ಗುಂಡು ಕಥೆ

Share Button

ನಾನಿಂದು ಗುಂಡು ಕಥೆ ಬರೆಯಲು ಹೊಟಿದ್ಧೀನೆಂದರೆ ನೀವಲ್ಲಿ ಏನೇನೋ ರೋಚಕ ಪ್ರಸಂಗಗಳು ಇರುತ್ತವೆ ಎಂದುಕೊಂಡು ಮತ್ತೇರಿಸಿಕೊಳ್ಳಬೇಡಿ.  ಕರೋನಾ ಸಮಯದಲ್ಲಿ ಮದ್ಯಕ್ಕೆ ಎಣ್ಣೆ ಎಣ್ಣೆ ಎಂದು ನಮ್ಮ ದೃಶ್ಯ  ಮಾಧ್ಯಮದವರು ಹೇಳುತ್ತಾ, ಹೇಳುತ್ತಾ ಪಾಪ, ನಿಜವಾದ ಎಣ್ಣೆಯನ್ನು ಮೂಲೆಗುಂಪು ಮಾಡಿಬಿಟ್ಟರಲ್ಲಾ ಹಾಗೆ.  ನಮ್ಮ ಸುತ್ತಲಿನ ಕೆಲವಾರು ಗಂಡಸರಂತೂ ಕರೋನಾ ಭೀತಿಯಿಂದ ಕಳೆಗುಂದಿನ ಮೊಗದಲ್ಲಿ, ಎಣ್ಣೆ ಎಣ್ಣೆ ಹೆಸರು ಕೇಳಿಯೇ ಮುದಗೊಳ್ಳುತ್ತಿದ್ದರು.

ಆದರೆ ನಾನೀಗ ಹೇಳಹೊರಟಿರುವುದಂತೂ ಸಾರ್ವಜನಿಕವಾಗಿ ಮದ್ಯ ಎಂದು ಹೇಳಲಾಗದೇ ಸಂಕೋಚ ಸ್ವಭಾವದವರು ಉಪಯೋಗಿಸುವ ʼಗುಂಡುʼವಿನ ಕಥೆಯಂತೂ ಅಲ್ಲವೇ ಅಲ್ಲ.

ನಾವೆಲ್ಲಾ ಪೂಜಿಸಿದ, ಪೂಜಿಸುವ, ಮಹತಾಯಿ ಎಂದು ಭಾವಿಸುವ ರುಬ್ಬವ ಗುಂಡು, ಒರಳುಕಲ್ಲು, ಒನಕೆ, ಹಾರೆ, ಬೀಸುವಕಲ್ಲುಗಳ ಬಗ್ಗೆ.  ಇವುಗಳನ್ನು ಕುರಿತು ನಮ್ಮ ಜಾನಪದ ಕವಿಯಿತ್ರಿಯರು, ನಮ್ಮನ್ನು ಕಾಯುವ ದೇವರು, ನಮಗೆ ಆಹಾರ ನೀಡುವ ಅನ್ನಪೂರ್ಣೆ ಎಂದು ಕರೆದಿದ್ದಾರೆ.  ಹಾಗಾಗಿಯೇ ನಮ್ಮ ಮದುವೆ ಶಾಸ್ತ್ರಗಳನ್ನು ಮೊದಲಿಗೆ ಇವುಗಳಿಗೆ ಪೂಜಿಸಿಯೇ ಪ್ರಾರಂಭಿಸುತ್ತಾರೆ.

ಹಿಟ್ಟಿನ ಗಿರಣಿ, ಮಿಕ್ಸರ್‌, ಗ್ರೈಂಡರ್‌, ಗಳಗಂಟಿ ಮುಂತಾದವುಗಳು ಇರದಿದ್ದ ಹಿಂದಿನ ದಿನಗಳಲ್ಲಂತೂ ಈ ಕಲ್ಲುಗಳಿಗೆ ಮನೆಗಳಲ್ಲಿ ಮಹತ್ತರವಾದ ಸ್ಥಾನ ಇರುತಿತ್ತು.  ಮನೆಯ ಹೆಂಗಸರಿಗಂತೂ ಕಡ್ಡಾಯವಾಗಿ ಇವುಗಳನ್ನು ಉಪಯೋಗಿಸುವ ಕಲೆಯೂ ತಿಳಿದಿತ್ತು.  ಹೆಣ್ಣು ಮಕ್ಕಳಿಗೆ ಸ್ವಲ್ಪ ದೊಡ್ಡವರಾಗುತ್ತಿದ್ದಂತೆಯೇ ಕಲಿಸುವ ಮೊದಲ ಕೆಲಸಗಳೆಂದರೆ ರುಬ್ಬುವುದು, ಕುಟ್ಟುವುದು, ಬೀಸುವುದು ಮುಂತಾದ ದೈಹಿಕ ಶ್ರಮದ ಕೆಲಸಗಳು ಮತ್ತು ಅವುಗಳನ್ನು ಹಗುರ ಮಾಡಿಕೊಳ್ಳಲು ಆ ಸಮಯದಲ್ಲಿ ಹೇಳಿಕೊಳ್ಳುವ ಜಾನಪದ ಹಾಡುಗಳು.

ಒರಳು ಕಲ್ಲಿನ ಉಪಯೋಗ ಒಂದೇ, ಎರಡೇ… ಬತ್ತವನ್ನು ಕುಟ್ಟಿ ಅಕ್ಕಿ ಮಾಡುವುದು, ಅವಲಕ್ಕಿ ಮಾಡುವುದು, ಮಸಾಲೆ ಪುಡಿಗಳನ್ನು ತಯಾರಿಸುವುದು ಮುಂತಾದವುಗಳನ್ನು ಹಾರೆ, ಒನಕೆಗಳ ಸಹಾಯದಿಂದ ಮಾಡಿದರೆ ರುಬ್ಬುವ ಗುಂಡಿನ ಸಹಾಯದಿಂದ ದೋಸೆ, ಇಡ್ಲಿ ಹಿಟ್ಟುಗಳನ್ನು ರುಬ್ಬುವುದು, ತೆಂಗಿನಕಾಯಿ ಮುಂತಾದವುಗಳೊಂದಿಗೆ ಅಡುಗೆಗೆ ಬೇಕಾದ ಹಸೀ ಮಸಾಲೆಯನ್ನು ರುಬ್ಬುವುದು. ಮುಂತಾದವು.  ಇವುಗಳು ನಮ್ಮ ಒರಳಕಲ್ಲುಗಳನ್ನು ಅತ್ಯಗತ್ಯವಾಗಿ ಉಪಯೋಗಿಸುತ್ತಿದ್ದ  ಕೆಲವು ಸ್ಯಾಂಪಲ್‌ ಉಪಯೋಗಗಳು.

ಹಿಂದಿನ ಕಾಲದ ನಮ್ಮ ಮನೆಗಳಲ್ಲಿ ಅಡುಗೆ ಮನೆಯಲ್ಲೊಂದು, ಅಂಗಳದಲ್ಲಿ ಮತ್ತೊಂದು.   ಎರಡು ಒರಳು ಕಲ್ಲುಗಳು ಇರುತ್ತಿದ್ದವು.  ಒಂದು ಬರೀ ಮನೆಯ ಯಜಮಾನ್ತಿ ಮಡಿ ಅಡುಗೆಗೆ ಉಪಯೋಗಿಸಲ್ಪಡುವುದು, ಮತ್ತೊಂದು ಮಿಕ್ಕೆಲ್ಲ ಸದಸ್ಯರು ಉಪಯೋಗಿಸಿಕೊಳ್ಳಲು.  ರುಬ್ಬುವುದರಿಂದ, ಕುಟ್ಟುವುದರಿಂದ ಕೈಗಳಿಗೆ ಮತ್ತು ತೋಳುಗಳುಗೆ ಎಂತಹ ಒಳ್ಳೆಯ ವ್ಯಾಯಾಮವಾಗುತಿತ್ತು ಎಂದರೆ ಫ್ರೋಜ಼ನ್‌ ಶೋಲ್ಡರ್‌ ಮುಂತಾದ ತೋಳು, ಭುಜ ಸಂಬಂಧಿ ರೋಗಗಳ ಹೆಸರುಗಳನ್ನೂ ಕೇಳಿರಲಿಲ್ಲ.  ಕೆಳಗೆ ಕುಳಿತು ಈ ಕೆಲಸಗಳನ್ನು ಮಾಡುತ್ತಿದುದ್ದರಿಂದ ಮಂಡೀನೋವು ಮುಂತಾದ ಕಾಯಿಲೆಗಳಿಗೂ ಆಸ್ಪದವಿರುತ್ತಿರಲಿಲ್ಲ.


ಇವಿಷ್ಟು ರುಬ್ಬುವ ಗುಂಡಿನ ಹೊರವಲಯದ ಕಥೆಯಾದರೆ ಅವುಗಳಿಂದ ತಯಾರಿಸಿದ ಅಡುಗೆಗೆಳ ರುಚಿಯ ಏನೆಂದು ಬಣ್ಣಿಸಲಿ? ಬಲ್ಲವರೇ ಬಲ್ಲರು ಜೇನ ಸವಿಯ.  ಈಗಲೂ ನನ್ನಮ್ಮ ಮಾಡುತ್ತಿದ್ದ ಆಗ ತಾನೇ ಒಡೆದ ತೆಂಗಿನಕಾಯಿಯ ತುರಿಯನ್ನು ಧಾರಾಳವಾಗಿ ಹಾಕಿ, ಜೊತೆಗೆ ಹೊಂದಿಕೊಳ್ಳಲು ಒಂದೇ ಮುಷ್ಠಿ ಹುರಿಗಡಲೆ ಸೇರಿಸಿ ಅಂಗಳದಿಂದ ಬಿಡಿಸಿ ತಂದ ಫಾರಂ ಫ್ರೆಷ್‌ ಕರಿಬೇವು, ಕೊತ್ತಂಬರಿ, ಹಸೀಮೆಣಸಿನಕಾಯಿ, ಹಸೀಶುಂಠಿ ಹಾಕಿ ಅದರೊಂದಿಗೆ ಕಲ್ಲುಪ್ಪು, ಘಂ ಎನ್ನುವ ಇಂಗು, ಚೂರು ಹುಣಸೇಹಣ್ಣು ಸೇರಿಸಿ ಹದವಾಗಿ ರುಬ್ಬಿ, ಮೇಲೆ ಕಡ್ಲೇಕಾಯಿ ಎಣ್ಣೆ, ಸಾಸುವೆಯ ಒಗ್ಗರಣೆ ಕೊಟ್ಟು ಮಾಡುತ್ತಿದ್ದ ಚಟ್ನಿಯ ರುಚಿ, ಅಬ್ಬಾ, ಬಾಯಲ್ಲಿ ನೀರೂರುತ್ತದೆ.

ಮುಂಚೆಯೇ ಹೇಳಿದಂತೆ ನಿಮ್ಮ ನಾಲಿಗೆಯ ರಸದೂತಗಳು ಜಾಗೃತಗೊಳ್ಳಲು ಇದೊಂದು ಸ್ಯಾಂಪಲ್‌ ಅಷ್ಟೇ.  ಎಷ್ಟೇ ಫ್ರೆಷ್‌ ಆಗಿ ಮಾಡಿಟ್ಟುಕೊಂಡ ಹುಳೀಪುಡಿ ಹಾಕಿ ಮಾಡಿದ ಹುಳಿ(ಸಾಂಬಾರ್)ಗಿಂತಲೂ ರುಬ್ಬಿ ಹಾಕಿ ಮಾಡಿದ ಹುಳಿಯ ರುಚಿಯೇ ಬೇರೆ.  ಹಾಗೆಯೇ ಕಾಯಿಸಾಸುವೆ ಚಿತ್ರಾನ್ನ ಮುಂತಾದವುಗಳು ಮತ್ತೊಂದೆರಡು ಸ್ಯಾಂಪಲ್‌ ಗಳು ಅಷ್ಟೇ.

ನಂತರದ ದಿನಗಳಲ್ಲಿ ಹೆಣ್ಣು ಮಕ್ಕಳುಗಳು ವಿದ್ಯಾಭ್ಯಾಸದೆಡೆಗೆ ಹೆಚ್ಚೆಚ್ಚು ಗಮನ ಕೊಡುತ್ತಿದ್ದಂತೆ ಅವರುಗಳಿಗೆ ಇದು ಶ್ರಮದಾಯಕ ಕೆಲಸ ಎನ್ನಿಸತೊಡಗಿತು.  ಅದು ಸರಿಯೂ ಹೌದೆನ್ನಿ.  ಅಷ್ಟರ ವೇಳೆಗೆ ಮಿಕ್ಸರ್‌, ಗ್ರೈಂಡರ್‌, ಗಳಗಂಟಿಗಳ ಅವಿಷ್ಕಾರವೂ ಆಯಿತು.  ಮಿಕ್ಸರ್‌, ಗ್ರೈಂಡರ್‌ ಗೊತ್ತು, ಈ ಗಳಗಂಟಿ ಏನು, ಎನ್ನುತ್ತೀರಾ?  ನಮ್ಮ ದಕ್ಷಿಣ ಭಾರತದಲ್ಲಿ ಮಿಕ್ಸರ್ಗಳು ಎಷ್ಟು ಅಗತ್ಯದ ವಸ್ತುವಾಗಿದೆಯೋ ಹಾಗೇ ಉತ್ತರ ಭಾರತದಲ್ಲಿ ಗಳಗಂಟಿ ಹಾಗೆಯೇ ಆಗಿದೆ.  ಮನೆಯಲ್ಲೇ ತಾಜಾ ಹಾಗೂ ಶುದ್ಧ ಗೋಧಿ ಹಿಟ್ಟನ್ನು ತಯಾರಿಸಿಕೊಳ್ಳಲು ಇದು ಸಹಕಾರಿಯಾಗಿದೆ.

ಗೋಧಿಹಿಟ್ಟು ಮಾಡುವ ಕಲ್ಲು PC: Internet

ನನ್ನ ಗುಂಡು ಕಥೆ ಹಳಿ ಬಿಟ್ಟು ಎಲೆಲ್ಲೋ ಹರಿಯ ತೊಡಗಿತಲ್ಲಾ, ಹಿಂದೆ ಬರೋಣ.  ರುಬ್ಬುವುದು, ಕುಟ್ಟುವುದರಲ್ಲಿ ಜಾಣ್ಮೆ ಇರುತ್ತದೆ.  ಹಿರಿಯರೊಂದಿಗೆ ಈ ಕೆಲಸಗಳನ್ನು ಮಾಡುತ್ತಾ, ಮಾಡುತ್ತಾ, ಮತ್ತು ಅನುಭವದಿಂದಲೂ ಪರಿಣಿತಿ ಸಾಧಿಸಬಹುದು.  ಅದರಲ್ಲಿ ಪರಿಣಿತಿ ಸಾಧಿಸಿದವರು ಆ ಕೆಲಸಗಳನ್ನು, ನೋಡಲು ಲೀಲಾಜಾಲವೆನ್ನುವಂತೆ ಒಂದೇ ರಿದಂನಲ್ಲಿ ಹಾಡು ಗುನುಗುತ್ತಾ ಮಾಡುತ್ತಿದ್ದರೆ ನೋಡುವುದೇ ಒಂದು ಸೊಗಸು.  ಎಷ್ಟೋ ಹೆಣ್ಣುಮಕ್ಕಳು ಅವರುಗಳನ್ನು ನೋಡಿ – ಅದೇನು ಮಹಾ – ಎಂದುಕೊಂಡರೆ, ಮುಂದೆ ಅವರು ಮಾಡಬೇಕಾಗಿ ಬಂದಾಗ ಕಷ್ಟವಾಗುವುದಂತೂ ಖಂಡಿತಾ.

ಈ ಕುರಿತು ನಮ್ಮತ್ತೆ ಒಂದು ಕಥೆ ಹೇಳುತ್ತಿದ್ದರು – ಮನೆಗೆ ಹೊಸಾ ಸೊಸೆ ಬಂದಿದ್ದಳಂತೆ.  ಅಮ್ಮನ ಮನೆಯಲ್ಲಿ ಮುದ್ದಾಗಿ ಬೆಳೆಸಿದ್ದರು.  ಇಲ್ಲಿ ಅತ್ತೆ ಹುಳಿ(ಸಾಂಬಾರ್)ಗೆ ಮಸಾಲೆ ರುಬ್ಬಲು ಹೇಳಿದರು. ಮೂರ್ನಾಲ್ಕು ಬಾರಿ ಕಲ್ಲನ್ನು ತಿರುಗಿಸುವಷ್ಟರಲ್ಲೇ ಸುಸ್ತಾಗಿ ಬಿಟ್ಟಳು. ರುಬ್ಬುವ ಗುಂಡು ಒರಳಿಗೆ ಕಚ್ಚಿಕೊಳ್ಳತೊಡಗಿತು.  ತುಂಬಾ ಕಷ್ಟ ಪಡುತ್ತಿದ್ದಳು.  ಆ ಕಡೆ ಒಳ ಬಂದ ಅತ್ತೆಯವರು ಹೇಳಿದರು – ನೆತ್ತಿಯ ಮೇಲೆ ಸ್ವಲ್ಪ ನೀರು ಹಾಕಿದರೆ ಕಚ್ಚಿಕೊಳ್ಳುವುದಿಲ್ಲ. – ಹೇಳಿ ಆಚೆ ಹೋದರು.  ಅರ್ಧ  ಗಂಟೆ ಬಿಟ್ಟು ಒಳಗೆ ಬಂದು ನೋಡಿದರೆ ಮಸಾಲೆ ರುಬ್ಬಿಸಿಕೊಳ್ಳದೆ ಹಾಗೆಯೇ ಕುಳಿತಿತ್ತು.  ಸೊಸೆಯ ನೆತ್ತಿಯಿಂದ ನೀರು ಹರಿದರಿದು ಮೈಯೆಲ್ಲಾ ಒದ್ದೆಯಾಗಿತ್ತು.  ಸೊಸೆ ಮುದ್ದು ಉಲಿಯಿತು – ಅತ್ತೇ ನೆತ್ತಿಗೆ ಎಷ್ಟು ನೀರು ಹಾಕಿಕೊಂಡೆ, ಮೈಯೆಲ್ಲಾ ಒದ್ದೆ ಆಯಿತು ಅಷ್ಟೆ, ಕಲ್ಲು ಒರಳನ್ನಂತೂ ಬಿಡುತ್ತಿಲ್ಲ, ಏನು ಮಾಡಲಿ? – ಉಕ್ಕಿ ಬರುತ್ತಿದ್ದ ನಗುವನ್ನು ತಡೆದು ಅತ್ತೆ ಹೇಳಿದರು – ಕಲ್ಲಿನ ನೆತ್ತಿಗೆ ನೀರು ಹಾಕಲು ಹೇಳಿದ್ದಮ್ಮಾ, ನಿನ್ನ ನೆತ್ತಿಗೆ ನೀರು ಹಾಕಿಕೊಂಡರೆ ಕಲ್ಲು ಹೇಗೆ ಒರಳಿನಿಂದ ಹೊರಗೆ ಬರುತ್ತದೆ?

ಕಲ್ಲಿನ ನೆತ್ತಿಯ ಮೇಲೆ ಸ್ವಲ್ಪಸ್ವಲ್ಪ ನೀರು ಚುಮುಕಿಸಿಕೊಂಡು ಫಟಾ ಫಟ್‌ ಸಾಂಬಾರ್‌ ಮಸಾಲೆ ರುಬ್ಬಿಬಿಟ್ಟಳು ಹೊಸಾ ಸೊಸೆ.

ನನ್ನ ಅಣ್ಣ ಈಗ ಸುಮಾರು ಐವತ್ತು ವರ್ಷಗಳ ಹಿಂದೆಯೇ ಫಾರಿನ್ನಿಗೆ ಹೋಗಿದ್ದವನು ತುಂಬಿದ ಕುಟುಂಬದಲ್ಲಿ ಅಮ್ಮ ಪಡುತ್ತಿದ್ದ ಕಷ್ಟವನ್ನು ನೋಡಲಾಗದೇ ಆಗ ತಾನೆ ಹೊಸದಾಗಿ ಮಾರ್ಕೆಟ್ಟಿಗೆ ಬರಲಾರಂಭಿಸಿದ್ದ ಮಿಕ್ಸರ್‌ ಒಂದನ್ನು ತಂದುಕೊಟ್ಟಿದ್ದನು.  ಅಮ್ಮ ಅವನಿದ್ದಾಗ ಮಾತ್ರ ಬೈತಾನೆಂದು ಉಪಯೋಗಿಸಿ, ಅವನತ್ತ ಊರಿಗೆ ಹೋದ ಕೂಡಲೇ ಡಬ್ಬದಲ್ಲಿ ಹಾಕಿ ಇಟ್ಟುಬಿಡುತ್ತಿದ್ದರು.       ಕೇಳಿದರೆ – ಅಯ್ಯೋ ಅಷ್ಟು ಅಪರೂಪದ ವಸ್ತುವನ್ನು ಉಪಯೋಗಿಸಿ, ಉಪಯೋಗಿಸಿ ಹಾಳುಮಾಡಿಬಿಡಲೆ? ಜೋಪಾನವಾಗಿ ಇಟ್ಟಿದ್ದು ಅವನ ಮದುವೆಯಾಗಿ ಹೆಂಡತಿ ಬಂದ ನಂತರ ಅವಳಿಗೆ ಕೊಟ್ಟುಬಿಡುತ್ತೇನೆ.

ಇಂಥಹವರಿಗೆ ಏನು ಹೇಳುವುದು?

ಆಗಿನ ದಿನಗಳಲ್ಲಿ ನಮ್ಮ ಬೀದಿಯಲ್ಲಿ ಒಬೊಬ್ಬರ ಮನೆಯಲ್ಲಿ ಒಂದೊಂದು ದಿನ ಅವಲಕ್ಕಿ ಕುಟ್ಟುವ ಕೆಲಸವನ್ನು ಇಟ್ಟುಕೊಳ್ಳುತ್ತಿದ್ದರು.  ಅಕ್ಕಪಕ್ಕದ ಮನೆಯ ಹೆಂಗಸರು ಬಂದು ಸಹಾಯ ಮಾಡುತ್ತಿದ್ದರು.  ಮನೆಯಾಕೆ ಬಿಸಿನೀರಿಗೆ ಭತ್ತವನ್ನು ಹಾಕಿ ಹದಮಾಡಿ ತಂದು ತಂದು ಒರಳಿಗೆ ಸುರಿಯುತ್ತಿದ್ದರೆ, ಇಬ್ಬರು ಮಹಿಳೆಯರು ಕಲಾತ್ಮಕವಾಗಿ ಒಬ್ಬರು ಹಾರೆಯನ್ನು ಮೇಲೆ ಎತ್ತಿದಾಗ ಇನ್ನೊಬ್ಬರು ಒಳಗಿನ ಭತ್ತಕ್ಕೆ ಏಟು ಬೀಳುವಂತೆ ಕುಟ್ಟುತ್ತಿದ್ದರು.  ಮತ್ತೊಬ್ಬರು ಜರಡಿ ಹಿಡಿದು ಹೊಟ್ಟನ್ನು ತೆಗೆಯುತ್ತಿದ್ದರು.  ಹೀಗೆ ಎರಡು ಒರಳುಕಲ್ಲಿಗೆ ಆರುಜನ ಮತ್ತು ಮನೆಯಾಕೆ.  ಹೀಗೆ ಎಲ್ಲರ ಮನೆಗಳಲ್ಲೂ ವರ್ಷಕ್ಕಾಗುವಷ್ಟು ಅವಲಕ್ಕಿ ಕುಟ್ಟಿ ಇಟುಕೊಳ್ಳುತ್ತಿದ್ದರು.  ಹಪ್ಪಳ ಸಂಡಿಗೆ ಮಾಡಲೂ ಇದೇ ಸಹಕಾರ ತತ್ವವನ್ನು ಅನುಸರಿಸುತ್ತಿದ್ದರು.

ಮನೆ ಕಟ್ಟುವಾಗಲೂ ಬಾಗಿಲಿನ ಚೌಕಟ್ಟು ಇಡುವಾಗ ಮುಹೂರ್ತ ನೋಡುವಂತೆ, ಒರಳುಕಲ್ಲು ಹೂಳುವಾಗಲೂ ಮುಹೂರ್ತ ನೋಡಿ ಪೂಜೆ ಮಾಡಿ ಕೆಲಸ ಮುಂದುವರೆಸುತ್ತಿದ್ದರು.

ನಂತರದ ದಿನಗಳಲ್ಲಿ ನಿಂತು ಅಡುಗೆ ಮಾಡುವಂತೆ ಕಟ್ಟೆಗಳನ್ನು ಕಟ್ಟುವುದಕ್ಕೆ ಪ್ರಾರಂಭಿಸಿದ ನಂತರ ಒರಳು ಕಲ್ಲುಗಳನ್ನು ಕಟ್ಟೆಯ ಮೇಲೆಯೇ ಹೂಳುವುದೂ ಹಲವಾರು ದಶಕಗಳ ಕಾಲ ನಡೆದವು.  ಇತ್ತೀಚಿನ ದಿನಗಳಲ್ಲಿ ಅವೂ ಸಹ ಕಾಣೆಯಾಗುತ್ತಿವೆ.  ಪರ್ಯಾಯವಾಗಿ ಗ್ರೈಂಡರ್‌ ಗಳು, ಮಿಕ್ಸರ್‌ ಗಳು ಬಂದಿವೆಯಲ್ಲಾ.  ಕೆಲವರು ಮಿಕ್ಸರಿನಲ್ಲಿ ಸ್ವಲ್ಪ ಬಿಸಿಯಾಗಿ ರುಚಿ ಕೆಟ್ಟು ಹೋಗುತ್ತದೆ ಎಂದು ಗ್ರೈಂಡರ್‌ ಅನ್ನೇ ಉಪಯೋಗಿಸುತ್ತಾರೆ.  ಆದರೆ ಈಗಿನ ವಿಭಕ್ತ ಕುಟುಂಬಗಳಲ್ಲಿ ಸ್ವಲ್ಪ ಸ್ವಲ್ಪ ಮಾಡಲು ಗ್ರೈಂಡರ್‌ ಗಳಲ್ಲಿ ಕಷ್ಟವಾಗುತ್ತದೆ.

ಆದಾಗ್ಯೂ ಕೆಲವು ಪಾಕಪ್ರಿಯ ಮಹಿಳೆಯರು ಚಿಕ್ಕದೊಂದು ಒರಳು ಕಲ್ಲು, ರುಬ್ಬು ಗುಂಡನ್ನು ಇಟ್ಟುಕೊಂಡಿರುತ್ತಾರೆ.  ನೆಲಕ್ಕೆ ಹೂಳದೆ ಒಂದು ಜಾಗದಲ್ಲಿ ಇಟ್ಟಿರಬಹುದಾದಂತಹ ಸೆಟ್ಟುಗಳೂ ದೊರಕುತ್ತದೆ.  ಬಾಡಿಗೆ ಮನೆಯಾದರಂತೂ ಇಂತಹ ಸೆಟ್ಟನ್ನು ಇಟ್ಟುಕ್ಕೊಂಡು ಎಲೆಲ್ಲಿ ಹೋದರೂ ಕೊಂಡೊಯ್ಯುತ್ತಾರೆ.  ಅವರುಗಳ ಮನೆಯವರುಗಳಿಗೂ ಕೈಯಲ್ಲಿ ರುಬ್ಬಿ ಮಾಡಿದ ಖಾದ್ಯಗಳ ರುಚಿ ನಾಲಿಗೆಗೆ ಇಳಿದುಬಿಟ್ಟಿರುತ್ತದೆ.  ಅವರೆಲ್ಲಾ ಮಿಕ್ಸರ್‌, ಗ್ರೈಂಡರ್‌ ಗಳಲ್ಲಿ ಮಾಡಿದ ಅಡುಗೆಯನ್ನು ಸಬ್‌ ಸ್ಟಾಂಡರ್ಡ್‌ ಅಡುಗೆಯಂತೆ ನೋಡುತ್ತಾರೆ.

ಹಾಗೆಯೇ ರುಬ್ಬಲು ಅನುಕೂಲವಾಗುವಂತೆ ರುಬ್ಬುವ ಗುಂಡಿಗೆ ಮರದ ಹಿಡಿಯಿರುವ ಗುಂಡುಕಲ್ಲುಗಳೂ ಬರುತ್ತವೆ. 

ಮಸಲಧಾರೆ ಎಂದು ಕವಿಗಳು ವರ್ಣಿಸುವಾಗ ಜೋರಾಗಿ ಸುರಿವ ಮಳೆಯ ವರ್ಣನೆ ಎಂಬ ಅರಿವಿದ್ದರೂ ನಂತರದ ದಿನಗಳಲ್ಲಿ ನನ್ನ ಅರಿವಿಗೆ ಬಂದ್ದು ಮಸಲು ಎಂದರೆ ಒನಕೆ ಎಂಬುದು!

ಇನ್ನು ನಮ್ಮ ಮದುವೆ ಶಾಸ್ರ್ತಗಳೆಡೆ ಹೊರಳೋಣ.  ದೇವರ ಸಮಾರಾಧನೆ ಅಥವಾ ನಾಂದಿಪೂಜೆ ಎಂದು ಮದುವೆಗೆ ಮುಂಚೆ ವರ ಮತ್ತು ವಧುವಿನ ಮನೆಯಲ್ಲಿ ನಡೆಯುವ ಒಂದು ಮುಖ್ಯ ಕಾರ್ಯಕ್ರಮ ರೂಢಿಯಲ್ಲಿರುವುದಂತೂ ಎಲ್ಲರೂ ತಿಳಿದ ವಿಚಾರವೇ.  ಅಂದು ಅರಿಶಿನ ಕುಟ್ಟುವ ಶಾಸ್ತ್ರವೂ ಇರುತ್ತದೆ.  ಅಂದು ಒರಳು ಕಲ್ಲಿಗೆ, ಒನಕೆಗೆ ಪೂಜಿಸಿ ಹೆಂಗಳೆಯರು ಅರಿಶಿನ ಕುಟ್ಟುವ ಶಾಸ್ತ್ರವನ್ನು ನಡೆಸುತ್ತಾರೆ. ಅರಿಶಿನ ಕುಟ್ಟಿ ಹುಡಿಮಾಡಿ ಅದನ್ನು ಮದುವೆಯ ಮಂಗಳಕಾರ್ಯಕ್ಕಾಗಿ ಉಪಯೋಗಿಸುವುದು ಅಸಾಧ್ಯವಾದ ಕಾರಣ ಸಾಂಕೇತಿಕವಾಗಿ ಒರಳ ಕಲ್ಲಿಗೆ ಅರಿಶಿನದ ಹುಡಿ ಮತ್ತು ಅರಿಶಿನದ ಕೊಂಬುಗಳನ್ನು ಹಾಕಿ ವೈಯ್ಯಾರದಿಂದ ಚಂದವಾಗಿ ಅಲಂಕರಿಸಿಕೊಂಡ ಲಲನಾಮಣಿಯರು ಕುಟ್ಟುವಂತೆ ಅಭಿನಯಿಸಿ ಒರಳಿನಿಂದ ಹೊರತೆಗೆದು ಜರಡಿ ಹಿಡಿದಾಗ, ಏನಾಶ್ಚರ್ಯ! ನುಣ್ಣನೆಯ ಅರಿಶಿನದ ಪುಡಿ ಕೆಳಗಿಳಿಯುತ್ತದೆ.  ಎಲ್ಲರೂ ಹೋ.. ಎಂದು ಸಂಭ್ರಮಿಸುತ್ತಾರೆ.  ಮಿಕ್ಸಿ ಮುನ್ನಲೆಗೆ ಬಂದು ಒರಳುಕಲ್ಲು ಹಿನ್ನೆಲೆಗೆ ಸರಿಯುತ್ತಿದ್ದ ಕಾಲದಲ್ಲಿ ನಮ್ಮ ಪರಿಚಯದ ಮನೆಯ ಉಪನಯನದ ದೇವಾತಾಕಾರ್ಯದ ದಿವಸ ಮನೆಯೊಡತಿ ನಾವು ಯಾವುದರಿಂದ ದಿನ ನಿತ್ಯ ಪುಡಿ ಮಾಡುತ್ತೇವೆಯೋ ಅದನ್ನೇ ಪೂಜೆಗೆ ಇಡಬೇಕೆಂಬ ಹಠದೊಡನೆ ಮಂಟಪದ ಮುಂದಿನ ಭಾಗ ಬಿಟ್ಟು ಪ್ಲಗ್‌ ಪಾಯಿಂಟ್‌ ಇರುವ ಜಾಗದಲ್ಲಿ ಚಂದದ ರಂಗೋಲೆ ಹಾಕಿ ಹೂವಿನ ಕುಸುಮಗಳಿಂದ ಅಲಂಕರಿಸಿ ಮಧ್ಯದಲ್ಲಿ ಮಿಕ್ಸಿ (ಮಿಕ್ಸರಿನ ಶಾರ್ಟ್‌ ಫಾರಂ) ಇಟ್ಟು, ತಯಾರು ಮಾಡಿದ್ದರು.

ಸರಿ, ಶಾಸ್ತ್ರದ ಕಾರ್ಯಕ್ರಮಗಳು ಪ್ರಾರಂಭವಾಯಿತು.  ಮಿಕ್ಸಿ ಜಾರಿಗೆ ಅರಿಶಿನ ಕೊಂಬುಗಳನ್ನು ತುಂಬಲಾಯಿತು.  ಹೆಂಗಳೆಯರೆಲ್ಲ ಒಟ್ಟಾಗಿ ಸ್ವಿಚ್ಚಿನ ಮೇಲೆ ಕೈಯಿಟ್ಟು ಢರ್‌ . . . ಎನಿಸಿದರು.  ನಾಲ್ಕಾರು ಸುತ್ತು ತಿರುಗಿದ ಮಿಕ್ಸರ್‌ ಧಡ್‌ ಎನ್ನುವ ಸದ್ದಿನೊಂದಿಗೆ ಸ್ಥಬ್ದವಾಗಿ ನಿಂತುಬಿಟ್ಟಿತು.  ಹೊಗೆ ಬರತೊಡಗಿತು.  ಪಾಪ, ಯಜಮಾನಿಯ ಮೊಗ ಇಂಗು ತಿಂದ ಮಂಗನ ಹಾಗೆ ಆಯಿತು.  ತಕ್ಷಣ ಪಕ್ಕದ ಮನೆಯವರು ತಮ್ಮ ಮನೆಗೆ ಓಡಿ ಹೋಗಿ ಶೋಕೇಸಿನಲ್ಲಿಟ್ಟಿದ್ದ ತಮ್ಮ ಮಗಳ ಆಟಿಕೆಯ ಕಿಚನ್‌ ಸೆಟ್ಟಿನಿಂದ, ಮರದಿಂದ ಮಾಡಿದ  ಬಣ್ಣದ ಬೀಸುವ ಕಲ್ಲು, ಒರಳುಕಲ್ಲುಗಳನ್ನು ತಂದರು.  ಅರಿಶಿನ ಕುಟ್ಟುವ ಶಾಸ್ತ್ರ ಸುಸಂಪನ್ನಗೊಂಡಿತು.      

ಇತ್ತೀಚೆಗಂತೂ ಮದುವೆಯ ಕಾಂಟ್ರ್ಯಾಕ್ಟ್‌ ತೆಗೆದುಕೊಳ್ಳುವವರು ತಮ್ಮ ಸಾಮಾನು ಸರಂಜಾಮುಗಳ ಜೊತೆಗೆ ಒರಳು ಕಲ್ಲು, ಒನಕೆ, ಬೀಸುವ ಕಲ್ಲನ್ನೂ ತಂದು ಬಿಡುತ್ತಾರೆ.  ಅರಿಶಿನ ಕುಟ್ಟುವ ಶಾಸ್ತ್ರ ಬಹಳ ವರ್ಣಮಯವಾಗಿ ನೆರವೇರುತ್ತದೆ.  ಒನಕೆಗೆ ಚಿನ್ನದ ಬಳೆಗಳನ್ನು ತೊಡಿಸುವುದೇನು, ಒರಳು ಕಲ್ಲಿನ ಸುತ್ತಾ ಬಣ್ಣದ ರಂಗೋಲಿ, ಹೂವಿನ ಪಕಳೆಗಳಿಂದ ಅಲಂಕಾರಿಕ ಡಿಸೈನುಗಳನ್ನು ಬಿಡಿಸುವುದೇನು, ಬೀಸುವ ಕಲ್ಲಿಗೆ ಚಿನ್ನದ, ಮುತ್ತಿನ ಸರಗಳ ಅಲಂಕಾರವೇನು, ಹೀಗೆ ಹೊಸ ಹೊಸ ಅವಿಷ್ಕಾರಗಳು ಆಗುತ್ತಿವೆ. ಅಲ್ಲಿ ನೆರೆದಿರುವ ಹೆಂಗಳೆಯರು ಐದು, ಐದು ಜನರೇ ಬಂದು ಫೋಟೋಗೆ ಫೋಸ್‌ ಕೊಡುತ್ತಾ ಕುಟ್ಟುವ ನಾಟಕ, ಸ್ಸಾರಿ, ಶಾಸ್ತ್ರ ಮಾಡುತ್ತಾರೆ.  ಫೊಟೋಗ್ರಾಫರುಗಳು ಫೋಟೋ ಕ್ಲಿಕ್ಕಿಸುತ್ತಾರೆ.  ಕೆಲವೇ ಸೆಕೆಂಡುಗಳಲ್ಲಿ ಅವು ಸೋಷಿಯಲ್‌ ಮೀಡಿಯಾದಲ್ಲಿ ರಾರಾಜಿಸಿ, ಹಲವಾರು ಲೈಕುಗಳು, ಕಾಮೆಂಟುಗಳನ್ನು ಪಡೆಯುತ್ತವೆ.  ಒಂದು ಮೂಲೆಯಲ್ಲಿ ಬಿಮ್ಮನೆ ಕುಳಿತಿರುತ್ತಿದ್ದ ನಮ್ಮ ಗುಂಡುಕಲ್ಲುಗಳಿಗೀಗ ಸೋಷಿಯಲ್‌ ಮೀಡಿಯಾದಲ್ಲಿ ಚಂದದ ಮಹಿಳಾ ಮಣಿಯರೊಂದಿಗೆ ಮೆರೆಯುವ ಸದಾವಕಾಶ.

ಇನ್ನು ನಾಮಕರಣ ಶಾಸ್ತ್ರದಲ್ಲಿ ನಮ್ಮ ಗುಂಡುಕಲ್ಲಿಗೆ ಮಹತ್ತರವಾದ ಪಾತ್ರವೇ ಇದೆ.  ನಮ್ಮ ಕಡೆಯಂತೂ ಹುಟ್ಟಿದ  ಮಗುವಿಗೆ ಇಡುವ  ಐದು ಹೆಸರುಗಳಲ್ಲಿ ಒಂದು ಗುಂಡಪ್ಪ/ಗುಂಡಮ್ಮ ಇರಲೇ ಬೇಕು.  ಏಕೆಂದರೆ ಗುಂಡುಕಲ್ಲಿನ ಹಾಗೆ ಪೂರ್ಣಾಯಸ್ಸು ಹಾಕಿಕೊಂಡು ಆರೋಗ್ಯವಾಗಿರಲಿ ಎಂದು.  ಹಾಗೆಯೇ ಮಗುವನ್ನು ಮೊದಲಿಗೆ ತೊಟ್ಟಿಲಿಗೆ ಹಾಕುವಾಗಲೂ ಸಹ ಅರೆಯಲು ಉಪಯೋಗಿಸುವ ಕಲ್ಲನ್ನು ಚೆನ್ನಾಗಿ ತೊಳೆದು ಶುದ್ಧ ಮಾಡಿ ಅದಕ್ಕೆ ಸುಣ್ಣ, ಅರಿಶಿನ ಕುಂಕುಮಗಳನ್ನು ಹಚ್ಚಿ, ಹಸೀದಾರದಿಂದ ಬೇವಿನ ಸೊಪ್ಪನ್ನು ಕಟ್ಟಿ ಅದನ್ನು ಗುಂಡಪ್ಪ/ಗುಂಡಮ್ಮ ಎಂದು ಭಾವಿಸಿ ಅದಕ್ಕೆ ಪೂಜೆ ಸಲ್ಲಿಸಿ ಮೊದಲು ತೊಟ್ಟಿಲಲ್ಲಿ ಈ ಪೂಜಿಸಲ್ಪಟ್ಟ ಗುಂಡುಕಲ್ಲನ್ನು ಮಲಗಿಸಿ ನಂತರ ಮಗುವನ್ನು ಮಲಗಿಸುತ್ತಾರೆ.  ನಮ್ಮಜ್ಜಿ, ಮಗುವಿಗೆ ರಕ್ಷೆಯಿರಲಿ ಎಂಬ ಭಾವದಿಂದ ಹೀಗೆ ಮಾಡುತ್ತೇವೆ ಎಂದರೆ, ವಿಜ್ಞಾನ ವಿದ್ಯಾರ್ಥಿಯಾದ ನಮ್ಮ ಅಣ್ಣನ ವಾದವೇ ಬೇರೆ ಇದೆ.   ಅತ್ಯಂತ ಕೋಮಲವಾದ ನವಜಾತ ಶಿಶುವನ್ನು ತಾಯಿಯ ತೊಡೆಯಿಂದ ಮೊದಲಬಾರಿಗೆ ತೊಟ್ಟಲಲ್ಲಿ ಮಲಗಿಸುವ ಮುಂಚೆ ಅತ್ಯಂತ ಔಷಧೀಯ ಗುಣಗಳನ್ನು ಹೊಂದಿರುವ ಬೇವಿನಸೊಪ್ಪು, ಹಾಗೆಯೇ ಸುಣ್ಣದ ಪಟ್ಟಿಯನ್ನು ಲೇಪಿಸಿಕೊಂಡ ಭಾರವಾದ ಗುಂಡುಕಲ್ಲನ್ನು ತೊಟ್ಟಿಲಲ್ಲಿ ಇಡುವುದರಿಂದ ಅಕಸ್ಮಾತ್‌ ಯಾವುದಾದರೂ ಸೂಕ್ಷ್ಮ ಕೀಟಾಣುಗಳು ಇದ್ದರೆ ಅವು ನಾಶವಾಗಿ ಮಗುವಿಗೆ ಯಾವ ತೊಂದರೆಯೂ ಆಗದಿರಲಿ ಎಂಬುದು ನಮ್ಮವರ ಹಿಂದಿನ ಆಲೋಚನೆ ಎಂಬುದು ಅವನ ವಾದ. ಗುಂಡುಕಲ್ಲಿನ ಶಾಸ್ತ್ರವಂತೂ ಸಾಂಗೋಪಾಂಗವಾಗಿ ಎಲ್ಲ ನಾಮಕರಣ ಮಹೋತ್ಸವಗಳಲ್ಲಿ ನೆರವೇರುತ್ತದೆ.

ನಾವುಗಳು ಚಿಕ್ಕವರಿದ್ದ ಕಾಲದಲ್ಲಿ ಕೈಗಳಿಗೆ ಗೋರಂಟಿ/ಮೆಹಂದಿಯನ್ನು ಹಾಕಿಕೊಳ್ಳುವುದು ಇಷ್ಟು ಸುಲಭದ ಕೆಲಸವಾಗಿರಲಿಲ್ಲ.  ರೆಡಿಮೇಡ್‌ ಕೋನುಗಳು, ಮೆಹೆಂದಿ ಪುಡಿಗಳು ನಮ್ಮ ದಕ್ಷಿಣದ ಕಡೆ ಸಿಗುತ್ತಿರಲಿಲ್ಲ. ಸೊಪ್ಪನ್ನು ತಂದು ಒರಳುಕಲ್ಲಿಗೆ ಹಾಕಿ ಒಬ್ಬರು ಚೆನ್ನಾಗಿ ರುಬ್ಬಿ, ಎಲ್ಲರೂ  ಹಚ್ಚಿಕೊಳ್ಳುತ್ತಿದ್ದರು.  ಆದರೆ ರುಬ್ಬಿದವರ ಕೈಗಳು ಪೂರ್ತಿ ಕೆಂಪಾಗಿಬಿಟ್ಟಿರುತ್ತಿದ್ದವು.  ಹಾಗಾಗಿ ಅವರ ಅಂಗೈಗಳಲ್ಲಿ ಚೆಂದದ ಚಿತ್ತಾರ ಮೂಡಲು ಸಾಧ್ಯವಾಗುತ್ತಿಲಿಲ್ಲ.  ಅದಕ್ಕೇ ನೀನು ರುಬ್ಬು, ನೀನು ರುಬ್ಬು ಎಂದು ಬೇರೆಯವರನ್ನು ಮುಂದಕ್ಕೆ ತಳ್ಳುತ್ತಿದ್ದರು.  ನಮ್ಮಗಳ ಕಾಟ ತಡೆಯಲಾರದೆ ಅಮ್ಮನೋ ಚಿಕ್ಕಮ್ಮನೋ ಯಾರಾದರೊಬ್ಬರು – ಅಯ್ಯೋ ಹೋಗಲಿ ಬಿಡ್ರೆ, ನಾನು ರುಬ್ಬಿಕೊಡುತ್ತೇನೆ – ಎನ್ನುತ್ತಿದ್ದರು.  ನಮಗೆಲ್ಲಾ ಖುಷಿಯೋ ಖುಷಿ.  ನಮ್ಮ ಮನೆಯ ಬೀದಿಯಲ್ಲಿ ಒಬ್ಬರೇ ಒಬ್ಬರ ಮನೆಯಲ್ಲಿ ಗೋರಂಟಿ ಸೊಪ್ಪಿನ ಚಿಕ್ಕ ಮರ ಇತ್ತು ನಮಗೋ ಅದರ ಎಲೆಗಳು ಕೈಗಳಿಗೆ ಎಟುಕಿಸುತ್ತಿರಲಿಲ್ಲ.  ಯಾರಾದರೂ ಕಿತ್ತು ಕೊಡಬೇಕು.  ಅವರ ಮನೆಯವರೂ ಒಮ್ಮೊಮ್ಮೆ ಕಿತ್ತುಕೊಳ್ಳಲು ಅನುಮತಿ ನೀಡಿದರೆ, ಮತ್ತೊಮ್ಮೆ ರೇಗಿ ಕಳುಹಿಸಿ ಬಿಡುತ್ತಿದ್ದರು.  ಒಮ್ಮೆಯಂತೂ ಅವರು ಅದೇಕೋ ಮರದ ಸುಮಾರು ಭಾಗವನ್ನು ಕಡಿಸಿಬಿಟ್ಟರು.  ಎಲ್ಲರೂ ಎಷ್ಟು ಬೇಕಾದರೂ ಕಿತ್ತುಕೊಂಡು ಹೋಗಿ ಎಂದು ಬಿಟ್ಟರು.  ನಮಗೆಲ್ಲಾ ಸ್ವರ್ಗವೇ ಸಿಕ್ಕಷ್ಟು ಸಂತಸ.  ಸರಿ, ಹಾಕಿಕೊಳ್ಳುತ್ತಿದ್ದ ಉದ್ದನೆಯ ಲಂಗವನ್ನೇ ಚೀಲದಂತೆ ಮಾಡಿ ಹಿಡಿದು ಹೊರೆ ಹೊರೆ ಸೊಪ್ಪು ಬಿಡಿಸಿ ತಂದೆವು. ಅವರ ಮನೆಯವರು – ಏ, ಏನ್ರೇ ಪಲ್ಯ ಮಾಡಿ ತಿಂತೀರಾ? – ಎಂದು ಮುಸಿ ಮುಸಿ ನಕ್ಕರು.  ನಾವಂತೂ ಮನೆಗೆ ತಂದರೆ, ಅಮ್ಮ ಒರಳು ಕಲ್ಲು ಕೊಡುವುದಿಲ್ಲ, ಇಂದು ಮಸಾಲೆ ಕುಟ್ಟ ಬೇಕು ಏನಾದ್ರೂ ಮಡ್ಕೋ ಹೋಗಿ ಎಂದು ಬಿಟ್ಟರು.  ಅಜ್ಜಿಯೇ ಮನೆಯ ಹಿತ್ತಲಲ್ಲಿರುವ ಒಂದು ದೊಡ್ಡ ಕಲ್ಲಿನ ಮೇಲೆ ಇಟ್ಟು ಅರೆಯಲು ಹೇಳಿ ಒಂದು ಗುಂಡುಕಲ್ಲನ್ನು ಕೊಟ್ಟರು.  ಎಷ್ಟು ಸೊಪ್ಪು ಇತ್ತು ಅಂದರೆ, ಒಬ್ಬರ ಕೈಯಲ್ಲಿ ಅರೆಯಲು ಸಾಧ್ಯವಾಗುವಂತಿರಲಿಲ್ಲ.  ಸರೀ ಎಲ್ಲರೂ ಸ್ವಲ್ಪ ಸ್ವಲ್ಪ ಎಂದು ಅರೆದರೆ, ನಂತರ ನೋಡುತ್ತೀವಿ, ಎಲ್ಲರ ಕೈಗಳೂ ಪೂರ್ತಿ ಚಂದದ ರಕ್ತ ವರ್ಣ! ಇನ್ನು ಹಚ್ಚಿಕೊಳ್ಳುವುದೆಲ್ಲಿಗೆ? ಮೂರ್ನಾಕು ದಿನಗಳು ಇಟ್ಟು ವಾಸನೆ ಬಂದ ಮೇಲೆ ಬಿಸಾಕಿದ್ದಾಯಿತು.  ನಮ್ಮಗಳ ಸಂಕಟ ಹೇಳತೀರದು.

ಇನ್ನು ನಮ್ಮ ಈ ಗುಂಡುಕಲ್ಲುಗಳು ರುಬ್ಬಿಸಿ ರುಬ್ಬಿಸಿಕೊಂಡು ಕೆಲವೊಮ್ಮೆ ತುಂಬಾ ನುಣುಪಾಗಿ ಬಿಟ್ಟಿರುತ್ತದೆ.  ಆಗ ಅರೆಯುವುದು, ಕುಟ್ಟುವುದು, ಬೀಸುವುದು ಸ್ವಲ್ಪ ತ್ರಾಸದಾಯಕವಾಗುತ್ತಾ ಹೋಗುತ್ತದೆ.  ಆಗಿನ ದಿನಗಳಲ್ಲಿ ಮನೆಯ ಮುಂದೆ ಕೆಲವರು ಕೂಗಿಕೊಂಡು ಬರುತ್ತಿದ್ದರು – ಕಲ್ಲುಮುಳ್ಳು ಹುಯ್ಯಿಸುತ್ತೇರನಮ್ಮಾ. .  ಕಲ್ಮುಳ್ಳೂ . . – ಅಂತ.  ಅವರುಗಳು ಸಣ್ಣ ಉಳಿ ಮತ್ತು ಸುತ್ತಿಗೆಯನ್ನು ಉಪಯೋಗಿಸಿ ಜಾನೂಕಾಗಿ ಕುಟ್ಟಿ ಕುಟ್ಟಿ ನುಣುಪಾದ ನಮ್ಮ ಕಲ್ಲುಗಳನ್ನು ಮತ್ತೆ ಫಟಾ ಫಟ್‌ ಉಪಯೋಗಕ್ಕೆ ಬರುವಂತೆ ಮಾಡಿಕೊಟ್ಟುಬಿಡುತ್ತಿದ್ದರು.  ಅಷ್ಟೇ ಅವುಗಳ ನಿರ್ವಹಣಾ ಕಾರ್ಯ.

ಇಂದಿಗೂ ಹಳ್ಳಿಗಾಡಿನ ಕಡೆ, ಬರಿಯ ಹಳ್ಳಿಗಳ ಕಡೆ ಏಕೆ, ನಗರಗಳಲ್ಲೂ ಸಂಪ್ರದಾಯವನ್ನು ಅತೀ ಪ್ರೀತಿಸುವ ಮನೆಗಳಲ್ಲಿ, ಹೊಸತನಕ್ಕೆ, ಹೊಸ ಅವಿಷ್ಕಾರಗಳಿಗೆ ತಮ್ಮನ್ನು ತಾವು ಒಗ್ಗಿಕೊಳ್ಳದ ಕುಟುಂಬಗಳಲ್ಲಿ ಈ ಗುಂಡು ಕಲ್ಲು, ಒರಳುಕಲ್ಲು, ಬೀಸುವ ಕಲ್ಲು, ಹಾರೆ, ಒನಕೆಗಳ ವೈಭೋಗವನ್ನು ನೋಡಬಹುದಾದರೂ ಅಪರೂಪವಾಗಿರುವುದಂತೂ ಖಂಡಿತಾ ನಿಜ.

ಇನ್ನೊಂದೆರಡು ತಲೆಮಾರುಗಳಲ್ಲಿಯೇ, ನಮ್ಮ ಮುಂದಿನ ಪೀಳಿಗೆಯ ಯುವ ಜನಾಂಗ- ಹಾಂ, ಕೆಳಗೆ ಕುಳಿತು ಕೈಯಿಂದ ರುಬ್ಬುವುದು, ಕುಟ್ಟುವುದು, ಬೀಸುವುದು ಮಾಡುತ್ತಿದ್ದಾರಾ, ಮಾಡಿ ಟೈಂ ವೇಸ್ಟ್‌ ಮಾಡಿಕೊಳ್ಳುತ್ತಿದ್ದರಾ – ಎಂದು ಕುಹಕವಾಡಬಹುದು ಅಥವಾ “ಚರಿತ್ರೆ ಮರುಕಳಿಸುತ್ತದೆ” ಎಂಬ, ಬಲ್ಲವರ ಬೆಲ್ಲದ ಮಾತಿನಂತೆ ಮತ್ತೆ ಮನೆ ಮನೆಯಲ್ಲೂ ಈ ಪರಿಕರಗಳು ರಾರಾಜಿಸಿ ನಾಲಿಗೆ ಚಪ್ಪರಿಸುವ ರುಚಿಯ ಜೊತೆಗೆ ದೈಹಿಕ ವ್ಯಾಯಾಮಕ್ಕೂ ಕಾರಣವಾಗಬಹುದು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯವಷ್ಟೆ.

ಪದ್ಮಾ ಆನಂದ್‌, ಮೈಸೂರು

11 Responses

  1. ಪದ್ಮಾ ಆನಂದ್ says:

    ಪ್ರಕಟಿಸಿದ “ಸುರಹೊನ್ನೆ”ಗೆ ಧನ್ಯವಾದಗಳು.

  2. MANJURAJ H N says:

    ಪೂರ್ತ ಓದಿದೆ ಮೇಡಂ.
    ನಿಮ್ಮ ಬರೆಹಕೂ ನನಗೂ ಏನೋ ಸ್ಫೂರ್ತಿಯ ನಂಟು!
    ಏಕೆಂದರೆ ನೀವು ಪ್ರಾರಂಭದಲಿ ಪ್ರಸ್ತಾಪಿಸಿದ ಗುಂಡು
    ಕುರಿತು ಬರೆಯುತ್ತಿರುವೆ!

    ಹಲವು ವಿಚಾರಗಳು ತಿಳಿದವು. ಏಕೆಂದರೆ ನನ್ನದು
    ಅರ್ಧಂಬರ್ಧ ಪೀಳಿಗೆ. ಆ ಕಡೆ ಹಳಬನೂ ಆಗಲಿಲ್ಲ;
    ಈ ಕಡೆ ಹೊಸಬನೂ ಆಗಲಿಲ್ಲ. ಹಾಗಾಗಿ.

    ನಿಮ್ಮ ನೆನಪುಗಳ ಸರಮಾಲೆಯೇ ಇಲ್ಲಿ ಹರವಿಕೊಂಡಿದೆ.
    ರುಬ್ಬುವಾಗ ಹರಡುವಂತೆ; ಜೊತೆಗೆ ಘಮ್ಮೆನ್ನುವಂತೆ !!

    ಆಹ್ಲಾದಗೊಂಡೆ. ಧನ್ಯವಾದಗಳು

    • Anonymous says:

      ನಿಮ್ಮ ಚೇತೋಹಾರಿ ಪ್ರತಿಕ್ರಿಯೆಗಾಗಿ ತುಂಬ ತುಂಬ ಧನ್ಯವಾದಗಳು ಸರ್.

  3. ಗುಂಡು ಕಥೆಯ ಲೇಖನ..ಹಳೆಯ ತಲೆಮಾರುಗಳ..ನೆನಪಿನಂಗಳದಿಂದ..ಅದರ ಪ್ರಯೋಜನ ಉಪಯೋಗಿಸುವ ರೀತಿಗಳನ್ನು ಹೇಳುತ್ತಲೇ ಹೊಸತಲಮಾರಿನಲ್ಲಿ ಬದಲಾದ.. ವ್ಯವಸ್ಥೆ.. ಅಲ್ಲಿ ನೆಡೆದ ಕೆಲವು..ಅವಾಂತರ ಗಳನ್ನು ವಿವರಿಸುತ್ತಾ.. ಹೊಸ ಮಾದ್ಯಮಗಳಲ್ಲಿ ಆ ಗಂಡಿನ ಪ್ರದರ್ಶನ..ಇತಿಹಾಸ ಮತ್ತೆ ಮರುಕಳಿಸಿ ಬಳಕೆಗೆ ಬರಬಹುದೆಂಬ ಆಸೆಯಂದ ಮುಕ್ತಾ ಯ ಮಾಡುರುವುದು..ಚೆನ್ನಾಗಿ ಓದಿಸಿಕೊಂಡುಹೋಯಿತು.. ಅದಕ್ಕೆ ಪೂರಕ ಚಿತ್ರ ಗಳು ಮನಕ್ಕೆ ಸಂತಸ ತಂದಿತು.. ಈ ಮೂಲಕ ನಮ್ಮ ಗತಕಾಲದ ನೆನಪಿಗೆ ಕರೆದುಕೊಂಡ ನಿಮಗೆ ನಮನ ಗೆಳತಿ ಪದ್ಮಾ

    • Anonymous says:

      ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ತುಂಬು ಮನದ ಧನ್ಯವಾದಗಳು.

  4. Hema Mala says:

    ಹಳೆಯ ನೆನಪುಗಳ ಮೆರವಣಿಗೆ..ಬರಹ ಬಹಳ ಸೊಗಸಾಗಿ ಮೂಡಿ ಬಂದಿದೆ.

    • ಪದ್ಮಾ ಆನಂದ್ says:

      ಧನ್ಯವಾದಗಳು ಮೆಚ್ಚುಗೆಯ ಪ್ರತಿಕ್ರಿಯೆಗಾಗಿ

  5. ನಯನ ಬಜಕೂಡ್ಲು says:

    ಬಹಳ ಸುಂದರವಾಗಿದೆ ಲೇಖನ. ಕಳೆದ ಕಾಲದೊಳಗೊಮ್ಮೆ ಹೊಕ್ಕು ಬಂದೆ.

    • ಪದ್ಮಾ ಆನಂದ್ says:

      ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ವಂದನೆಗಳು.

  6. ಶಂಕರಿ ಶರ್ಮ says:

    ರುಬ್ಬುವ ಕಲ್ಲುಗುಂಡು, ಬೀಸುವ ಕಲ್ಲುಗಳ ಸಾಪ್ರದಾಯಿಕ ಹಾಗೂ ಅಡುಗೆ ಮನೆ ಉಪಯೋಗಗಳು ಹುಬ್ಬೇರಿಸುವಂತಿವೆ. ನೆತ್ತಿ ಮೇಲೆ ಮರದ ಗೂಟ ಸಿಕ್ಕಿಸಿಕೊಂಡು ಅಡುಗೆ ಮನೆಯಲ್ಲಿ ಕುಳಿತ ನಮ್ಮನೆ ರುಬ್ಬುವ ಕಲ್ಲು, ವಿದ್ಯುತ್ ಇಲ್ಲದ ದಿನಗಳಲ್ಲಿ ಆಗಾಗ ಹೆಮ್ಮೆಯಿಂದ ತನ್ನ ಸೇವೆಯನ್ನು ನೀಡುತ್ತಿದೆ. ಚಂದದ ಲೇಖನಕ್ಕೆ ಧನ್ಯವಾದಗಳು ಪದ್ಮಾ ಮೇಡಂ.

    • ಪದ್ಮಾ ಆನಂದ್ says:

      ವಿದ್ಯುತ್ ಕೈಕೊಟ್ಟರೆ menu ನೇ ಬದಲಾಯಿಸಿಬಿಡುವ ಈ ಕಾಲದಲ್ಲೂ ನಿಮ್ಮನೆಯ ರುಬ್ಬುಗುಂಡು ಕಾರ್ಯಪ್ರವೃತ್ತವಾಗುವುದ ತಿಳಿದು ಸಂತಸವಾಯಿತು. ಮೆಚ್ಚುಗೆಯ ಪ್ರತಿಕ್ರಿಯೆಗಾಗಿ ವಂದನೆಗಳು ಶಂಕರಿ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: