ಆ ಒಂದು ಕಪ್ಪುಚುಕ್ಕೆ.
ಮಾರ್ಕೆಟ್ಟಿನಿಂದ ತಂದ ತರಕಾರಿ, ಸೊಪ್ಪುಗಳನ್ನು ವಿಂಗಡಿಸಿ ಅವುಗಳನ್ನು ಫ್ರಿಜ್ಜಿನಲ್ಲಿ ಇಡುವ ಕೆಲಸದಲ್ಲಿ ನಿರತಳಾಗಿದ್ದ ಸಂಧ್ಯಾಳಿಗೆ ಕಾಲಿಂಗ್ ಬೆಲ್ಲು ಸದ್ದಾದದ್ದು ಜೊತೆಯಲ್ಲೇ “ಮಮ್ಮೀ” ಎಂಬ ಕೂಗು ಎಚ್ಚರಿಸಿತು. ಓಹೋ ನನ್ನ ಚಿನಕುರುಳಿ ಪಟಾಕಿ ‘ಸಿರಿ’ ಇದೇನು ಇಷ್ಟು ಬೇಗ ಬಂದಿದ್ದಾಳಲ್ಲಾ. ಬೆಳಗ್ಗೆ ಸ್ಕೂಲಿಗೆ ಹೊರಡುವಾಗಲೇ “ಮಮ್ಮೀ ಇವತ್ತು ಸ್ಪೆಷಲ್ ಕ್ಲಾಸಿದೆ. ಮನೆಗೆ ಬರೋದು ಲೇಟ್ ಆಗುತ್ತೆ” ಎಂದಿದ್ದಳು. ಸಂಜೆಗೆ ಸ್ನ್ಯಾಕ್ಸ್ ಬೇಕೆಂದು ರವೆಉಂಡೆ, ಖಾರದ ಅವಲಕ್ಕಿ, ಬಾಳೇಹಣ್ಣು ಅದೂ ತನ್ನ ಪಟಾಲಂಗೂ ಸೇರಿಸಿ ಪ್ಯಾಕ್ ಮಾಡಲು ಹೇಳಿದ್ದನ್ನು ಕೇಳಿದ ಅವರಪ್ಪ ಮಾಧವ “ಮಗಳೇ ನೀನೇನು ಸ್ಕೂಲಿಗೆ ಹೋಗುತ್ತಿದ್ದೀಯೋ ಅಥವ ಪಿಕ್ನಿಕ್ಗೆ ಹೋಗುತ್ತಿದ್ದೀಯೋ?” ಎಂದು ಛೇಡಿಸಿದ್ದರು. ಅದಕ್ಕೆ ನಮ್ಮಿಬ್ಬರ ಕಂದ “ಏ ಪಪ್ಪಾ ಓದಿನ ಪಾಡಿಗೆ ಓದು, ತಿಂಡಿಯ ಪಾಡಿಗೆ ತಿಂಡಿ. ಇದೆಲ್ಲಾ ನಾನು ಒಬ್ಬಳೇ ತಿಂತೀನಾ. ಅಜ್ಜಿ ತಾತನನ್ನು ಕೇಳಿ, ತಿನ್ನುವ ಪದಾರ್ಥವನ್ನು ಹಂಚಿಕೊಂಡು ತಿನ್ನಬೇಕಂತೆ ಯಾವಾಗಲೂ ಹೇಳುತ್ತಿರುತ್ತಾರೆ. ಅದಕ್ಕೇ ಹೀಗೆ ಗೊತ್ತಾ?” ಎಂದು ಮಾರುತ್ತರ ನೀಡಿ ಜಿಂಕೆಯಂತೆ ನೆಗೆಯುತ್ತಾ ಹೋಗಿದ್ದಳು. ಗಂಟೆ ಇನ್ನೂ ಹನ್ನೆರಡೂ ಆಗಿಲ್ಲ ! ಯಾರಾದರೂ ದೊಡ್ಡ ಮನುಷ್ಯರು ಗೊಟಕ್ ಅಂದರಾ? ಅಥವಾ.. ಎಂದು ಆಲೋಚಿಸುವಷ್ಟರಲ್ಲಿ ಬಾಗಿಲನ್ನು ಡಬಡಬ ತಟ್ಟಿದ ಶಬ್ಧ. ಅಕ್ಕಪಕ್ಕದವರು ಏನಾಯಿತೆಂದು ಬಂದುಬಿಟ್ಟಾರು ಎಂದುಕೊಂಡು ಮಾಡುತ್ತಿದ್ದ ಕೆಲಸವನ್ನು ಬದಿಗೆ ಸರಿಸಿ ದಾಪುಗಾಲಾಕುತ್ತ ಬಾಗಿಲು ತೆರೆದಳು.
“ಮಮ್ಮೀ ವಾಷ್ ರೂಮಿಗೆ ಹೋಗಿದ್ದರಾ?” ಎಂದು ಕೇಳುತ್ತಾ ಒಳಬಂದಳು ಸಿರಿ. ಸ್ಕೂಲಿನ ಬ್ಯಾಗನ್ನು ಟೀಪಾಯಿಯ ಮೇಲಿಟ್ಟು “ ಮಮ್ಮೀ ನನ್ನ ಊಟದ ಬ್ಯಾಗು ಮತ್ತು ತಿಂಡಿ ಬ್ಯಾಗನ್ನು ಸಂಜೆಗೆ ನನ್ನ ಫ್ರೆಂಡ್ ಖುಷಿ ತಂದುಕೊಡ್ತಾಳೆ” ಎಂದಳು.
“ಅಲ್ಲಾ ಸಿರಿ ನೀನು ಹೀಗೆ ಧಿಡೀರಂತ ಬಂದೆಯಲ್ಲಾ ಏಕೆ? ಹುಷಾರಿಲ್ಲವಾ?” ಕೇಳಿದಳು ಸಂಧ್ಯಾ.
“ಹೂಂ ಮಮ್ಮಿ ನೆನ್ನೆಯಿಂದಲೂ ಏನೋ ಒಂಥರಾ ಆಗ್ತಿತ್ತು. ಆದರೂ ನಾನು ಕ್ಲಾಸ್ ಹೋಗುತ್ತಲ್ಲಾ ಅಂತ ಸ್ಕೂಲಿಗೆ ಹೋದೆ. ಅಲ್ಲಿಯೇ ಮೆನ್ಸಸ್ ಆಗಿಬಿಟ್ಟೆ. ಅಜ್ಜಿ ಹೇಳುವ ಹಾಗೆ ಮೊದಲ ಬಾರಿಗೆ ಮೈನೆರೆದು ಮುಟ್ಟಾಗಿಬಿಟ್ಟೆ. ತುಂಬ ಕಸಿವಿಸಿ ಆಯ್ತು. ಅದಕ್ಕೇ ಮಿಸ್ ಪರ್ಮಿಷನ್ ತೊಗೊಂಡು ಮನೆಗೆ ಬಂದೆ. ನಾನು ಫ್ರೆಷ್ ಆಗಿರ್ತೀನಿ” ಎಂದು ಸಂಧ್ಯಾಳ ಉತ್ತರಕ್ಕೂ ಕಾಯದೆ ಬಾತ್ರೂಮಿನತ್ತ ನಡೆದಳು.
ವ್ಹಾ ! ಇದನ್ನು ಎಷ್ಟು ಕ್ಯಾಜುಯಲ್ ಆಗಿ ಹೇಳಿ ಹೊರಟೇಹೋದಳಲ್ಲಾ. ಪಾಪ ಆಗ ಹಳ್ಳಿಯಿಂದ ಬಂದಿದ್ದ ಆ ದೇವಿಗೂ ಇದೇ ನಮ್ಮನೆಯಲ್ಲಿ ಆಗಿದ್ದು. ಅವಳೀಗ ಇದ್ದಿದ್ದರೆ ನನ್ನ ಹಾಗೇ ಸಂಸಾರಸ್ಥೆಯಾಗಿ ಚೆಲುವಾದ ಮಕ್ಕಳಿಗೆ ತಾಯಿಯಾಗಿ ಅಥವ ಚೆನ್ನಾಗಿ ಓದಿ ಒಳ್ಳೆಯ ಹುದ್ದೆಯನ್ನು ಅಲಂಕರಿಸಿ ಎಷ್ಟು ಕೀರ್ತಿ ಸಂಪಾದಿಸುತ್ತಿದ್ದಳೋ…. ಛೇ… ಸಂಧ್ಯಾಳ ಅಂತರಂಗದಲ್ಲಿ ಮರೆಯಲಾಗದಂತೆ ಅಡಗಿ ಕುಳಿತಿದ್ದ ನೆನಪಿನ ಸುರುಳಿ ಬಿಚ್ಚಿಕೊಂಡಿತು.
ಸುಮಾರು ಮೂವತ್ತು ವರ್ಷಗಳ ಹಿಂದೆ ಮೈಸೂರಿನ ನಂಜುಮಳಿಗೆಯ ಹತ್ತಿರ ಮನೆಯೊಂದರಲ್ಲಿ ರಂಗಪ್ಪ, ಪತ್ನಿ ವತ್ಸಲ ಮತ್ತು ಮಗಳು ಸಂಧ್ಯಾ ವಾಸವಾಗಿದ್ದರು. ರಂಗಪ್ಪನ ಹುಟ್ಟೂರು ಮೈಸೂರಿನ ಸಮೀಪದ ಸಿದ್ದಪ್ಪನಹುಂಡಿ. ಅವರ ತಂದೆ ಚೆನ್ನಪ್ಪನವರಿಗೆ ನಾಗಪ್ಪ, ರಂಗಪ್ಪ ಇಬ್ಬರು ಮಕ್ಕಳು. ಹಿರಿಯನಾದ ರಂಗಪ್ಪ ತಕ್ಕಮಟ್ಟಿಗೆ ಓದುಬರಹ ಕಲಿತಿದ್ದ. ಅವನು ಮೈಸೂರಿನಲ್ಲಿ ಎಲ್.ಐ.ಸಿ. ಏಜಂಟನಾಗಿ ಸಣ್ಣ ಉಳಿತಾಯದ ಏಜಂಟನಾಗಿ ಕೆಲಸ ಮಾಡುತ್ತಿದ್ದ. ಜೊತೆಗೆ ಚಿಕ್ಕದೊಂದು ತರಕಾರಿ, ಹಣ್ಣಿನ ಅಂಗಡಿಯನ್ನೂ ಮನೆಯಬಳಿಯಲ್ಲಿ ನಡೆಸುತ್ತಿದ್ದ. ಸುತ್ತಮುತ್ತಲಿನವರಿಗೆಲ್ಲ ತರಕಾರಿ ಅಂಗಡಿ ರಂಗಪ್ಪನೆಂದೇ ಪರಿಚಿತನಾಗಿದ್ದ. ಊರಿನಲ್ಲಿದ್ದ ಮನೆ ಜಮೀನನ್ನು ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿ ತಂದೆ, ತಮ್ಮನ ಕೃಷಿ ಕೆಲಸಕ್ಕೆ ಭದ್ರತೆ ಒದಗಿಸಿದ್ದ. ಅವರುಗಳೊಡನೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ. ರಂಗಪ್ಪನಿಗೆ ಒಬ್ಬಳೇ ಮಗಳು ಸಂಧ್ಯಾ ಹೈಸ್ಕೂಲೊಂದರಲ್ಲಿ ಓದುತ್ತಿದ್ದಳು.
ರಂಗಪ್ಪನ ತಮ್ಮ ನಾಗಪ್ಪನಿಗೆ ಇಬ್ಬರು ಮಕ್ಕಳು. ಹಿರಿಯವನು ಬಸವ, ಕಿರಿಯವಳು ದೇವಿ. ನೋಡುವುದಕ್ಕೆ ಇಬ್ಬರೂ ಅಂದವಾಗಿದ್ದರು. ಬಸವ ನಾಲ್ಕನೆಯ ತರಗತಿಗೇ ಶರಣು ಹೊಡೆದು ಅಪ್ಪನಂತೆ ನೇಗಿಲು ಹಿಡಿದ. ದೇವಿಯು ನೋಡಲಷ್ಟೇ ಚಂದವಲ್ಲ ಓದಿನಲ್ಲೂ ಮುಂದೆ. ಏಳನೆಯ ತರಗತಿ ಪರೀಕ್ಷೆಯಲ್ಲಿ ಶಾಲೆಗೇ ಮೊದಲಿಗಳಾಗಿ ಪಾಸಾದಳು.
ಸಿದ್ದಪ್ಪನಹುಂಡಿಯಲ್ಲಿ ಹೈಸ್ಕೂಲಿರಲಿಲ್ಲ. ಮುಂದೆ ಓದಬೇಕಾದರೆ ಮೈಸೂರಿಗೇ ಹೋಗಬೇಕಿತ್ತು. ಒಂದು ದಿನವೂ ಬಿಟ್ಟಿರದ ಮಗಳನ್ನು ಹೇಗೆ ಬೇರೆ ಊರಿಗೆ ಕಳುಹಿಸುವುದು ಎಂಬ ಯೋಚನೆಯಲ್ಲಿದ್ದರು. ಅದೇ ಸಮಯಕ್ಕೆ ಊರಿಗೆ ಬಂದಿದ್ದ ರಂಗಪ್ಪ. “ಏ ಪೋರಿ ಬಹಳ ಚುರುಕಾಗವಳೆ, ಓದು ನಿಲ್ಲಿಸಬೇಡಿ. ನಾನೇ ಕರೆದುಕೊಂಡು ಹೋಗಿ ಹೈಸ್ಕೂಲಿಗೆ ಸೇರಿಸುತ್ತೇನೆ. ಅವಳೆಷ್ಟು ಓದ್ತೀನಿ ಅಂತಾಳೋ ಅಷ್ಟು ಓದಲಿ. ಸಿದ್ದಪ್ಪನಹುಂಡಿ ಏನೂ ಮೈಸೂರಿನಿಂದ ದೂರವಿಲ್ಲ. ನೆನೆಸಿಕೊಂಡಾಗ ಬಂದು ನೋಡಿಕೊಂಡು ಹೋಗಬಹುದು. ಅಲ್ಲದೆ ನಮ್ಮ ಮಗಳು ಸಂಧ್ಯಾ ಮತ್ತು ದೇವಿ ಒಬ್ಬರಿಗೊಬ್ಬರು ಚೆನ್ನಾಗಿ ಹೊಂದಿಕೋತಾರೆ. ಅವಳ ಜೊತೇಲೇ ಸ್ಕೂಲಿಗೆ ಹೋಗಬಹುದು. ಯೋಚನೆ ಮಾಡದೇ ಕಳುಹಿಸಿ. ಈಗ ಬೇಸಿಗೆ ರಜಾಕಾಲ. ಈಗಲೇ ಬಂದರೆ ಸ್ಕೂಲು ಶುರುವಾಗುವಷ್ಟರಲ್ಲಿ ಅಲ್ಲಿನ ಜಾಗಕ್ಕೆ ಹೊಂದಿಕೊಳ್ತಾಳೆ. ನಮ್ಮ ಸಂಧ್ಯಾ ಹೋಗುವ ಶಾಲೆಗೇ ಸೇರಿಸೋಣ. ಒಟ್ಟಿಗೇ ಹೋಗಿಬರುತ್ತಾರೆ.” ಎಂದು ಅವರೆಲ್ಲರನ್ನೂ ಒಪ್ಪಿಸಿ ದೇವಿಯನ್ನು ಮೈಸೂರಿಗೆ ಕರೆದುಕೊಂಡು ಬಂದ.
ಮನೆ ತಲುಪಿದಾಗ ಸಂಧ್ಯಾಳನ್ನು ಕರೆದು “ನೋಡು ಮಗಳೇ, ದೇವಿ ಇನ್ನು ಮೇಲೆ ನಮ್ಮಲ್ಲೇ ಇರ್ತಾಳೆ. ನೀನು ಹೋಗುತ್ತೀಯಲ್ಲ ಆ ಸ್ಕೂಲಿಗೇ ಅವಳನ್ನು ಸೇರಿಸುತ್ತೇನೆ. ರಜಾ ಮುಗಿಯುವುದರೊಳಗೆ ಅವಳಿಗೆ ಸುತ್ತಮುತ್ತಲಿನ ಪರಿಚಯ ಮಾಡಿಕೊಡು. ನಿನ್ನ ರೂಮಿನಲ್ಲಿ ಅವಳ ಸಾಮಾನುಗಳನ್ನು ಇಟ್ಟುಕೊಳ್ಳಲು ಹೇಳು. ಅಲ್ಲೆ ಹೇಗೂ ಎರಡು ಕಬೋರ್ಡ್ ಇವೆಯಲ್ಲಾ. ಒಂದನ್ನು ಖಾಲಿಮಾಡಿ ಅವಳಿಗೆ ಕೊಡು. ಮಂಚ ಹೇಗಿದ್ದರೂ ದೊಡ್ಡದಾಗಿರುವುದರಿಂದ ಇಬ್ಬರು ಮಲಗಲು ಏನೂ ತೊಂದರೆಯಿಲ್ಲ. ಅವಳು ಇಲ್ಲಿಗೆ ಬಂದಾಗಲೆಲ್ಲ ನೀವಿಬ್ಬರೂ ಒಟ್ಟಿಗೆ ಅದೇ ರೂಮಿನಲ್ಲಿ ಇರುತ್ತಿದ್ದಿರಿ. ಹಾಗೇ ಇರಿ. ಏನೂ ತೊಂದರೆಯಾಗದು ಅಲ್ಲವೇ?” ಎಂದ ಅಪ್ಪನ ಮಾತನ್ನು ಕೇಳಿ ಸಂಧ್ಯಾ ಅಷ್ಟೇನೂ ಖುಷಿಪಡಲಿಲ್ಲ. ಏಕೆಂದರೆ ಮನೆಯಲ್ಲಿ ಹಿರಿಯರಿಂದ ಹಿಡಿದು ಕಿರಿಯರ ವರೆಗೆ ಯಾವಾಗಲೂ ದೇವಿಯನ್ನು ಸಂಧ್ಯಾಳ ಜೊತೆಗೆ ಹೋಲಿಕೆ ಮಾಡಿ ನೋಡುತ್ತಿದ್ದರು. ಹಳ್ಳಿಯಲ್ಲಿ ಬೆಳೆದ ಹುಡುಗಿಯಾದರೂ ಹಾಡು, ಹಸೆ, ಅಡುಗೆ, ಓದು ಎಲ್ಲದರಲ್ಲೂ ದೇವಿ ಒಂದು ಕೈ ಮುಂದೆ ಎನ್ನುತ್ತಿದ್ದರು. ಅವಳ ಚುರುಕುತನ ಮೊದಲಿನಿಂದ ಪೇಟೆಯಲ್ಲಿಯೇ ಬೆಳೆದರೂ ಸಂಧ್ಯಾಳಿಗಿಲ್ಲ. ಓದಿನಲ್ಲಿಯೂ ಸಂಧ್ಯಾ ಅಷ್ಟಕ್ಕಷ್ಟೇ ಎನ್ನುತ್ತಿದ್ದರು. ಇದರಿಂದಾಗಿ ಸಂಧ್ಯಾಳಿಗೆ ದೇವಿಯು ಇಲ್ಲಿದ್ದರೆ ನನಗೆ ಪ್ರತಿಸ್ಪರ್ಧಿಯಾಗುತ್ತಾಳೆ ಎನ್ನುವ ಭಾವನೆ ಬೇರೂರಿತ್ತು. ಯಾವಾಗಲಾದರೊಮ್ಮೆ ಬಂದಾಗ ಅವಳ ಗೆಳತಿಯರೂ ದೇವಿಯು ಸೌಂದರ್ಯವನ್ನು ಹೊಗಳಿ “ಸಂಧ್ಯಾ ನಿನ್ನ ಚಿಕ್ಕಪ್ಪನ ಮಗಳು ಎಷ್ಟು ಚಂದವಾಗಿದ್ದಾಳೆ. ವಯಸ್ಸಿಗೆ ಬಂದಾಗ ಹೇಗಾಗುತ್ತಾಳೋ ! ಒಳ್ಳೆ ಸಿನಿಮಾ ತಾರೆಯಂತಾಗುತ್ತಾಳೆ.” ಎನ್ನುತ್ತಿದ್ದರು. ಇನ್ನು ಅವಳು ಇಲ್ಲಿಯೇ ಇರಲು ಬಂದರೆ ಹೇಗೆ ಸಹಿಸಿಕೊಂಡಾಳು. ಅವಳನ್ನು ಬೇಡವೆನ್ನಲೂ ಆಗದು. ಆದರೂ “ಇರಲಿ ಬಿಡು, ಅದೊಂದು ಹಳ್ಳಿಗುಗ್ಗು, ನನಗೆ ಒಬ್ಬ ಸೇವಕಿಯಂತಿರುತ್ತಾಳೆ. ಚೆನ್ನಾಗಿ ಅವಳಿಂದ ಸೇವೆ ಮಾಡಿಸಿಕೊಂಡು ಆಟವಾಡಿಸಬಹುದು. ಅವಳಿಗೆ ನನ್ನ ಮಾತೆಂದರೆ ವೇದವಾಕ್ಯವಿದ್ದಂತೆ” ಎಂದು ಒಂದು ರೀತಿಯ ಸಮಾಧಾನ ಪಟ್ಟುಕೊಂಡಳು.
ಅಪ್ಪ ಹೇಳಿದಂತೆ ಮನಯಿಂದ ಶಾಲೆಗೆ ಹೋಗಿಬರುವ ರಸ್ತೆ, ಸುತ್ತಮುತ್ತಲಿನ ಸ್ಥಳಗಳ ಪರಿಚಯವನ್ನು ದೇವಿಗೆ ಮಾಡಿಸಿಕೊಟ್ಟಳು. “ಅಯ್ಯೋ ಅಕ್ಕಾ, ನೀನು ಶಾಲೆ ಬಹಳ ದೂರವಾಗುತ್ತೇಂತ ಹೇಳಿದ್ದೆ. ಅಮ್ಮಮ್ಮಾ ಅಂದರೆ ಎರಡು ಫರ್ಲಾಂಗ್ ಆಗಬಹುದು. ನಮ್ಮ ಹಳ್ಳೀಲಿ ಸುಗ್ಗಿಕಾಲದಲ್ಲಿ ನಾನು ಅಮ್ಮನ ಜೊತೆ ಕೂಲಿಯಾಳುಗಳಿಗೆ ಹೊಲದ ಹತ್ತಿರ ಬುತ್ತಿ ಕೊಟ್ಟಬಿಟ್ಟು ಅಲ್ಲಿಂದ ಶಾಲೆಗೆ ಹೋಗುತ್ತಿದ್ದೆ. ನಮ್ಮ ಹೊಲ, ಗದ್ದೆ ದಾಟಿಕೊಂಡು ಶಾಲೆ ತಲುಪಬೇಕಾದರೆ ಮೂರು ಮೈಲಿ ಮೇಲಾಗುತ್ತಿತ್ತು. ಇದ್ಯಾವ ಮಹಾ ದೂರ.” ಎಂದಳು. “ಇಬ್ಬರೂ ಒಟ್ಟಿಗೇ ಹೋಗ್ತೀವಲ್ಲಾ, ಯಾವತ್ತಾದರೂ ಯತ್ನ ತಪ್ಪಿದಾಗ ನಾನು ಒಂದುಸಾರಿ ನೋಡಿಕೊಂಡರೆ ಜಪ್ಪಯ್ಯಾಂದ್ರೂ ರಸ್ತೆ ಮರೆಯೋಲ್ಲ” ಎಂದಳು.
ರಜೆ ಮುಗಿದು ಶಾಲೆ ಪ್ರಾರಂಭವಾಗುವಷ್ಟರಲ್ಲಿ ದೇವಿಯು ದೊಡ್ಡಪ್ಪ, ದೊಡ್ಡಮ್ಮನವರಿಗೆ ಅಚ್ಚುಮೆಚ್ಚಾಗಿಬಿಟ್ಟಳು. ಅಕ್ಕಾ ..ಅಕ್ಕಾ ಎಂದು ಸಂಧ್ಯಾಳ ಹಿಂದೆಮುಂದೆ ತಿರುಗುತ್ತಾ ಅವಳು ಹೇಳಿದ್ದನ್ನೆಲ್ಲಾ ವೇದವಾಕ್ಯದಂತೆ ಪಾಲಿಸುತ್ತಾ ಅವಳನ್ನು ದೇವರ ಮಟ್ಟಕ್ಕೆ ಏರಿಸಿಬಿಟ್ಟಿದ್ದಳು. ಇದರಿಂದ ಸಂಧ್ಯಾಳಿಗೆ ಒಂದು ಕೋಡು ಮೂಡಿದಂತಾಯಿತು.
ಮನೆಯಲ್ಲಿದ್ದಾಗ ದೇವಿ ಅಕ್ಕನಿಗೆ, ಅಮ್ಮನಿಗೆ ಸಹಾಯಕಳಾಗಿದ್ದೇ ಅಲ್ಲದೆ ಸಾಯಂಕಾಲ ದೊಡ್ಡಪ್ಪನಿಗೆ ಅಪೇಕ್ಷೆಪಟ್ಟ ದೇವರ ನಾಮಗಳನ್ನು ಹಾಡುತ್ತಿದ್ದಳು. ಕನ್ನಡ ಮಾಧ್ಯಮದಿಂದ ಬಂದ ಹುಡುಗಿ ಬಹಳ ಬೇಗ ಇಂಗ್ಲಿಷ್ ಮಾಧ್ಯಮಕ್ಕೂ ಹೊಂದಿಕೊಂಡುಬಿಟ್ಟಳು. ಪಾಠ ಅರ್ಥವಾಗುತ್ತಾ? ಎಂದು ಕೇಳಿದರೆ “ನಮ್ಮೂರಿನಲ್ಲಿ ಇಂಗ್ಲಿಷ್ ಮೇಷ್ಟರು ಹೇಳಿಕೊಟ್ಟಷ್ಟು ಗ್ರಾಮರ್ ಇಲ್ಲಿನ ಹುಡುಗರಿಗೇ ಗೊತ್ತಿಲ್ಲ. ನಾನೇ ಚೆನ್ನಾಗಿ ಬರೀತೀನಿ” ಎನ್ನುತ್ತಿದ್ದಳು. ಸಂಧ್ಯಾ “ಈ ಮಾತನ್ನೇನಾದರೂ ನಮ್ಮ ಅಪ್ಪ, ಅಮ್ಮ ಕೇಳಿಸಿಕೊಂಡರೆ ಪ್ರಾರಂಭದಿಂದಲೂ ಇಂಗ್ಲಿಷ್ ಮೀಡಿಯಮ್ನಲ್ಲೇ ಓದಿದ್ದೀಯ. ನೀನೂ ಉದ್ಧಾರವಾಗಿಲ್ಲ, ಇಂಗ್ಲಿಷ್ಷೂ ಉದ್ಧಾರವಾಗಿಲ್ಲ” ಎಂದು ಅಣಗಿಸುವುದು ಗ್ಯಾರಂಟಿ” ಎಂದು ಅದರ ಬಗ್ಗೆ ದೇವಿಯನ್ನು ಪ್ರಶ್ನಿಸುವುದನ್ನು ಕೈ ಬಿಟ್ಟಳು.
ದೇವಿಯು ಸಂಧ್ಯಾಳ ಚಿಕ್ಕಪ್ಪನ ಮಗಳೆಂಬ ವಿಷಯ ತಿಳಿಯುತ್ತಿದ್ದಂತೆ ಅವಳ ಸಹಪಾಠಿಗಳಿಂದ ಅವಳ ಟೀಚರುಗಳು ಇಬ್ಬರ ನಡುವೆ ಹೋಲಿಕೆಗಳನ್ನು ಮಾಡುವುದು ಪ್ರಾರಂಭವಾಯಿತು. ಅವಳಿಗರಿವಿಲ್ಲದಂತೆಯೇ ಸಂಧ್ಯಾಳಿಗೆ ದೇವಿಯ ಬಗ್ಗೆ ಮತ್ಸರ ಬೆಳೆಯಿತು.
ಇದ್ಯಾವುದರ ಅರಿವಿಲ್ಲದ ದೇವಿ ತನ್ನ ಶಾಲೆಯ ಎಲ್ಲ ವಿಚಾರಗಳನ್ನೂ ಸಂಧ್ಯಾಳ ಜೊತೆ ಹಂಚಿಕೊಳ್ಳುತ್ತಿದ್ದಳು. ಅವಳ ದೃಷ್ಟಿಯಲ್ಲಿ ಅಕ್ಕ ಸಿಟಿಯಲ್ಲಿದ್ದವಳು, ಅವಳಿಗೆ ಹೆಚ್ಚು ವಿಚಾರಗಳು ಗೊತ್ತಿವೆ. ಅವಳು ತನಗಿಂತಲೂ ಬುದ್ಧಿವಂತೆ ಎಂಬ ಭಾವನೆಯಿತ್ತು. ಶಾಲೆಯಲ್ಲಿ ಕೆಲವು ಗಂಡುಹುಡುಗರು ಏನಾದರೂ ಕಾರಣ ಹುಡುಕಿಕೊಂಡು ದೇವಿಯೊಡನೆ ಮಾತನಾಡಲು, ಅವಳ ಸ್ನೇಹ ಗಳಿಸಲು ಪ್ರಯತ್ನಿಸುವುದನ್ನೂ ಮುಚ್ಚುಮರೆಯಿಲ್ಲದೆ ಸಂಧ್ಯಾಳೊಡನೆ ಹೇಳಿಕೊಳ್ಳುತ್ತಿದ್ದಳು. “ಹಾಗೆಲ್ಲ ಹುಡುಗರ ಜೊತೆಯಲ್ಲಿ ಪರಿಚಯ ಮಾಡಿಕೊಳ್ಳುವುದು, ಅವರೊಡನೆ ಸಲಿಗೆಯಿಂದ ಇರುವುದು ಕೆಟ್ಟ ನಡವಳಿಕೆ, ನೀನೀಗ ಪುಟ್ಟ ಹುಡುಗಿಯಲ್ಲ ಇಷ್ಟರಲ್ಲೇ ದೊಡ್ಡವಳಾಗುವ ವಯಸ್ಸು ನಿನ್ನದು ಹುಷಾರಾಗಿರು” ಎಂದು ದೇವಿಯನ್ನು ಎಚ್ಚರಿಸುತ್ತಿದ್ದಳು. ಹೀಗಾಗಿ ದೇವಿ ಅದನ್ನೆಲ್ಲ ಪಾಲಿಸುತ್ತಿದ್ದಳು. ಅವಳಿಗೆ ಹುಡುಗಿಯರು ದೊಡ್ಡವಳಾಗುವುದೆಂದರೆ ಏನೆಂಬುದೇ ತಿಳಿದಿರಲಿಲ್ಲ. ಈ ಬಗ್ಗೆ ಸಂಧ್ಯಾಳನ್ನು ಪ್ರಶ್ನಿಸಿದಾಗ “ಹೀಗೆಲ್ಲ ಕೇಳಬಾರದು. ಆದಾಗ ನಿನಗೇ ಗೊತ್ತಾಗುತ್ತದೆ” ಎಂದು ಬಾಯಿ ಮುಚ್ಚಿಸಿದ್ದಳು.
ಎಂಟನೆಯ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ದೇವಿ ತರಗತಿಗೇ ಮೊದಲನೆಯವಳಾದರೆ ಸಂಧ್ಯಾ ಜೀವನಾಂಶದೊಂದಿಗೆ ಹತ್ತನೇ ತರಗತಿಗೆ ತೇರ್ಗಡೆ ಹೊದಿದ್ದಳು. ದೇವಿಯನ್ನು ಸಹಪಾಠಿಗಳು ಅಕ್ಕನ ನೆರಳು ‘ಬುದ್ಧೂ’ ಎಂದು ಹೆಸರಿಟ್ಟು ಕರೆಯುತ್ತಿದ್ದರು.
ಒಂಬತ್ತನೆಯ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯ ಕೊನೆಯ ದಿನ ಪೇಪರ್ ಬರೆದು ಮನೆಗೆ ಹೋಗುವುದರಲ್ಲಿದ್ದಾಗ ದೇವಿಗೆ ಏಕೋ ಕಿಬ್ಬೊಟ್ಟೆ ಹಿಂಡಿದಂತಾಯ್ತು. ಇದೇನಪ್ಪಾ ದೇವರೇ ಹೀಗಾಗುತ್ತಿದೆ. ಯಾರಿಗೆ ಹೇಳೋದು ಅಂದುಕೊಂಡು ಸಂಧ್ಯಾ ಅಕ್ಕನ ತರಗತಿಯ ಬಳಿಗೆ ಕಷ್ಟಪಟ್ಟು ಹೋದಳು. ಕಿಟಕಿಯ ಹತ್ತಿರ ನಿಂತಿದ್ದ ದೇವಿಯನ್ನು ನೋಡಿದ ಸಂಧ್ಯಾ ಟೀಚರ್ ಪರ್ಮಿಷನ್ ಕೇಳಿ ಹೊರಕ್ಕೆ ಬಂದಳು. “ಏನು ದೇವಿ ಇಲ್ಲಿಗೇಕೆ ಬಂದೆ. ಪರೀಕ್ಷೆ ಇತ್ತಲ್ಲವಾ?” ಎಂದು ಪ್ರಶ್ನಿಸಿದಳು. ಪರೀಕ್ಷೆ ಬರೆದೆ ಕಣೆ. ಆದರೆ ನನಗೆ ತಡೆದುಕೊಳ್ಳಲಾಗದಂಥ ನೋವು ಕಿಬ್ಬೊಟ್ಟೆಯಲ್ಲಿ. ನನ್ನ ಜೊತೆ ಬಾರೆ ಮನೆಗೆ ಹೋಗೋಣ” ಎಂದು ಕೇಳಿಕೊಂಡಳು.
ಸಂಧ್ಯಾಳಿಗೆ ಅವಳಿಗೇನಾಗುತ್ತಿದೆ ಎಂಬುದು ಅರ್ಥವಾಯಿತು. ಅವಳ ಮನಸ್ಸಿನಲ್ಲಿ ಮತ್ಸರ ಹೆಡೆಯೆತ್ತಿತು. ಬುದ್ಧೂವನ್ನು ಸ್ವಲ್ಪ ಕೀಟಲೆ ಮಾಡೋಣವೆನ್ನಿಸಿತು. “ಓ..ನಾನು ಏನು ಆಗಬಾರದೂಂತ ಅಂದುಕೊಂಡಿದ್ದೆನೋ ಅಂತದ್ದೇ ಆಗಿರಬೇಕು ಕಣೆ. ನನ್ನ ಪರಿಚಯದ ಹುಡುಗಿಯೊಬ್ಬಳಿಗೆ ಹೀಗೇ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಬಂದಿತ್ತು. ಅದರಿಂದ ರಕ್ತಕೂಡ ಹರಿದು ಹೊರಬಂದಿತ್ತು. ಹರಿವು ನಿಲ್ಲದೇ ನಿತ್ರಾಣವಾಗಿ ಬಿಟ್ಟಳು. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ಡಾಕ್ಟರು ಹೊಟ್ಟಯೊಳಗೆ ದುರ್ಮಾಂಸ ಬೆಳೆದಿದೆ ಅದನ್ನು ಆಪರೇಷನ್ ಮಾಡಬೇಕು. ಇಲ್ಲವಾದರೆ ಮುಂದೆ ಅದು ಕ್ಯಾನ್ಸರ್ ಆಗೋ ಸಾಧ್ಯತೆಯಿದೆ ಎಂದರಂತೆ. ಅಂತೂ ಕೆಲವುದಿನಗಳ ನಂತರ ಆಪರೇಷನ್ ಮಾಡಿಸಿದರೂ ಆಕೆ ಉಳಿಯಲಿಲ್ಲ. ಸುಮ್ಮನೆ ಸಾವಿರಾರು ರೂಪಾಯಿ ಖರ್ಚಾಯಿತು.” ಎಂದು ಕ್ರೂರವಾದ ಒಂದು ಕಟ್ಟುಕತೆಯನ್ನು ಹೇಳಿದಳು. ಮೊದಲೇ ಮುಗ್ಧ ಹೆಣ್ಣು ದೇವಿಯ ಮನಸ್ಸು ಉದ್ವಿಗ್ನ ಸ್ಥಿತಿಯಲ್ಲಿತ್ತು. ಮೇಲೆ ಕತೆ ಕೇಳಿ ಅವಳ ಹೃದಯ ಹೊಡೆದುಕೊಳ್ಳತೊಡಗಿತು. ತನಗೆ ಇನ್ನೂ ಕ್ಲಾಸ್ ಇರುವುದರಿಂದ ನೀನು ಒಬ್ಬಳೇ ಮನೆಗೆ ಹೋಗು ಎಂದು ಸಂಧ್ಯಾ ಹೇಳಿದಾಗ ದೇವಿಗೆ ಇದ್ದಬದ್ದ ಆಸರೆಯೂ ಕುಸಿದಂತಾಯಿತು. ಸಂಧ್ಯಾ ಹೇಳಿದ ಕಥೆ ಅವಳ ಮನಸ್ಸಿನಲ್ಲೇ ಕೊರೆಯುತ್ತಿತ್ತು. ಹಾಗೇನಾದರೂ ಆದರೆ ತನ್ನ ಸಾವು ಖಚಿತವಾದಂತೆಯೇ ಎಂಬ ಭಯ ಕಾಡಿತು.
ಅಲ್ಲಿಂದ ಮನೆಯ ವರೆಗೆ ಧಾವಂತದಲ್ಲಿಯೇ ಬಂದುಮುಟ್ಟಿದ ದೇವಿಯನ್ನು ನೋಡಿ ಅವಳ ದೊಡ್ಡಮ್ಮ ವತ್ಸಲ ಗಾಭರಿಯಿಂದ “ದೇವೀ, ಯಾಕಮ್ಮಾ? ಏನಾಯ್ತು?” ಎಂದು ಧಾವಿಸಿದರು. ಬಾತ್ರೂಮಿನೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡ ದೇವಿ ಏನನ್ನೂ ಹೇಳಲಿಲ್ಲ. ಸ್ವಲ್ಪ ಹೊತ್ತಾದರೂ ಹೊರಕ್ಕೆ ಬಾರದ್ದರಿಂದ ಬಾಗಿಲನ್ನು ಬಡಿದರು. ಬಲವಂತವಾಗಿ ತಳ್ಳಿದಾಗ ಬಾಗಿಲು ತೆರೆಯಿತು. ನೋಡಿದವರಿಗೆ ಎದೆ ಧಸಕ್ಕೆಂದಿತು. ಮುಖ ಅಡಿಯಾಗಿ ದೇವಿ ಬಿದ್ದಿದ್ದಳು. ಅವಳ ಲಂಗ ದಾವಣಿಗಳೆಲ್ಲ ರಕ್ತಮಯವಾಗಿದ್ದವು. ಅದನ್ನು ನೋಡಿ ಏನಾಗಿರಬಹುದೆಂಬ ಅರಿವಾದ ವತ್ಸಲಾ “ಏಳೇ ದೇವಿ, ಏನೂ ಆಗಿಲ್ಲ. ನೀನು ದೊಡ್ಡವಳಾಗಿದ್ದೀ. ಇದೆಲ್ಲ ಸಾಮಾನ್ಯ. ಹೆದರಿಕೋಬೇಡ.” ಎಂದು ಹತ್ತಿರಕ್ಕೆ ಬಂದು ಅವಳನ್ನೆಬ್ಬಿಸಹೋದರು.
ಆದರೆ ದೇವಿಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಅವಳ ದೇಹವಾಗಲೇ ತಣ್ಣಗಾಗಿತ್ತು. ತಕ್ಷಣ ಪರಿಚಯವಿದ್ದ ಡಾಕ್ಟರನ್ನು ಕರೆತಂದರು. ಅವರು ಪರೀಕ್ಷೆಮಾಡಿ ಹುಡುಗಿ ಏನೋ ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಸತ್ತಿದ್ದಾಳೆ ಎಂದು ತಿಳಿಸಿದರು. ಎಲ್ಲರೂ ದಿಕ್ಕೆಟ್ಟು ಕುಳಿತಿದ್ದಾಗ ಸಂಧ್ಯಾಳ ಆಗಮನವಾಯಿತು. “ಅಮ್ಮಾ, ಯಾಕಮ್ಮಾ ಪಕ್ಕದಮನೆ ಡಾಕ್ಟರ್ ಆಂಟಿ ಬಂದಿದ್ದರು ಯಾರಿಗೇನಾಗಿದೆ. ದೇವಿಯೇಕೆ ಹೀಗೆ ಮಲಗಿದ್ದಾಳೆ. ಅವಳಿಗೇನಾಗಿದೆ?” ಎಂದು ಪ್ರಶ್ನಿಸಿದಳು.
ವತ್ಸಲಾ ಕಣ್ಣೀರು ಸುರಿಸುತ್ತಲೇ “ನಮ್ಮ ದಂತದ ಬೊಂಬೆ ದೇವಿ ಇನ್ನೆಲ್ಲಿ ಮಗಳೇ. ನಮ್ಮನ್ನೆಲ್ಲಾ ಬಿಟ್ಟು ಅವಸರವಾಗಿ ದೇವರಪಾದ ಸೇರಿಕೊಂಡುಬಿಟ್ಟಳು. ಅವರ ತಂದೆತಾಯಿಗಳಿಗೆ, ಹಿರಿಯರಿಗೆ ಏನು ಉತ್ತರಕೊಡಲಿ?” ಎಂದು ಗೋಳಾಡಿದರು.
ಸಂಧ್ಯಾಳಿಗೆ ತಾನು ಮಾಡಿದ ಒಂದು ಹುಡುಗಾಟಿಕೆ ಈ ಮಟ್ಟಕ್ಕೆ ಅಪಾಯಕಾರಿಯಾಗುತ್ತೆ ಅಂದುಕೊಂಡಿರಲಿಲ್ಲ. ಆದರೆ ಮುಗ್ಧಳಾದ ದೇವಿಗೆ ತಾನು ಮಾಡಬಾರದ ಅನ್ಯಾಯ ಮಾಡಿಬಿಟ್ಟೆ. ಇಂತಹ ಕ್ರೂರವಾದ ಪರಿಣಾಮಕ್ಕೆ ತಾನೇ ಕಾರಣಳಾದೆನಲ್ಲಾ ಎಂದು ಭಯವಾಯಿತು. ನಿಜ ವಿಷಯವನ್ನು ಈಗ ತಿಳಿಸಿದರೆ ಅದರ ಪರಿಣಾಮ ಇನ್ನೂ ಭಯಂಕರವಾಗುತ್ತೆ. ಸದ್ಯಕ್ಕೆ ಮೌನವಹಿಸುವುದೇ ಒಳ್ಳೆಯದು ಎಂದು ಸುಮ್ಮನಾದಳು. ಅವಳ ಅಂತರಂಗದಲ್ಲಿ ಮಾತ್ರ ಅದು ತಾನೇ ವಿನಾಕಾರಣ ಮಾಡಿದ ಕೊಲೆ ಎಂದು ಕೊರೆಯುತ್ತಿತ್ತು.
ಸಂಜೆಗೆ ಇದ್ಯಾವುದರ ಅರಿವಿಲ್ಲದೇ ಮನೆಗೆ ಹಿಂದಿರುಗಿದ ರಂಗಪ್ಪ ಭೂಮಿಗೇ ಇಳಿದುಹೋದ. ತಾನೇ ದೇವಿಯ ಜವಾಬ್ದಾರಿ ಹೊತ್ತು ಕರೆತಂದಿದ್ದ. ಅವಳ ತಂದೆತಾಯಿಗಳಿಗೆ, ತಾತ ಅಜ್ಜಿಯರಿಗೆ ಏನು ಉತ್ತರ ಕೊಡಲಿ ಎಂದು ಎದೆಎದೆ ಬಡಿದುಕೊಂಡು ಗೋಳಾಡತೊಡಗಿದ. ಸುತ್ತಮುತ್ತಲಿನವರು ಅವನನ್ನು ಸಮಾಧಾನ ಪಡಿಸಿದರು. ಸುದ್ಧಿ ತಿಳಿದು ಊರಿನಿಂದ ಬಂದವರೆಲ್ಲರೂ ಶೋಕಸಾಗರದಲ್ಲಿ ಮುಳುಗಿದರು. ಕೊನೆಗೆ ಅವರವರೇ ಸಮಾಧಾನಪಡಿಸಿಕೊಂಡು ಅವಳ ಆಯುಸ್ಸು ಇದ್ದದ್ದೇ ಅಷ್ಟು. ಯಾರನ್ನು ಆಕ್ಷೇಪಿಸುವುದು ಎಂದು ದೇವಿಯ ಅಂತ್ಯ ಕ್ರಿಯೆಯನ್ನು ಮುಗಿಸಿದರು. ಕಾಲಕ್ರಮೇಣ ಎಲ್ಲವೂ ನೆನಪಿನಾಳದಲ್ಲಿ ಹುದುಗಿಹೋದವು.
ಸಂಧ್ಯಾಳಿಗೆ ಒಳೊಳಗೇ ಪಾಪಪ್ರಜ್ಞೆ ಕಾಡತೊಡಗಿತು. ದೇವಿ ತನ್ನಲ್ಲಿಟ್ಟಿದ್ದ ಅವ್ಯಾಜ ಪ್ರೀತಿಯನ್ನು ತಾನು ಅರ್ಥಮಾಡಿಕೊಳ್ಳದೆ ಅವಳ ಬದುಕಿಗೇ ತಾನು ಕೊಳ್ಳಿಯಿಟ್ಟೆ ಎಂಬುದು ಭದ್ರವಾಗಿ ಅವಳ ಹೃದಯದಲ್ಲಿ ಕುಳಿತು ಬಿಟ್ಟಿತು. ಅವಳಿಗೆ ಓದಿನಲ್ಲಿ ಗಮನ ಉಳಿಯಲಿಲ್ಲ. ನಾಲ್ಕು ಬಾರಿ ಪರೀಕ್ಷೆ ಕಟ್ಟಿದರೂ ಹತ್ತನೆಯ ತರಗತಿಯಲ್ಲಿ ಪಾಸಾಗಲಿಲ್ಲ. ತಂದೆ,ತಾಯಿ, ಚಿಕ್ಕಪ್ಪ ಚಿಕ್ಕಮ್ಮ, ತಾತ ಅಜ್ಜಿಯರು ದೇವಿಯ ಅಗಲಿಕೆಯೇ ಇದಕ್ಕೆ ಕಾರಣವೆಂದು ಅರ್ಥೈಸಿಕೊಂಡರು. ತಮಗೆ ಪರಿಚಯವಿದ್ದ ಕುಟುಂಬದ ವರ ಮಾಧವನೊಂದಿಗೆ ಅವಳ ವಿವಾಹ ಮಾಡಿ ಮುಗಿಸಿದರು. ಅವರಿಬ್ಬರ ಮಗಳೇ ‘ಸಿರಿ’. ಅವಳನ್ನು ಕುಟುಂಬದವರೆಲ್ಲ “ದೇವಿ ನಿನ್ನನ್ನು ಬಿಟ್ಟಿರಲಾಗದೇ ನಿನಗೆ ಮಗಳಾಗಿ ಹುಟ್ಟಿ ಬಂದಿದ್ದಾಳೆ” ಎನ್ನುತ್ತಿದ್ದರು. ಅವರ ಮಾತು ನಿಜವೇನೋ ಅನ್ನಿಸುವಂತೆ ಸಿರಿಯ ಸೌಂದರ್ಯವೂ ದೇವಿಗೆ ಹೋಲಿಕೆಯಾಗಿತ್ತು. ಈಗ ಸಿರಿ ಕೂಡ ಬೆಳೆದು ಪ್ರಬುದ್ಧ ವಯಸ್ಸಿಗೆ ಬಂದಿದ್ದಾಳೆ. ಆದರೆ ಒಂದೇ ವ್ಯತ್ಯಾಸ. ಸ್ವಭಾವದಲ್ಲಿ ಸಿರಿ ಮುಗ್ಧಳಲ್ಲ. ಅವಳಿಗೆ ಸಾಮಾನ್ಯ ಜ್ಞಾನ ಹೆಚ್ಚಾಗಿದೆ. ಅಮ್ಮನಿಗೇ ಹೇಳಿಕೊಡುವಷ್ಟು.
“ಮಮ್ಮೀ ನಾನಾಗಲೇ ಫ್ರೆಷ್ ಆಗಿ ಬಂದಾಯ್ತು. ನೀನಿನ್ನೂ ಫ್ರಿಜ್ ಹತ್ತಿರ ಏನು ತಪಸ್ಸು ಮಾಡುತ್ತಿದ್ದೀಯ.” ಎಂದು ಭುಜ ಹಿಡಿದು ಅಲುಗಾಡಿಸಿದಾಗ ವಾಸ್ತವಕ್ಕೆ ಹಿಂದಿರುಗಿದಳು ಸಂಧ್ಯಾ. “ಅಲ್ಲಾ ಮಗಳೇ ನೀನು ಅದೆಷ್ಟು ಸಲೀಸಾಗಿ ಮುಟ್ಟಾಗಿದ್ದೇನೆ ಅಂದುಬಿಟ್ಟೆಯಲ್ಲಾ. ಅದೆಲ್ಲಾ ಹೇಗೆ ಗೊತ್ತು?”
“ಹ್ಹಾ ಹ್ಹಾ..ಮಮ್ಮಿ ನೀನಿನ್ನೂ ಯಾವ ಕಾಲದಲ್ಲಿದ್ದೀಯೆ. ಟಿವಿ ಜಾಹಿರಾತುಗಳು ಇದರ ಬಗ್ಗೆ ದಿನನಿತ್ಯ ಸಾರುತ್ತಿವೆ. ಶಾಲೆಯಲ್ಲೂ ಟೀಚರುಗಳು ಇದರ ಬಗ್ಗೆ ತಿಳಿಸುತ್ತಾರೆ. ಅದಿರಲಿ ಈ ವಿಷಯವನ್ನು ನೀನು ನಿನ್ನ ಪಟಾಲಮ್ಮಿಗೆಲ್ಲ ಹೇಳಿ ಸುದ್ಧಿ ಮಾಡಬೇಡ. ಅಜ್ಜಿ ತಾತ ಈ ಸಮಯದಲ್ಲಿ ಪ್ರವಾಸ ಹೋಗಿದ್ದು ಒಳ್ಳೆಯದೇ ಆಯ್ತು ಇಲ್ಲದಿದ್ದರೆ ಅದೂ ಇದೂ ಶಾಸ್ತ್ರ ಅಂತ ತಲೆ ತಿಂದುಬಿಡೋರು. ಅವರು ಹಿಂದಿರುಗುವಷ್ಟರಲ್ಲಿ ಇದೆಲ್ಲ ಹಳೆಯದಾಗಿರುತ್ತೆ.” ಎಂದಳು.
“ಹೌದು ಮಗಳೇ ನೀನು ಅಂದಂತೆ ದೇವಿಯ ಕಥೆ ಬಹಳ ಹಳೆಯದಾಯ್ತು. ಆದರೆ ನನ್ನ ಮನಸ್ಸಿನಲ್ಲಿ ಆ ಘಟನೆ ಒಂದು ಕಪ್ಪು ಚುಕ್ಕೆಯಾಗಿ ನಿಂತಿದೆ” ಎಂದು ಸ್ವಗತದಲ್ಲಿ ಅಂದುಕೊಂಡು ಮಗಳನ್ನು ಬಾಚಿ ತಬ್ಬಿಕೊಂಡಳು. ಅದರ ಮೂಲಕ ದೇವಿಯನ್ನೇ ತಬ್ಬಿದಂತಹ ನೆಮ್ಮದಿ ಅವಳಿಗಾಯ್ತು.
–ಬಿ.ಆರ್.ನಾಗರತ್ನ, ಮೈಸೂರು
ನಿಜ, ಕಪ್ಪುಚುಕ್ಕೆ…………
ಅಪರಾಧೀ ಭಾವವೇ ಆ ಕಪ್ಪುಚುಕ್ಕೆ.
ಯಾರಿಗೂ ಕಾಣದಂತೆ ಸುಣ್ಣ ಬಣ್ಣ ಹೊಡೆದುಕೊಂಡರೂ
ನಮ್ಮ ಅಂತರಾತ್ಮಕೆ ಗೊತ್ತಿರುತ್ತದೆ. ಸಿನಿಮೀಯ ತಿರುವುಗಳಿದ್ದರೂ
ಕತೆಯು ಅಚ್ಚುಕಟ್ಟಾಗಿದೆ. ಹೇಳಬೇಕಾದದ್ದನ್ನು ಹೇಳಿ ಮುಗಿಸಿದೆ.
ನಾವಿನ್ನು ಅದರ ಗುಂಗಿನಲೇ ಬದುಕಿನ ವಿಧಿಬರೆಹವನ್ನು ಓದಲಾಗದೇ
ಒದ್ದಾಡುವಂತಿದೆ. ನಿಮ್ಮ ಕತೆಗಳ ಅಧ್ಯಯನವನ್ನು ನಮ್ಮ ವಿದ್ಯಾರ್ಥಿಗೆ
ವಹಿಸಿದ್ದೇನೆ. ಧನ್ಯವಾದಗಳು ಮೇಡಂ.
ಮೊದಲನೆಯದಾಗಿ ನಿಮ್ಮ ಸಹೃದಯತೆಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು ಮಂಜು ಸಾರ್ ಎರಡನೆಯ ದಾಗಿ ಈಗಿನ ಕಥೆಗೆ ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು..
ಪ್ರಕಟಿಸಿದ ಗೆಳತಿ ಹೇಮಾಳಿಗೆ ಹೃತ್ಪೂರ್ವಕವಾದ ಧನ್ಯವಾದಗಳು
ವಿಭಿನ್ನ ಸ್ವರೂಪದ, ಮನಶ್ಶಾಸ್ತ್ರಕ್ಕೂ ಥಳಕು ಹಾಕಿಕೊಂಡ ಕತೆ ಸೊಗಸಾಗಿ ಮೂಡಿ ಬಂದಿದೆ.
ಧನ್ಯವಾದಗಳು ಗೆಳತಿ ಹೇಮಾ
ಎಷ್ಟು ಚಂದ ಕಥೆ ಹೆಣೆಯುತ್ತೀರಿ
ಮೇಡಂ. ಬಹಳ ಸೊಗಸಾಗಿದೆ
ಧನ್ಯವಾದಗಳು ನಯನಾ ಮೇಡಂ
ನಾಗರತ್ನ ಮೇಡಂ ಕಥೆ ಹೆಣೆಯುವುದರಲ್ಲಿ ನಿಸ್ಸೀಮರು! ಮನೋವೈಜ್ಞಾನಿಕ ಭೂಮಿಕೆಯುಳ್ಳ ಕಥಾಹಂದರವು ಎಂದಿನಂತೆ ಮನಸೆಳೆಯಿತು.
ನಿಮ್ಮ ಪ್ರತಿಕ್ರಿಯೆ ಗೆ ಧನ್ಯವಾದಗಳು ಶಂಕರಿ ಮೇಡಂ
ಸೊಗಸಾದ ಕಥೆ. ಕೆಲವೊಮ್ಮೆ ಸಣ್ಣದೊಂದು ತ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಮಾಡಿದೊಂದು ತಪ್ಪಿಗೆ ಜೀವನಪೂರ್ತಿ ಪಾಪಪ್ರಜ್ಞೆಯಿಂದ ನರಳುತ್ತಿದ್ದ ಸಂಧ್ಯಾಳಿಗೆ ಸಮಾಧಾನ ದೊರಕಿದ ಪರಿ ಓದುಗರಿಗೂ ನಿರಾಳತೆಯನ್ನುಂಟು ಮಾಡುವಂತಾಯಿತು.
ಧನ್ಯವಾದಗಳು ಪದ್ಮಾ ಮೇಡಂ