ಕೂಡಲ ಸಂ–‘ಘಮಘಮ’ !

ಕೂಡಲ ಸಂ – ‘ಘಮ ಘಮ’ !
ಅಣ್ಣ ಬಸವಣ್ಣ ! ನಿಮ್ಮಿಂದ ಕಲಿತಿರುವೆ
ಎನುವುದನೃತ ; ಕಲಿಯುತಿರುವೆ ದಿಟ !
ಅಹಮಿರುವ ಜಾಗವ ಹುಡುಕುತ ಜೀವನ ಪರ್ಯಂತ ಚಡಪಡಿಕೆ
ಅದನೇ ಜಗಿಯುತ ಚರಟವನೇ ನುಂಗುವ ವ್ಯರ್ಥ ಜಿಜ್ಞಾಸೆ
ಕಸರಸಗಳ ತರತಮ ತಿಳಿಯದೆ ಕಂಗೆಟ್ಟ ಮನವ ನಿಮ್ಮ ವಚನದಿಂದ
ಸಾಂತ್ವನಿಸುತ ನನಗೆ ನಾನೇ ! ಮತ್ತೆ ಮತ್ತೆ ಇಂಥ ‘ನಾನೆಂಬ ಆನೆ’
ಎದುರಾಗಿ ಧುತ್ತನೆ ; ಹಿಂಸಿಸುತ ಹೊಸಕಿ ಹಾಕುತಿದೆ ‘ನನ್ನನೇ !’
*******
ತನ್ನ ಬಣ್ಣಿಸಬೇಡ ಎಂದಿರಿ; ಜಗದಹಂಕಾರವ ಕೊಂದಿರಿ
ನಿಮ್ಮೊಳಗದನು ಕೊಂದು ಕೊಂಡಿರಿ, ಕೂಡಲಸಂಗನೊಂದಿಗೆ
ಎಲ್ಲವನೂ ತೋಡಿಕೊಂಡು ಬರಿದಾದಿರಿ, ಹೇಗದು ಸಿದ್ಧಿ-
ಸಿತು ನಿಮಗೆ? ಅಟಮಟ ಕುಟಿಲ ಕುಹಕವ ಬಯಲು ಮಾಡಿದ
ಅಲ್ಲಮರು ಹೇಳಿ ಕೊಟ್ಟರೇ? ಅಥವಾ ಮಾದಾರ ಚೆನ್ನಯ್ಯನ
ಮನೆಯ ಮಗ ಎಂದಾಗಲೇ ನಿಮಗದು ಹೃದ್ಗತವೇ? ಹೇಳಿರಿ.
*******
ನಿಮ್ಮ ಪ್ರತಿ ವಚನಪುಷ್ಪದ ಘಮಲಿಗೆ ಹಾಗೇ ಧ್ಯಾನಸ್ಥಗೊಂಡು
ನಾನತ್ವವ ಮರೆಯಲು ಹೋದರೂ ಧುತ್ತನೆ ಅತ್ತಿಯ ಹಣ್ಣಂಥ
ಚಿತ್ತವೆದುರಾಗಿ ಶಬ್ದಾರ್ಥದಲೇ ತರ್ಕಿಸಿ , ಮತ್ತದೇ ಲೌಕಿಕ !!
ನಿಮ್ಮನರಿವ ತವಕವೀಗ ಕಕಮಕ; ಒದ್ದಾಟದ ಈ ಪರಿ ;
ಶಬ್ದದೊಳಗಣ ನಿಶ್ಶಬ್ದವನರಿವುದು ಹೇಗೆ? ತಿಳಿಸಿರಿ !?
*******
–ಡಾ. ಹೆಚ್ ಎನ್ ಮಂಜುರಾಜ್, ಮೈಸೂರು, ಬಸವ ಜಯಂತಿ 2025
ಬಸವಣ್ಣನವರ ಸಾಧನೆಯ ಅನಾವರಣ.. ಸಾಮಾನ್ಯ ಮಾನವನ.. ಅಂತರಂಗದ ತಾಕಲಾಟದ ಚಿತ್ರಣ..ಚಿಂತನ ಮಂಥನಕ್ಕೆ..ಹಚ್ಚುವ ಕವನ..ಚೆನ್ನಾಗಿ ಮೂಡಿಬಂದಿದೆ..
ಧನ್ಯವಾದ ಮೇಡಂ
Nice
ವಂದನೆಗಳು
ಬಸವ ಜಯಂತಿಗಾಗಿ ಮೂಡಿಬಂದ ಕವನ ಚಿಂತನಯೋಗ್ಯವಾಗಿದೆ.
ಅರ್ಥಗರ್ಭಿತವಾದ ಕವನ
ಬಸವಣ್ಷನವರಿಗೆ ಅವರದೇ ಧಾಟಿಯಲ್ಲಿ ಸಲ್ಲಿಸಿದ ನುಡಿನಮನ ಅತ್ಯಂತ ಅರ್ಥಪೂರ್ಣವಾಗಿದೆ.