ಬಲವಿದೆ ಎಂದು……

ಬಲವಿದೆ ಇಂದು ಹಾರಾಟ ಮಾಡುವೆ
ನಾಳೆಗೆ ಏನು ಗೊತ್ತಿಲ್ಲ
ನನ್ನ ಅಸ್ತಿತ್ವವನೆ ಅಳಿಸಿ ಹಾಕುವೆ
ಮುಂದಿನ ಸತ್ಯವ ಅರಿತಿಲ್ಲ//೧//
ದರ್ಪವು ಇಹುದು ಹಣಬಲ ಇಹುದು
ನಿನಗೇ ಗೆಲುವು ಎನ್ನುವೆ ನೀ
ಕಾಲನ ಸೆಳೆತಕೆ ಸಿಕ್ಕಿದ ಮೇಲೆ
ಬದುಕಿನ ಸತ್ಯವ ತಿಳಿಯುವೆ ನೀ//೨//
ಎಲ್ಲರು ನಾವು ಜಗದಲಿ ಎಂದೂ
ಕಾಲನು ಕುಣಿಸುವ ಗೊಂಬೆಗಳು
ಆತನು ಬೀಸುವ ಗಾಳಿಗೆ ತೂರುವ
ಒಣಗಿ ಹಾರುವ ಜಳ್ಳುಗಳು//೩//
ದೇಹದಿ ನೆತ್ತರು ಚಿಮ್ಮುತಲಿರಲು
ಅರ್ಥವೆ ಆಗದು ಗೋಳು
ರಕ್ತದ ಹರಿವು ಕುಗ್ಗುತ ಸಾಗಲು
ತಿಳಿಯುವೆ ನಶ್ವರ ಬಾಳು//೪//
ಇಂದಿನ ಶಕ್ತಿ ನಾಳೆಗೆ ನಶಿಸಲು
ಕಲಿಯುವೆ ಜೀವನ ಸತ್ಯ
ಬಾಗಿದ ಬಾಳೆಯ ಗೊನೆಯೊಲು ನಾವು
ಬದುಕಲು ಬೇಕಿದೆ ನಿತ್ಯ//೫//
ಹರೆಯವು ಹುರುಪು ಎಲ್ಲವು ಇದ್ದರೂ
ಗೋಡೆಗೆ ತಲೆಯ ಜಜ್ಜದಿರು
ಕಾಲನ ಕುಣಿಕೆಯು ಕೋಳವ ಹಾಕಲು
ದೇಹವ ತ್ಯಜಿಸಲು ಮರುಗದಿರು//೬//
–ಶುಭಲಕ್ಷ್ಮಿ ಆರ್ ನಾಯಕ
ಎಚ್ಚರಿಕೆ ಯ ಗಂಟೆಯ ಕವನ ಚೆನ್ನಾಗಿ ದೆ..ಚಿಂತನೆ ಹಚ್ಚುವಂತೆ ಮಾಡಿದೆ..
ಚೆನ್ನಾಗಿದೆ ಕವನ
ಬಾಳಿನ ನಶ್ವರತೆಯ ಬಗ್ಗೆ ಎಚ್ಚರಿಕೆ ನೀಡುವ ಚಿಂತನಯೋಗ್ಯ ಕವನ.
ಸಕಾಲಿಕ ಎಚ್ಚರ! ಲಯಬದ್ಧ, ಛಂದೋಗುಣದ ಅರ್ಥ ಹೂರಣ!!
ಸೊಗಸಾಗಿದೆ ಮೇಡಂ,
ದಿನಕರ ದೇಸಾಯಿ ನೆನಪಾದರು. ಅವರದು ಸ್ವತಂತ್ರ ಚೌಪದಿ; ನಿಮ್ಮದು ಕವಿತೆಯಲೇ ಚೌಪದಿ.
ಮುಂದುವರಿಸಿ, ನಿಮಗೆ ಈ ಹದ ಕೈಗೂಡಿದೆ; ನಮಗದು ಹೃದ್ಗತವಾಗಲಿ. ಶುಭಾಶಯ.
ಚಂದದ ಕವನ
ಕವಿತೆ ಜೀವನದ ಸೂಕ್ಷ್ಮತೆಯನ್ನು ಕಾವ್ಯಮಯವಾಗಿ ಹಿಡಿದಿಟ್ಟಿದೆ.