ಅರಸಿನಕೆರೆಯ ಸುತ್ತಾಮುತ್ತಾ…
ಎಪ್ರಿಲ್ ತಿಂಗಳ ಬಿರುಬಿಸಿಲಿಗೆ ಮನೆಯಿಂದ ಹೊರಗೆ ಕಾಲಿಡಲು ಮನಸ್ಸಿಲ್ಲದಂತಹ ವಾತಾವರಣ. ಆದರೂ, ಪ್ರತಿ ತಿಂಗಳು ಒಂದಿಲ್ಲೊಂದು ಚಾರಣ ಅಥವಾ ಪರಿಸರದೊಂದಿಗೆ ಬೆರೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೈಸೂರಿನ ‘ಬಾಂಧವ್ಯ ಚಾರಣ ಬಳಗ‘ದ ರೂವಾರಿಗಳಾದ ಶ್ರೀ ವೈದ್ಯನಾಥ್ ಮತ್ತು ಶ್ರೀ ನಾಗೇಂದ್ರ ಪ್ರಸಾದ್ ತಮ್ಮ ಧ್ಯೇಯವನ್ನು ಬದಲಿಸಲಿಲ್ಲ. ಸಮಾನ ಮನಸ್ಕ ನಗರವಾಸಿಗಳನ್ನು ಒಗ್ಗೂಡಿಸಿ, ಒಂದು ದಿನದಮಟ್ಟಿಗೆ ಹಸಿರು ಸಿರಿಯ ಪ್ರಕೃತಿಯಲ್ಲಿ ದೈನಂದಿನ ಚಟುವಟಿಕೆಗಳನ್ನು ಮರೆತು, ಸಾಂಪ್ರದಾಯಿಕ ಆಟಗಳನ್ನು ಆಡಿಸಿ, ರುಚಿಯಾದ ಊಟೋಪಚಾರ ಕೊಟ್ಟು 27 ಎಪ್ರಿಲ್ 2025 ರ ಭಾನುವಾರವನ್ನು ಸಂಪನ್ನಗೊಳಿಸಿದರು.
ನಾವು ಮೂವತ್ತಕ್ಕೂ ಹೆಚ್ಚು ಮಂದಿ, ಮುಂಜಾನೆ ಅವರವರ ವಾಹನಗಳಲ್ಲಿ ಮೈಸೂರಿನಿಂದ ಹೆಗ್ಗಡೆದೇವನಕೋಟೆಗೆ ಹೋಗುವ ದಾರಿಯಲ್ಲಿ ಅಂದಾಜು 25 ಕಿಮೀ ಪ್ರಯಾಣಿಸಿ, ಜಯಪುರ ಹೋಬಳಿಯ ಸಮೀಪದಲ್ಲಿರುವ ‘ಅರಸಿನಕೆರೆ’ ತಲಪಿದೆವು. ಚಾರಣಿಗರ ಬಳಗದ ಸಕ್ರಿಯ ಸದಸ್ಯೆ ಹಾಗೂ ಶ್ರೀಮತಿ ಅಂಬಿಕಾ ಹಾಗೂ ಅವರ ಪತಿ ಶ್ರೀ ತೇಜೋಮೂರ್ತಿ ಅವರ ತೋಟದಲ್ಲಿ ನಮ್ಮ ಅಂದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ರೂವಾರಿಗಳು ಆಗಲೇ ಅಲ್ಲಿಗೆ ಬಂದು ವಿವಿಧ ಸಾಂಪ್ರದಾಯಿಕ ಆಟಗಳಿಗಾಗಿ ಬೇಕಾದ ವ್ಯವಸ್ಥೆಯನ್ನು ಅಣಿಮಾಡಿದ್ದರು. ನಮ್ಗೆಲ್ಲರಿಗೂ ಬೆಳಗಿನ ಉಪಾಹಾರಕ್ಕೆ ರುಚಿಯಾದ ಖಾರ ಪೊಂಗಲ್ ಮತ್ತು ಸಿಹಿಪೊಂಗಲ್ , ಚಹಾ ಕೊಟ್ಟರು.
ಶ್ರೀ ವೈದ್ಯನಾಥ್ ಮತ್ತು ಶ್ರೀ ನಾಗೇಂದ್ರಪ್ರಸಾದ್ ಅವರ ಆರಂಭಿಕ ಮಾತುಗಳೊಂದಿಗೆ ಸದಸ್ಯರ ಕಿರು ಪರಿಚಯ ಮಾಡಲಾಯಿತು. ತೋಟದ ಮಾಲಿಕರಾದ ಶ್ರೀ ತೇಜೋಮೂರ್ತಿ- ಶ್ರೀಮತಿ ಅಂಬಿಕಾ ದಂಪತಿಯ ಪ್ರಕೃತಿ ಪ್ರೇಮ ಹಾಗೂ ಹವ್ಯಾಸಗಳು ಅನುಕರಣೀಯ. ತಮ್ಮ ವಿಶಾಲವಾದ ಕೃಷಿಭೂಮಿಯಲ್ಲಿ ಸಾವಯವ ಕೃಷಿ ಮಾಡುತ್ತಾ, ಸಿಕ್ಕಿದ ಭೂಮಿಯ ಉತ್ಪತ್ತಿಯಲ್ಲಿ ‘ಮೊದಲ ಪಾಲು ಪರಿಸರದಲ್ಲಿರುವ ಇತರ ಪ್ರಾಣಿಗಳಿಗೆ ಮಿಕ್ಕಿದ್ದು ತಮಗೆ’ ಎಂಬಂತೆ ನಿವೃತ್ತ ಜೀವನವನ್ನು ಸದುಪಯೋಗಗೊಳಿಸುವುದು ಅಚ್ಚರಿ ಮೂಡಿಸುತ್ತದೆ.
ತೇಜೋಮೂರ್ತಿ, ಅಂಬಿಕಾ ಅವರೊಂದಿಗೆ ತೋಟದಲ್ಲಿರುವ ತೆಂಗು, ಕಂಗು, ಸಪೋಟ, ಮಾವು ಮೊದಲಾದ ಹಣ್ಣುಗಳ ಮರಗಳನ್ನು ನೋಡುತ್ತಾ ನಡೆದೆವು. ನಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರವಾಗಿ ಸಾವಯವ ಗೊಬ್ಬರದ ತಯಾರಿ, ಗಿಡಗಳಿಗೆ ನೀರು ಹನಿಸುವ ವ್ಯವಸ್ಥೆ ಮುಂತಾದ ವಿಚಾರಗಳನ್ನು ಅವರು ವಿವರಿಸಿದರು. ದೂರದಲ್ಲಿ ನವಿಲೊಂದು ನಿಧಾನವಾಗಿ ಹೋಗುತ್ತಿತ್ತು. ಈ ತೋಟದಲ್ಲಿ ಸ್ಥಳೀಯ ನಿವಾಸಿಗಳಾದ ಅಳಿಲು, ಕಪಿ, ನವಿಲು, ಕೆಂಭೂತ ..ಮೊದಲಾದುವುಗಳು ಮುಕ್ತವಾಗಿ ಓಡಾಡುತ್ತಿರುತ್ತವಂತೆ. ಬಹುಶ: ನಮ್ಮನ್ನು ನೋಡಿ ಈ ದಿನ ಅವುಗಳ ಹಾಜರಾತಿ ಕಡಿಮೆ ಇದ್ದಿರಬಹುದು ಅಂದುಕೊಂಡೆವು. ಹಸಿರು ಮರಗಳ ನಡುವೆ ನಡೆಯುವಾಗ ವಾತಾವರಣದ ಉಷ್ಣತೆ ಸ್ವಲ್ಪ ಕಡಿಮೆ ಎಂಬ ಅನುಭವ ನಿಚ್ಚಳವಾಗುತ್ತಿತ್ತು.
ಈ ತೋಟಕ್ಕೆ ಹೊಂದಿಕೊಂಡಿರುವ ಖಾಸಗಿ ಜಮೀನಿನಲ್ಲಿರುವ ಕೃಷಿನೀರಿನ ಹೊಂಡದಲ್ಲಿ ಮುಖಾಮುಖಿಯಾಗಿರುವ ‘ಜೋಡಿ ಬಸವ‘ ಎಂದು ಕರೆಯಲ್ಪಡುವ ಏಕಶಿಲಾ ನಂದಿ ವಿಗ್ರಹಗಳಿವೆ. ಅಪೂರ್ಣವಾಗಿ ಕೆತ್ತಲ್ಪಟ್ಟ ಸ್ಥಿತಿಯಲ್ಲಿರುವ ಈ ಪ್ರತಿಮೆಗಳು 16 ಅಥವಾ 17 ನೇ ಶತಮಾನದವುಗಳಾಗಿರಬಹುದೆಂದು ಪುರಾತನಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಹೊಲವನ್ನು ಉಳುವಾಗ ನಂದಿಗಳ ಕೊಂಬುಗಳನ್ನು ಗಮನಿಸಿದ ಗ್ರಾಮಸ್ಥರು ಅವುಗಳಿಗೆ ಪೂಜೆ ಸಲ್ಲಿಸಲು ಪ್ರಾರಂಭಿಸಿದರು. ಶತಮಾನಗಳಷ್ಟು ಹಳೆಯದಾದ ನಂದಿ ಪ್ರತಿಮೆಗಳಾಗಿದ್ದು, ಏಕಶಿಲೆಯ ಸೋಪ್ ಸ್ಟೋನ್ (Soapstone) ನಿಂದ ಕೆತ್ತಲಾಗಿದೆ. ಒಂದು ನಂದಿ ಪ್ರತಿಮೆ 15 ಅಡಿ ಉದ್ದ ಮತ್ತು 12 ಅಡಿ ಎತ್ತರವಿದ್ದರೆ, ಇನ್ನೊಂದು ಪ್ರತಿಮೆ ಚಿಕ್ಕದಾಗಿದೆ.
‘ಅರಸಿನಕೆರೆ ‘ ಎಂಬ ಸ್ಥಳದ ಹೆಸರನ್ನು ಗಮನಿಸುವಾಗ, ಯಾವುದೋ ಕಾಲದಲ್ಲಿ ಇಲ್ಲಿ ವಾಸವಾಗಿದ್ದ ಜನರಿಗೂ ಮೈಸೂರಿನ ರಾಜವಂಶದವರಿಗೂ ಸಂಪರ್ಕವಿದ್ದಿರಬಹುದು ಅನಿಸುತ್ತದೆ. ಈ ಬಗ್ಗೆ ತಿಳಿದ ಶ್ರೀ ಜಯಚಾಮರಾಜ ಒಡೆಯರ್ ಅವರು ನೀರಿನಲ್ಲಿ ಮುಳುಗಿದ್ದ ದೈತ್ಯ ಪ್ರತಿಮೆಗಳನ್ನು ನೋಡಲು ಬಯಸಿ, ಸುತ್ತುಮುತ್ತಲಿನ ಹೂಳು ತೆಗೆಯಲು ಆದೇಶಿಸಿದ್ದರಂತೆ. ಆಗ ಬಹಳಷ್ಟು ನೀರು ಇದ್ದುದರಿಂದ ಈ ಪ್ರಯತ್ನ ಸಫಲವಾಗಿರಲಿಲ್ಲ. ಮುಂದೆ, ಅವರ ಮಗ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೂ ಈ ಜೋಡಿ ಬಸವ ಪ್ರತಿಮೆಗಳನ್ನು ನೋಡಲು ಬಂದಿದ್ದರು.
ಈಗಲೂ, ವಿಗ್ರಹಗಳನ್ನು ಸಂಪೂರ್ಣವಾಗಿ ನೋಡಲು ಸಾಧ್ಯವಾಗದಿದ್ದರೂ, ಗ್ರಾಮಸ್ಥರು ಆಗಾಗ ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಾ ಇದ್ದಾರೆ ಹಾಗೂ ಪೂಜೆ ನೆರವೇರಿಸುತ್ತಾರೆ. ಹೂಳೆತ್ತುವ ಸಂದರ್ಭದಲ್ಲಿ ದೊರೆತ ಇತರ ಕೆಲವು ಅಪೂರ್ಣ ಸ್ಥಿತಿಯಲ್ಲಿರುವ ವಿಗ್ರಹಗಳನ್ನು ಮರವೊಂದರ ಬುಡದಲ್ಲಿ ಇರಿಸಿದ್ದಾರೆ. ತೇಜೋಮೂರ್ತಿ ಅವರ ತಿಳಿವಳಿಕೆಯಲ್ಲಿ, ಈ ಭೂಭಾಗದಲ್ಲಿ ಮೆತ್ತಗಿನ ಮಣ್ಣು ಇರುವುದರಿಂದ ಪ್ರತಿಬಾರಿ ಮಣ್ಣನ್ನು ಅಗೆದಾಗ , ಬಲು ಭಾರವಿರುವ ವಿಗ್ರಹಗಳು ಇನ್ನಷ್ಟು ಕೆಳಗೆ ಕುಸಿಯುತ್ತವೆ. ನಾವು ಹೋಗಿದ್ದಾಗ, ಈ ಕೃಷಿಹೊಂಡದಲ್ಲಿ ನೀರು ತುಂಬಿದ್ದುದರಿಂದ ಒಂದು ನಂದಿಯ ಕೊಂಬುಗಳು ಮತ್ತು ಇನ್ನೊಂದು ನಂದಿಯ ಮುಖದ ಸ್ವಲ್ಪ ಭಾಗ ಮಾತ್ರ ಕಾಣಿಸುತ್ತಿತ್ತು.
ತೋಟದಲ್ಲಿ ಅಡ್ಡಾಡಿ ಬಂದ ನಾವುಗಳೆಲ್ಲ ಅಲ್ಲಿದ್ದ ಟ್ರ್ಯಾಕ್ಟರ್ ಮೇಲೆ ಕುಳಿತು ಫೊಟೊ ತೆಗೆಸಿಕೊಂಡೆವು. ವಯೋಬೇಧ ಮರೆತು ಸಾಂಪ್ರದಾಯಿಕ ಆಟಗಳಾದ ಚೌಕಾಭಾರ, ಅಳುಗುಳಿ ಮನೆ , ಪಗಡೆ, ಹುಲಿಕುರಿ ಆಟ, ಗಿಚ್ಚಿ ಆಟ (ಕಲ್ಲು), ಹಾವು-ಏಣಿ, ಸ್ಕಿಪ್ಪಿಂಗ್, ಹಗ್ಗದ ಮೇಲೆ ನಡೆಯುವುದು ಇತ್ಯಾದಿ ಆಡಿದೆವು. ಈ ಆಟಗಳನ್ನು ನೆನಪಿಸಿಕೊಂಡು ಅದಕ್ಕೆ ಬೇಕಾದ ಪರಿಕರಗಳನ್ನು ಜೋಡಿಸಿಕೊಂಡು, ಹಲವಾರು ಪ್ರತಿ ಆಟದ ಬೋರ್ಡ್ ಗಳನ್ನು ತಯಾರಿಸಿ ಅಲ್ಲಿಗೆ ತಂದ ಆಯೋಜಕರ ತಾಳ್ಮೆ ಹಾಗೂ ಜಾಣ್ಮೆಗೆ ಶರಣು. ಅಷ್ಟರಲ್ಲಿ ನಮ್ಮ ಅತಿಥೇಯ ದಂಪತಿ ನಮಗೆಲ್ಲರಿಗೂ ತಂಪಾದ ಮಜ್ಜಿಗೆ ಕೊಟ್ಟು ನಮ್ಮ ಹೊಟ್ಟೆ ತಂಪಾಗಿಸಿದರು. ಕೆಲವು ಸದಸ್ಯರು ತಂದಿದ್ದ ಕುರುಕುಲು ತಿನಿಸುಗಳೂ ಜೊತೆಗೂಡಿದುವು.
ಕುಮಾರಿ ಲೇಪಾಕ್ಷಿ ಅವರು ‘ಕಂಜರ’ವಾದ್ಯವನ್ನು ನುಡಿಸುತ್ತಾ ಮಾದೇವನ ಭಜನೆಯನ್ನು ಸೊಗಸಾಗಿ ನೆರವೇರಿಸಿದರು. ಎಲ್ಲರೂ ಸ್ವಲ್ಪ ಸಮಯ ಅಂತಾಕ್ಷರಿ ಆಡಿದೆವು. ಅನಂತರ, ಮಧ್ಯಾಹ್ನದ ಊಟಕ್ಕೆ ರುಚಿಕಟ್ಟಾದ ಬಿಸಿಬೇಳೆಭಾತ್, ಮೊಸರನ್ನ ಗಸಗಸೆ ಪಾಯಸವಿತ್ತು. ಊಟದ ನಂತರ, ವಿವಿಧ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನೆರವೇರಿತು. ಎಪ್ರಿ ಲ್ 27ರಂದು, ಅಂಬಿಕಾ ಅವರ ಮೊಮ್ಮಗನ ಹುಟ್ಟುಹಬ್ಬದ ದಿನವೂ ಆಗಿದ್ದ ಕಾರಣ ಅವರ ಕುಟುಂಬದವರು ಸಿಹಿ-ಖಾರ ವಿತರಿಸಿದರು. ಆ ಮಗುವಿಗೆ ಶುಭಾಶಯ ಕೋರಿ, ಅಪರೂಪದ ಬೆಲ್ಲದ ಚಹಾ ಕುಡಿದು, ಅತಿಥೇಯ ದಂಪತಿಗೆ ಧನ್ಯವಾದ ಸಮರ್ಪಿಸಿ ನಮ್ಮ ಒಂದು ದಿನದ ಕಾರ್ಯಕ್ರಮಕ್ಕೆ ಮಂಗಳ ಹಾಡಿದೆವು.
ನಾವು ಗಮನಿಸಿದ ವಿಶೇಷತೆಯೆಂದರೆ, ಶ್ರೀ ತೇಜೋಮೂರ್ತಿ-ಶ್ರೀಮತಿ ಅಂಬಿಕಾ ಅವರ ಹವ್ಯಾಸಗಳು ಅತ್ಯುತ್ತಮವಾದುವು. ಅವರ ಔದಾರ್ಯ ಹಾಗೂ ಸ್ನೇಹಪರತೆ ಬಲುದೊಡ್ಡದು. ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಎಲ್ಲರಿಗೂ ಅವರವರ ದೈನಂದಿನ ಕೆಲಸಗಳ ಭರಾಟೆಯಲ್ಲಿ ಬಿಡುವೇ ಇಲ್ಲದ ದಿನಗಳಿವು. ಹೀಗಿದ್ದರೂ, ತಮ್ಮ ವೈಯುಕ್ತಿಕ ಸಮಯ ಹಾಗೂ ಶ್ರಮ ಬಳಸಿ ಕಾರ್ಯಕ್ರಮವನ್ನು ರೂಪಿಸಿ, ಅಗತ್ಯ ಸಂವಹನ ವೇದಿಕೆಯನ್ನು ರಚಿಸಿ, ಸೂಕ್ತ ಮಾರ್ಗದರ್ಶನ ಕೊಟ್ಟು, ಸಾಕಷ್ಟು ಪೂರ್ವತಯಾರಿ ಹಾಗೂ ಸಂಬಂಧಿತ ವ್ಯವಸ್ಥೆಗಳನ್ನು ನಿಸ್ವಾರ್ಥವಾಗಿ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಶ್ರೀ ವೈದ್ಯನಾಥ್ ಹಾಗೂ ಶ್ರೀ ನಾಗೇಂದ್ರಪ್ರಸಾದ್ ಅವರಿಗೆ ಆಭಾರಿ. ಎಲ್ಲರೊಂದಿಗೆ ಸ್ನೇಹಪರರಾಗಿ ವರ್ತಿಸಿ, ಸಂತಸವನ್ನು ಹೆಚ್ಚಿಸಿದ ಎಲ್ಲಾ ಸಹಚಾರಣಿಗರಿಗೂ ಧನ್ಯವಾದಗಳು.
–ಹೇಮಮಾಲಾ. ಬಿ. ಮೈಸೂರು
ಗುಡ್ ಈ ರೀತಿಯ ಚಿಕ್ಕ ಪುಟ್ಟ ಪ್ರವಾಸ ಪ್ರಕೃತಿಯೊಡನೆ ಒಡನಾಟ.. ಸ್ನೇಹ ಕೂಟ ಮನಕ್ಕೆ ಮುದ ಹಾಗೂ ಲವಲವಿಕೆ ತಂದುಕೊಡುತ್ತದೆ..ತಾವು ಅಂತಹ ಸ್ನೇಹ ಕೂಟಕ್ಕೆ ಹೋಗಿದ್ದು ಅಲ್ಲಿಯ ಅನು ಭವವನ್ನು ಕಣ್ಣಿಗೆ ಕಟ್ಟುವಂತೆ….ಸೊಗಸಾದ ನಿರೂಪಣೆಯಲ್ಲಿ ಹೇಳಿರುವ ನಿಮಗೆ ನನ್ನ ದೊಂದು ಸಲಾಮ್..ಗೆಳತಿ ಹೇಮಾ ಪುರಕ ಚಿತ್ರ ಗಳು ಚೆನ್ನಾಗಿ ಬಂದಿವೆ..
ಆಹಾ… ಎಷ್ಟು ಚಂದದ ಪ್ರವಾಸ. ಮನಸು ಮುದಗೊಳ್ಳುತ್ತದೆ ಓದುವಾಗ.
ಇಂತಹ ಒಂದು ದಿನದ ಸಣ್ಣಪುಟ್ಟ ಪ್ರವಾಸಗಳು ಹೆಚ್ಚಿನ ತಯಾರಿ, ಶ್ರಮವನ್ನು ಬಯಸದೆ ಇರುವುದರಿಂದ ತುಂಬಾ ಆನಂದದಾಯಕವಾಗಿರುತ್ತವೆ. ಈ ಕಿರುಪ್ರವಾಸವಂತೂ ಪ್ರಕೃತಿಪ್ರಿಯರಿಗೆ ರಸದೌತಣದಂತಿದೆ! ಆಯೋಜಕ ಅತಿಥೇಯರ ಬಗ್ಗೆ ಅಭಿಮಾನವೆನಿಸಿತು. ಲೇಖನ ಬಹಳ ಚೆನ್ನಾಗಿದೆ.
ಚಾರಣಾನುಭವ !
ನೀವೂ ಇದ್ದಿರೆಂದ ಮೇಲೆ ಕೇಳಬೇಕೆ?
ಸಮೃದ್ಧ ಆದರಾಭಿಮಾನ ಆತಿಥ್ಯ; ಸಮಾನ ಮನಸ್ಕರು
ಎಂಬುದೇ ಎಷ್ಟೊಂದು ಖುಷಿ ಕೊಡುವ ಮತ್ತು ಸ್ವೀಕರಿಸುವ ಪದ.
ಈ “ಪದಾರ್ಥ”ದೊಂದಿಗೆ ಎಲ್ಲರೂ ಇದ್ದರೆಂದರೆ ಎಷ್ಟೊಂದು ಕಲಿಕೆ ಮತ್ತು ಗಳಿಕೆ.
ಮನಸು ಮುದಗೊಳುವ ಕಲಿಕೆ; ಪ್ರೀತಿ ವಿಶ್ವಾಸಗಳ ಗಳಿಕೆ. ವಯಸು ಶರೀರಕೆ; ಮನಸಿಗಲ್ಲ
ಎಂಬುದನೂ ಆಯೋಜಕರ ನಿರ್ಮಲ ಮಮಕಾರವನ್ನೂ ಬರೆಹದ ಮೂಲಕ ನಮಗೂ
ಉಣಬಡಿಸಿದ್ದೀರಿ………ಓದಿದ ಮೇಲೆ ನಾವೂ ನಿಮ್ಮೊಂದಿಗಿದ್ದಂತಾಯಿತು. ಇದು ಸತ್ಯ.
ಇಂತಹ ಪಿಕ್ನಿಕ್ ಗಳಲ್ಲಿ ಆಗುವ ಆನಂದ ಹೇಳಲು ಅಸಾಧ್ಯ ಲೇಖನ ಚೆನ್ನಾಗಿ ಮೂಡಿ ಬಂದಿದೆ
ನಿಮ್ಮ ವನವಿಹಾರದ ಅನುಭವಗಳು, ಓದುತ್ತಿದ್ದರೆ ನಾವೇ ಹೋಗಿ ಬಂದಂತೆ ಮುದ ನೀಡಿತು. ಶಿಲಾಬಸವಗಳ ವರ್ಣನೆ ಕುತೂಹಲ ಮೂಡಿಸಿತು.