ಅಕ್ಷಯ ತೃತೀಯ 

Share Button

ಅಕ್ಷಯವೆಂದರೆ, ಕ್ಷಯಿಸದಿರುವ, ನಾಶವಾಗದಿರುವ ಎಂದರ್ಥ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವೇ ಈ ಶುಭ ದಿನವಾಗಿದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  ಈ ದಿನದಂದು ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯುಚ್ಚ ಪ್ರಮಾಣ ತಲಪಿ ಉಚ್ಚ ರಾಶಿಯಲ್ಲಿರುವರು. ರವಿಯು ಆತ್ಮ ಹಾಗೂ ದೇಹಕಾರಕನಾದರೆ; ಚಂದ್ರನು ಮನಸ್ಸುಕಾರಕ. ಆದ್ದರಿಂದಲೇ ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಹೊಂದುವ ಪುಣ್ಯದಿನವಾಗಿದೆ. ಅಕ್ಷಯ ತೃತೀಯ ದಿನದಂದು ಅನೇಕ ಅತ್ಯುತ್ಕೃಷ್ಟ ಘಟನೆಗಳು ನಡೆದಿವೆ. ಭಗೀರಥನ ತಪಸ್ಸು ಫಲಿಸಿ ಗಂಗೆಯು ಶಿವನ ಜಟೆಯಿಂದ ಭೂಸ್ಪರ್ಶ ಮಾಡಿದ ದಿನ, ಮುಕ್ತಿದ್ವಾರವಾದ ಬದರಿಯ ಬದರೀ ನಾರಾಯಣ ಮಂದಿರದ ದ್ವಾರವನ್ನು ತೆರೆಯುವುದು ಮಾತ್ರವಲ್ಲದೆ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಜಯಂತಿ ಹಾಗೂ ತ್ರೇತಾಯುಗದ ಪ್ರಾರಂಭದಲ್ಲಿ ವೇದವ್ಯಾಸರು ಮಹಾಭಾರತ ಮಹಾಕಾವ್ಯವನ್ನು ಬರೆಯಲು ಪ್ರಾರಂಭಿಸಿದ ದಿನವೇ ಇದಾಗಿದೆ. ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳಲ್ಲಿ ಅರ್ಥ ಪುರುಷಾರ್ಥವನ್ನು ಪಡೆಯಲು ಈ ದಿನ ಮಾಡುವಂತಹ  ನಾರಾಯಣ ಮತ್ತು ಲಕ್ಷ್ಮಿ ಇವರ ಪೂಜೆ ಶ್ರೇಷ್ಠವೆನಿಸಿದೆ. ಈ ಪೂಜೆಯಿಂದ ಉಳಿತಾಯ ಮತ್ತು ಸಂಪತ್ತಿನ ಸದುಪಯೋಗ ಮತ್ತು ಪೂರ್ಣಫಲ ದೊರೆಯುವುದು.  ಅಕ್ಷಯ ತೃತೀಯಕ್ಕೆ ಸಂಬಂಧಿಸಿದಂತೆ ಹಲವಾರು ಪೌರಾಣಿಕ ಕಥೆಗಳಿವೆ. ಅವುಗಳಲ್ಲೊಂದು, ಪಾಂಡವರು ವನವಾಸದಲ್ಲಿದ್ದಾಗ ಅವರು ಅಕ್ಷಯಪಾತ್ರೆಯನ್ನು ಪಡೆದ ಕಥೆ.

ಕಾಮ್ಯಕಾರಣ್ಯದಲ್ಲಿ ಪಾಂಡವರು ವನವಾಸವನ್ನು ಮಾಡುತ್ತಿದ್ದ ಸಮಯದಲ್ಲಿ ಅವರ ಜೊತೆಗೆ ಧೌಮ್ಯ ಋಷಿಗಳು ಮತ್ತು ಅವರ ಶಿಷ್ಯಂದಿರಿದ್ದರು. ಮಾತ್ರವಲ್ಲದೆ, ಪಾಂಡವರ ಜೊತೆಗಿದ್ದ ಅಂತ:ಪುರದವರಿಗೆಲ್ಲಾ ದಿನ ಕಳೆದಂತೆ ಆಹಾರದ ಕೊರತೆ ಕಾಡಲಾರಂಭಿಸಿತು. ರಾಜನ ಸ್ಥಾನದಲ್ಲಿದ್ದ ಧರ್ಮರಾಯನು ಬಹಳ ಚಿಂತಿತನಾದನು. ಇದನ್ನರಿತ ಧೌಮ್ಯ ಋಷಿಗಳು, ಸಕಲ ಚರಾಚರಗಳಿಗೆ ಆಹಾರ ನೀಡುವ ಸೂರ್ಯದೇವನನ್ನು ಕುರಿತು ತಪಸ್ಸನ್ನಾಚರಿಸಿದಲ್ಲಿ ಇದಕ್ಕೆ ಸೂಕ್ತವಾದ ಪರಿಹಾರವು ದೊರೆಯಬಹುದೆಂಬುದಾಗಿ ಸೂಚಿಸಿದರು. ಜೊತೆಗೆ, ತಪಸ್ಸಿಗಾಗಿ ನಿಯತವಾಗಿರುವ ಮೂಲಮಂತ್ರವನ್ನು ಧರ್ಮರಾಯನಿಗೆ ಉಪದೇಶಿಸಿದರು. ಎಡೆಬಿಡದೆ ಮೂರು ದಿನಗಳ ಕಾಲ ತಪನ್ನಾಚರಿಸಿದ ಧರ್ಮರಾಜನಿಗೆ ಸೂರ್ಯದೇವನು ಒಲಿದು ಅವನಿಗೆ ಒಂದು ಪಾತ್ರೆಯನ್ನು ನೀಡಿ, ಅದನ್ನು ದ್ರೌಪದಿಯ ಕೈಯಲ್ಲಿ ಕೊಡಲು ಹೇಳಿದನು. ದ್ರೌಪದಿಯು ಅದನ್ನು ಅಡುಗೆ ಕೋಣೆಯಲ್ಲಿಟ್ಟು ಸರಿಯಾದ ಹೊತ್ತಿಗೆ ಪೂಜಿಸಿದರೆ ಬೇಡಿದ ಭಕ್ಷ್ಯಭೋಜ್ಯಗಳು ಅಕ್ಷಯ ರೂಪದಲ್ಲಿ ಪ್ರಾಪ್ತಿಯಾಗುತ್ತವೆ. ಬೇಕಾದಷ್ಟು ಬಡಿಸಿ, ಕೊನೆಗೆ ದ್ರೌಪದಿಯು ಉಂಡು ತೃಪ್ತಿ ಹೊಂದಿದ ಬಳಿಕ ಆ ದಿನದ ಅದರ ಅಕ್ಷಯ ಅನುಗ್ರಹವು ಕೊನೆಗೊಳ್ಳುವುದು. ಆದರೆ, ಮರುದಿನ ಮೊದಲಿನಂತೆಯೇ ಅನುಗ್ರಹಿಸುವುದು. ವನವಾಸದ ಅವಧಿಯು ಕೊನೆಗೊಳ್ಳುವ ವರೆಗೆ ಅಕ್ಷಯಪಾತ್ರೆಯ ಅಕ್ಷಯಫಲ ದಿನಕ್ಕೊಮ್ಮೆ ಸಿದ್ಧಿಸುವುದು ಎಂಬುದಾಗಿ ಅನುಗ್ರಹಿಸಿದನು. ಅಕ್ಷಯ ತೃತೀಯದ ದಿನದಂದೇ ಈ ಪುಣ್ಯತಮವಾದ ಅಕ್ಷಯಪಾತ್ರೆಯನ್ನು ಪಾಂಡವರು ಸೂರ್ಯದೇವನಿಂದ ಪಡೆದರು. ಅಂತೆಯೇ, ವನವಾಸದ ದಿನಗಳಲ್ಲಿ ಪಾಂಡವರು ಆಹಾರವನ್ನು ಯಾವುದೇ ಕೊರತೆಯಿಲ್ಲದೆ ಅಕ್ಷಯಪಾತ್ರೆಯಿಂದ ಪಡೆಯುವಂತಾಯಿತು.

ಅಕ್ಷಯಪಾತ್ರೆಗೆ ಪೂರಕವಾಗಿ ನಡೆದ ವಿಶೇಷವಾದ ಘಟನೆಯೊಂದು ಬಹಳ ಸ್ವಾರಸ್ಯಕರವಾಗಿದೆ. ಒಮ್ಮೆ ದೂರ್ವಾಸ ಮುನಿಗಳು ತಮ್ಮ ನೂರಾರು ಮಂದಿ ಶಿಷ್ಯರೊಡಗೂಡಿ ವನವಾಸದಲ್ಲಿದ್ದ ಪಾಂಡವರ ನಿವಾಸಕ್ಕೆ ಬರುವರು. ಊಟಕ್ಕೆ ಮೊದಲು ಸ್ನಾನ ಮಾಡಿ ಬರುವೆವೆಂದು ಎಲ್ಲರೂ ನದಿಯತ್ತ ತೆರಳಿದರು. ಆದರೆ ಇಲ್ಲಿ ಪಾಂಡವರೆಲ್ಲರ ಊಟ ಮಾತ್ರವಲ್ಲದೆ ದ್ರೌಪದಿಯೂ ತನ್ನ ಊಟ ಮುಗಿಸಿದ್ದಳು. ಇದರಿಂದಾಗಿ ನಿಯಮದಂತೆ, ಅಕ್ಷಯಪಾತ್ರೆಯಿಂದಲೂ ಆಹಾರವನ್ನು ಪಡೆಯುವಂತೆ ಇರಲಿಲ್ಲ. ನೂರಾರು ಮಂದಿ ಅತಿಥಿಗಳಿಗೆ ಊಟವಿಕ್ಕಲು ಮಾರ್ಗವೊಂದೂ ತೋಚದೆ ಬಹಳ ಚಿಂತಿತಳಾದ ದ್ರೌಪದಿಯು ಆಪದ್ಬಾಂಧವ ಶ್ರೀಕೃಷ್ಣನನ್ನು ಪ್ರಾರ್ಥಿಸಿದಳು. ತಕ್ಷಣ ಪ್ರಕಟಗೊಂಡ ಮಾಧವನು ಅಕ್ಷಯಪಾತ್ರೆಯನ್ನು ತರಲು ಹೇಳಿದನು. ಅದರಲ್ಲೇನೂ ಉಳಿದಿಲ್ಲವೆಂದು ದ್ರೌಪದಿಯು ಹೇಳಿದರೂ; ನೋಡೋಣ ಏನಿದೆಯೆಂದು ನುಡಿಯುತ್ತಾ ಪಾತ್ರೆಯೊಳಗೆ ಶ್ರೀಕೃಷ್ಣನು ಕೈಹಾಕಿ ತಡವಿದಾಗ ಒಂದು ಅನ್ನದ ಅಗುಳು ಅವನ ಕೈಗೆ ಸಿಕ್ಕಿತು. ಅದನ್ನೇ ಅವನು ತಿಂದು ತೃಪ್ತಿಯಾಯಿತು ತಂಗಿ ಎಂದು ಡರ್ ಎಂದು ತೇಗಿದ. ಅದೇ ಸಮಯಕ್ಕೆ ನದಿಯಲ್ಲಿ ಸ್ನಾನಮಾಡುತ್ತಿದ್ದ ದೂರ್ವಾಸ ಮುನಿ ಮತ್ತು ಅವರ ಶಿಷ್ಯರ ಹೊಟ್ಟೆಯೂ ತುಂಬಿತು!. ಆದ್ದರಿಂದ ಅವರೆಲ್ಲರೂ ಅಲ್ಲಿಂದಲೇ ಹಿಂತಿರುಗಿದರು.  ಈ ಘಟನೆಯು ಅಕ್ಷಯ ತೃತೀಯದಂದು ನಡೆಯಿತೆಂದು ಉಲ್ಲೇಖಿಸಲಾಗಿದೆ.  

ಯಾವುದೇ ಶುಭಕಾರ್ಯವನ್ನು ಈ ದಿನ ಮಾಡಲು ಮುಹೂರ್ತ ನೋಡಬೇಕಾಗಿಲ್ಲವೆಂಬ ನಂಬಿಕೆಯಿದೆ. ಮಾತ್ರವಲ್ಲದೆ, ಶುಭ ಫಲವು  ಅಕ್ಷಯವಾಗಿ ಲಭಿಸುವುದು. ದಾನ, ಸಹಾಯಗಳಂತಹ ಸದಾಶಯದಿಂದ ಕೂಡಿದ ಸಕಾರ್ಯದ ಜಯವನ್ನು ಅಂದರೆ ಫಲ ಸಿದ್ಧಿಯನ್ನು ದೊರಕಿಸುವುದಕ್ಕೆ ಪ್ರಶಸ್ತವಾದ ತಿಥಿ ಅಥವಾ ದಿನವು ಇದಾಗಿದೆ. ಇದನ್ನು ಜಯಾತಿಥಿ ಎಂದೂ ಕರೆಯಲಾಗುತ್ತದೆ. ವಿಧಿಪೂರ್ವಕವಾಗಿ ಈ ಹಬ್ಬವನ್ನು ಆಚರಿಸಿದರೆ, ಅದರ ಹೆಸರಿಗೆ ಅನ್ವರ್ಥವಾದ ಅಕ್ಷಯಫಲವು ನಿಶ್ಚಯವಾಗಿಯೂ ಪ್ರಾಪ್ತವಾಗುವುದರಲ್ಲಿ ಸಂಶಯವಿಲ್ಲ.

ಶಂಕರಿ ಶರ್ಮ , ಪುತ್ತೂರು .

9 Responses

  1. ಅಕ್ಷಯ ತೃತೀಯದ ಅರ್ಥ.. ಪೌರಾಣಿಕ ಹಿನ್ನೆಲೆಯಲ್ಲಿ ಬರುವ ಸಂದರ್ಭ ಅದರ ಮಹತ್ತ್ವ ವನ್ನು..ಕಥಾ ನಕವಾಗಿ ಹೇಳಿ ರುವ ರೀತಿ ಸೊಗಸಾದ ನಿರೂಪಣೆ ಯಲ್ಲಿ ಅನಾವರಣ ವಾಗಿದೆ ಶಂಕರಿ ಮೇಡಂ.

    • ಶಂಕರಿ ಶರ್ಮ says:

      ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗರತ್ನ ಮೇಡಂ.

  2. Hema Mala says:

    ಮಾಹಿತಿಪೂರ್ಣ ಬರಹ.

    • ಶಂಕರಿ ಶರ್ಮ says:

      ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ಮಾಲಾ

  3. ನಯನ ಬಜಕೂಡ್ಲು says:

    ಬಹಳ ವಿಷಯಗಳನ್ನೊಳಗೊಂಡ ಬರಹ, ತುಂಬಾ ಚೆನ್ನಾಗಿದೆ.

    • ಶಂಕರಿ ಶರ್ಮ says:

      ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ನಯನಾ ಮೇಡಂ.

  4. MANJURAJ H N says:

    ಅಕ್ಷಯವಾಗಲಿ ಬರೆಹವೂ………..

  5. ಅಕ್ಷಯ ಪಾತ್ರೆಯ ಮಹತ್ವವನ್ನು ಸೊಗಸಾಗಿ ವರ್ಣಿಸಿದ್ಧೀರ ವಂದನೆಗಳು

  6. ಪದ್ಮಾ ಆನಂದ್ says:

    ಸಂದರ್ಭೋಚಿತವಾಗಿ ಅಕ್ಷತದಿಗೆಯ ಮಹತ್ವವನ್ನು ವಿಶೇಷತೆಯನ್ನು ತಿಳಿಸಿಕೊಡುವ ಲೇಖನ ಅಚ್ಚುಕಟ್ಟಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: