆಗೂ ನೋಡದೆ ಊರುಬಿಟ್ಟು ಬಸ್‌ಸ್ಟ್ಯಾಂಡಿಗೆ ನಡೆದು ಸಿಕ್ಕಿದ ಮೊದಲ ಬಸ್ಸಿನಲ್ಲಿ ಊರಿನ ಕಡೆಗೆ ಪ್ರಯಾಣಿಸಿದ. ಮನೆ ತಲುಪಿ ಸ್ನಾನಮಾಡಿ ಸೇರಿದಷ್ಟು ತಿಂದು ಮಲಗಿದವನು ಮಾರನೆಯ ದಿನ ಬೆಳಗ್ಗೆಗೇ ಎದ್ದಿದ್ದು. ಅಷ್ಟರಲ್ಲಾಗಲೇ ಕೃಷ್ಣಪ್ಪನಿಂದ ಎಷ್ಟೋ ಪೋನ್ ಕಾಲ್‌ಗಳು ಬಂದಿದ್ದವು. ಉತ್ತರಿಸುವ ಗೋಜಿಗೇ ಹೋಗಲಿಲ್ಲ.

ಎಂದಿನಂತೆ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ಮಗ್ನನಾದ ಚಂದ್ರಪ್ಪ. ನಾಲ್ಕಾರು ದಿನಗಳ ನಂತರ ಕೃಷ್ಣಪ್ಪನ ಸವಾರಿ ಮನೆಗೆ ಬಂತು. ಮತ್ತೆ ಆಸ್ತಿ ಹಂಚಿಕೆ, ಮನೆ ಪಾಲುದಾರಿಕೆ ಬಗ್ಗೆ ಕೊರೆಯದೇ “ಸಾರ್ ಈಗೆಲ್ಲ ಸರಿಯಾಗಿದ್ದಾರೆ. ಹನ್ನೊಂದನೆಯ ದಿನದ ಕಾರ್ಯವಿದೆ ದಯವಿಟ್ಟು ಬರಬೇಕು” ಎಂದು ಕರೆದ.

ಎಲ್ಲವನ್ನೂ ಕೇಳಿದ ಚಂದ್ರು ನಿಮಗೆ ಒಳ್ಳೆಯದಾಗಲಿ ಎನ್ನುತ್ತಾ ತನಗೆ ಆದಿನ ಕೊಟ್ಟಿದ್ದ ಕರವಸ್ತ್ರದಲ್ಲಿ ಕಟ್ಟಿದ್ದ ಓಲೆಗಳು ಮತ್ತು ಮೂಗುಬೊಟ್ಟಿನ ಗಂಟನ್ನು ಕೃಷ್ಣಪ್ಪನಿಗೆ ಕೊಟ್ಟು ಕಳುಹಿಸಿದ. ಕಾರ್ಯಕ್ಕೆ ಹೋಗಲಿಲ್ಲ. ಈಗ ನೋಡಿದರೆ ಮತ್ತೆ ಕೃಷ್ಣಪ್ಪ ಬಂದಿದ್ದಾನೆ ಎಂದು ಆಲೋಚಿಸುತ್ತಿದ್ದಂತೆ “ಸಾರ್ ಯಾಕೆ ಸಾರ್, ಮುಂದಿನ ಬಾಗಿಲು ಹಾರುಹೊಡೆದು ಹೀಗೆ ಕುಳಿತಿದ್ದೀರಿ? ಎಂದು ಭುಜ ಹಿಡಿದು ಅಲ್ಲಾಡಿಸಿದಾಗಲೇ ಚಂದ್ರು ವಾಸ್ತವಕ್ಕೆ ಬಂದಿದ್ದು.
“ಓ ಕೃಷ್ಣಪ್ಪ, ಬನ್ನಿ ಎಂದು ನನ್ನಾಕೆ ಪಕ್ಕದ ಮನೆಯವರೊಂದಿಗೆ ಮಾತನಾಡಲು ಬಾಗಿಲು ತೆರದು ಹೋಗಿರಬೇಕು. ನಾನಿಲ್ಲೇ ಇದ್ದೆನಲ್ಲ ಎಂಬ ಧೈರ್ಯ” ಎಂದು ಹೇಳಿ “ಏನು ಬಂದದ್ದು ವಿಷಯ?” ಎಂದು ವಿಚಾರಿಸಿದ.
“ಏನಿಲ್ಲ ಸಾರ್ ಮುಂದಿನ ವಾರ ನಮ್ಮ ತಾಯಿಯ ತಿಂಗಳ ತಿಥಿ. ಅದಕ್ಕೆ ತಮ್ಮನ್ನು ಕರೆಯಲು ಬಂದೆ. ಹನ್ನೊಂದನೇ ದಿವಸಕ್ಕೆ ಬರಲಿಲ್ಲವಲ್ಲಾ, ಈಗಲಾದರೂ ಬನ್ನಿ. ನಿಮಗೆ ನಂಬಿಕೆ ಇದೆಯೋ ಇಲ್ಲವೋ ಆ ದಿನವೆಲ್ಲ ನಮ್ಮಮ್ಮನ ಕಳೇಬರದೊಟ್ಟಿಗೆ ನನ್ನೊಡನೆ ಕಾಯುತ್ತಾ ಕುಳಿತಿದ್ದಿರಿ. ಶ್ರಾದ್ಧದ ದಿನ ಬಂದು ಧೂಪ ಹಾಕಿ ಅವರಿಗೆ ಶ್ರದ್ದಾಂಜಲಿ ಕೋರಿದರೆ ಅವರ ಆತ್ಮಕ್ಕೆ ಶಾಂತಿ ಸಿಗುತ್ತದಂತೆ. ನಮ್ಮ ನಂಬಿಕೆ ಸಾರ್. ನಿಮಗೂ ಒಳ್ಳಿತಾಗುತ್ತದೆ” ಎಂದು ಹೇಳಿದ ಕೃಷ್ಣಪ್ಪ.
ಕೊನೆಯ ಮಾತನ್ನು ಒತ್ತುಕೊಟ್ಟು ಹೇಳಿದ್ದು ಕೇಳಿ ಚಂದ್ರುವಿಗೂ ಹೋಗಿ ಬರುವುದೇ ಸರಿಯೆನ್ನಿಸಿತು. “ಆಗಲಿ ಕೃಷ್ಣಪ್ಪ ಬರುತ್ತೇನೆ” ಎಂದು ಅವನನ್ನು ಬೀಳ್ಕೊಟ್ಟ.

ಕೃಷ್ಣಪ್ಪ ಹೇಳಿದ್ದ ದಿವಸಕ್ಕೆೆ ಸರಿಯಾಗಿ ಅವರೂರಿಗೆ ಹೋದ ಚಂದ್ರು. ಅಂದಿನ ಕಾರ್ಯದಲ್ಲಿ ಕೃಷ್ಣಪ್ಪನ ಸೋದರರು, ಬಂಧುಗಳೆಲ್ಲರು ಬಾಗಿಯಾಗಿದ್ದರು. ಅವರೆಲ್ಲರೂ ಚಂದ್ರುವನ್ನು ಗೌರವಾದರಗಳಿಂದ ಬರಮಾಡಿಕೊಂಡರು. ಆ ದಿನ ಮೃಗಗಳಂತೆ ವರ್ತಿಸಿದವರು ಇವರೇನೇ ಎಂಬ ಅನುಮಾನ ಬರುವಂತಿತ್ತು. ಇಂತಹ ಮೂರು ಮಕ್ಕಳಿಗೆ ಜನ್ಮಕೊಟ್ಟು ಪೋಷಿಸಿದ ತಾಯಿಗೆ ಶ್ರದ್ದಾಂಜಲಿ ಸಲ್ಲಿಸುವುದು ಸರಿಯಾದದ್ದು ಎಂದುಕೊಂಡ. ಧೂಪ ಹಾಕಿ ಕೈಮುಗಿದು ಗತಿಸಿದವರ ಆತ್ಮಕ್ಕೆ ಶಾಂತಿಕೋರಿ ಭೋಜನ ಮುಗಿಸಿ ಮನೆಯಿಂದ ಹೊರಬಂದ ಚಂದ್ರು.

ಮಾಗಡಿಯ ಬಸ್ಸು ಹಿಡಿಯಲು ಹೊರಟವನ ಮನಸ್ಸಿನಲ್ಲಿ ಆ ದಿನದ ನೆನಪುಗಳು ಮರುಕಳಿಸಿದವು. ಕೃಷ್ಣಪ್ಪ ಓಲೆ ಮೂಗುಬೊಟ್ಟಿಗಾಗಿ ಅಪರಾತ್ರಿಯಲ್ಲಿ ಇಕ್ಕುಳ ತಂದದ್ದು. ಅವನ ಸೋದರರು ಆಸ್ತಿ ಪಾಲಾಗುವವರೆಗೂ ಹೆಣವನ್ನು ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ನಿಷ್ಠುರವಾಗಿ ಹೇಳಿದ್ದು. ತಿಂಗಳೊಳಗೆ ಆಸ್ತಿ ಭಾಗವೆಲ್ಲವೂ ಸಮಸ್ಯೆಯಿಲ್ಲದಂತೆ ಬಗೆಹರಿಯಿತೇ? ಎಂಬ ಸಂದೇಹ. ಜೊತೆಗೆ ತನಗೆ ಆ ಹೆಂಗಸು ಯಾವ ರೀತಿಯಲ್ಲಿ ಬಾದರಾಯಣ ಸಂಬಂಧ. ನಾನೇಕೆ ಶವದೊಡನೆ ಕಾವಲು ನಿಂತು ಬಂದೆ? ಶ್ರದ್ದಾಂಜಲಿ ಸಲ್ಲಿಸಲು ನಾನೇಕೆ ಒಪ್ಪಿಕೊಂಡು ಬಂದೆ? ಎಲ್ಲ ಪ್ರಶ್ನೆಗಳೂ ಒಂದರ ಮೇಲೊಂದು ಸುತ್ತಿಸುತ್ತಿ ಬರತೊಡಗಿದವು. ಬಸ್ಸಿನಲ್ಲಿ ಕುಳಿತಾಗ ನನಗೇಕೆ ಅಸಂಗತ ವಿಷಯಗಳ ಗೊಡವೆ. ಈಗೆಲ್ಲವೂ ಮುಗಿದಿದೆ. ಆಕೆಯೂ ಒಬ್ಬ ತಾಯಿ. ಅವಳ ಶವದೊಡನೆ ಕಾವಲು ಕುಳಿತದ್ದು ಅನಿವಾರ್ಯವಾಗಿತ್ತು. ಅದೊಂದು ಮಾನವೀಯತೆಯ ಕೆಲಸ. ಈದಿನ ಆಕೆಯ ಆತ್ಮಕ್ಕೆ ಶಾಂತಿಕೋರಿ ಶ್ರದ್ದಾಂಜಲಿ ಸಲ್ಲಿಸಿದ್ದೇನೆ. ಉಳಿದ ವಿಚಾರಗಳು ನನಗೆ ಸಂಬಂಧಿಸಿದ್ದಲ್ಲ ಎಂದುಕೊಂಡು ನಿರಾಳವಾಗಿ ಊರಿನ ಕಡೆಗೆ ಪ್ರಯಾಣ ಮಾಡಿ ಮನೆ ಸೇರಿಕೊಂಡ ಚಂದ್ರು.

ಬಿ.ಆರ್. ನಾಗರತ್ನ, ಮೈಸೂರು

14 Responses

  1. ಪದ್ಮಾ ಆನಂದ್ says:

    ಚಂದ್ರುವಿನ ಪರಿಸ್ಥಿತಿ ‘ಇರಲಾರದೆ ಇರುವೆ ಬಿಟ್ಟುಕೊಂಡ’ ಎಂಬಂತೆ ಆದುದು ವಿಷಾದನೀಯ. ಒಳ್ಳೆಯ ಮನದಿಂದ ಸಹಾಯ ಮಾಡಲು ಹೋಗಿ ಸಾವಿನಲ್ಲೂ ಸ್ವಾರ್ಥ ಮೆರೆವ ಜನರ ನಡುವಳಿಕೆ ಜಿಗುಪ್ಸೆ ಉಂಟು ಮಾಡುತ್ತದೆ. ಮನಮುಟ್ಟುವ ಅಚ್ಚುಕಟ್ಟಾದ ಕಥೆ.

  2. ನಿಮ್ಮ ಸ್ಪಂದನೆಗೆ ಹೃತ್ಪೂರ್ವಕವಾದ ಧನ್ಯವಾದಗಳು ಪದ್ಮಾ ಮೇಡಂ

  3. Hema Mala says:

    ಕತೆ ಸೊಗಸಾಗಿ ಮೂಡಿ ಬಂದಿದೆ. ಈಗೀಗ ಇಂತಹ ಅಮಾನವನೀಯ ಘಟನೆಗಳ ಬಗ್ಗೆ ಕೇಳುತ್ತಿದ್ದೇವೆ. ಎಂದಿನಂತೆ ಚೆಂದದ ನಿರೂಪಣೆ, ಕುತೂಹಲಕಾರಿ ತಿರುವು. ಆರಂಭದ ನಿರೂಪಣೆಯಲ್ಲಿ, ಚಂದ್ರು ಅನಾವಶ್ಯಕವಾಗಿ ಕಾನೂನು ತೊಡಕಿಗೆ ಸಿಕ್ಕಿಕೊಳ್ಳತ್ತಾನೆಯೇ ಎಂಬ ಊಹೆ ಮಾಡಿದ್ದೆ. ಎಲ್ಲವೂ ತನ್ನಿಂತಾನೇ ತಣ್ಣಗಾಯಿತು, ಒಳ್ಳೇದಾಯಿತು.

  4. ನಯನ ಬಜಕೂಡ್ಲು says:

    ಹೃದಯಸ್ಪರ್ಶಿಯಾಗಿದೆ ಕಥೆ

  5. ಧನ್ಯವಾದಗಳು ಗೆಳತಿ ಹೇಮಾ

    • Bharathi says:

      ಗೆಳೆತನದಲ್ಲಿ ಕಷ್ಟ ಬಂದಾಗ ಜೊತೆ ನಿಲ್ಲುವುದು ಮಾನವ ಧರ್ಮ, ಆದರೆ ಅದು ನಮ್ಮ ಶಾಂತ ಮನಸಿಗೆ ಕಸಿವಿಸಿ ತರಬಾರದು,ಅಂದರೂ ಒಮ್ಮೊಮ್ಮೆ ಹೀಗಾಗುವುದು ಉಂಟು, ನಂತರ ಪರಿಸ್ಥಿತಿ ತನ್ನಂತೆ ತಾನೆ ಹತೋಟಿಗೆ ಬರುತ್ತದೆ ಎಂಬುದನ್ನು ಸರಳವಾಗಿ ನಿರೂಪಿಸಲಾಗಿದೆ.ಕಥೆ ಚೆನ್ನಾಗಿದೆ.

  6. MANJURAJ H N says:

    ಚೆನ್ನಾಗಿದೆ ಮೇಡಂ.

    ಅಮಾನವೀಯ ನಡವಳಿಕೆಗಳ ನಡುವೆ ಹೃದ್ಯವಾದೊಂದು ಕರುಳು.
    ಶ್ರದ್ಧೆಯ ಅಂಜಲಿ. ಕತೆಯು ಸರಾಗ ಸಲೀಸು ನಡಿಗೆ. ಉತ್ತಮ ಸ್ವಭಾವೋಕ್ತಿ.
    ಇಷ್ಟವಾಯಿತು. ಧನ್ಯವಾದಗಳು

  7. ಶಂಕರಿ ಶರ್ಮ says:

    ಪರೋಪಕಾರ ಮಾಡಲು ಹೋಗಿ ಸಿಕ್ಕಿ ಬೀಳುವ ಪರಿಸ್ಥಿತಿ ಉದ್ಭವವಾಗುವ ಹೊತ್ತಿಗೆ ಎಲ್ಲವೂ ಶಾಂತ ರೀತಿಯಲ್ಲಿ ಮುಕ್ತಾಯಗೊಂಡುದು ನೆಮ್ಮದಿಯೆನಿಸಿದರೂ, ಕಥೆಯು ಫಕ್ಕನೆ ಕೊನೆಗೊಂಡ ಭಾವಮೂಡಿತು. ಎಂದಿನಂತೆ ಚೊಕ್ಕ ಕಥಾಹಂದರ…ಇಷ್ಟವಾಯಿತು ನಾಗರತ್ನ ಮೇಡಂ.

  8. ಮೈಸೂರು ಮಿತ್ರ ಪತ್ರಿಕೆ ಯ ನಲವತ್ತಾರನೆಯ ವಾರ್ಷಿಕೋತ್ಸವದ ಕಥಾಸ್ಪರ್ಧೆಯಲ್ಲಿ ಎರಡನೇ ಬಹುಮಾನ ಪಡೆದ ಕಥೆ ಶ್ರದ್ಧಾಂಜಲಿಯನ್ನು ಪ್ರಕಟಿಸಿ ಮತ್ತಷ್ಟು ಓದುಗರಿಗೆ ಅವಕಾಶ ಕೊಟ್ಟು ಪ್ರೋತ್ಸಾಹವಿತ್ತ ಸಹೃದಯಿ ಗೆಳತಿ ಹೇಮಾ ಮಾಲಾ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: