ಕೂಡಲ ಸಂ–‘ಘಮಘಮ’ !

Share Button

ಕೂಡಲ ಸಂ – ‘ಘಮ ಘಮ’ !
ಅಣ್ಣ ಬಸವಣ್ಣ ! ನಿಮ್ಮಿಂದ ಕಲಿತಿರುವೆ
ಎನುವುದನೃತ ; ಕಲಿಯುತಿರುವೆ ದಿಟ !

ಅಹಮಿರುವ ಜಾಗವ ಹುಡುಕುತ ಜೀವನ ಪರ್ಯಂತ ಚಡಪಡಿಕೆ
ಅದನೇ ಜಗಿಯುತ ಚರಟವನೇ ನುಂಗುವ ವ್ಯರ್ಥ ಜಿಜ್ಞಾಸೆ
ಕಸರಸಗಳ ತರತಮ ತಿಳಿಯದೆ ಕಂಗೆಟ್ಟ ಮನವ ನಿಮ್ಮ ವಚನದಿಂದ
ಸಾಂತ್ವನಿಸುತ ನನಗೆ ನಾನೇ ! ಮತ್ತೆ ಮತ್ತೆ ಇಂಥ ‘ನಾನೆಂಬ ಆನೆ’
ಎದುರಾಗಿ ಧುತ್ತನೆ ; ಹಿಂಸಿಸುತ ಹೊಸಕಿ ಹಾಕುತಿದೆ ‘ನನ್ನನೇ !’

*******

ತನ್ನ ಬಣ್ಣಿಸಬೇಡ ಎಂದಿರಿ; ಜಗದಹಂಕಾರವ ಕೊಂದಿರಿ
ನಿಮ್ಮೊಳಗದನು ಕೊಂದು ಕೊಂಡಿರಿ, ಕೂಡಲಸಂಗನೊಂದಿಗೆ
ಎಲ್ಲವನೂ ತೋಡಿಕೊಂಡು ಬರಿದಾದಿರಿ, ಹೇಗದು ಸಿದ್ಧಿ-
ಸಿತು ನಿಮಗೆ? ಅಟಮಟ ಕುಟಿಲ ಕುಹಕವ ಬಯಲು ಮಾಡಿದ
ಅಲ್ಲಮರು ಹೇಳಿ ಕೊಟ್ಟರೇ? ಅಥವಾ ಮಾದಾರ ಚೆನ್ನಯ್ಯನ
ಮನೆಯ ಮಗ ಎಂದಾಗಲೇ ನಿಮಗದು ಹೃದ್ಗತವೇ? ಹೇಳಿರಿ.

*******

ನಿಮ್ಮ ಪ್ರತಿ ವಚನಪುಷ್ಪದ ಘಮಲಿಗೆ ಹಾಗೇ ಧ್ಯಾನಸ್ಥಗೊಂಡು
ನಾನತ್ವವ ಮರೆಯಲು ಹೋದರೂ ಧುತ್ತನೆ ಅತ್ತಿಯ ಹಣ್ಣಂಥ
ಚಿತ್ತವೆದುರಾಗಿ ಶಬ್ದಾರ್ಥದಲೇ ತರ್ಕಿಸಿ , ಮತ್ತದೇ ಲೌಕಿಕ !!
ನಿಮ್ಮನರಿವ ತವಕವೀಗ ಕಕಮಕ; ಒದ್ದಾಟದ ಈ ಪರಿ ;
ಶಬ್ದದೊಳಗಣ ನಿಶ್ಶಬ್ದವನರಿವುದು ಹೇಗೆ? ತಿಳಿಸಿರಿ !?

*******

ಡಾ. ಹೆಚ್ ಎನ್ ಮಂಜುರಾಜ್ಮೈಸೂರು, ಬಸವ ಜಯಂತಿ 2025

7 Responses

  1. ಬಸವಣ್ಣನವರ ಸಾಧನೆಯ ಅನಾವರಣ.. ಸಾಮಾನ್ಯ ಮಾನವನ.. ಅಂತರಂಗದ ತಾಕಲಾಟದ ಚಿತ್ರಣ..ಚಿಂತನ ಮಂಥನಕ್ಕೆ..ಹಚ್ಚುವ ಕವನ..ಚೆನ್ನಾಗಿ ಮೂಡಿಬಂದಿದೆ..

  2. ನಯನ ಬಜಕೂಡ್ಲು says:

    Nice

  3. ಶಂಕರಿ ಶರ್ಮ says:

    ಬಸವ ಜಯಂತಿಗಾಗಿ ಮೂಡಿಬಂದ ಕವನ ಚಿಂತನಯೋಗ್ಯವಾಗಿದೆ.

  4. ಅರ್ಥಗರ್ಭಿತವಾದ ಕವನ

  5. ಪದ್ಮಾ ಆನಂದ್ says:

    ಬಸವಣ್ಷನವರಿಗೆ ಅವರದೇ ಧಾಟಿಯಲ್ಲಿ ಸಲ್ಲಿಸಿದ ನುಡಿನಮನ ಅತ್ಯಂತ ಅರ್ಥಪೂರ್ಣವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: