ಜೀವನ ಮತ್ತು ಉಂಗುರ, ಕ್ಷಣ ಭಂಗುರ

Share Button

ಜಮ್ಮು ಕಾಶ್ಮೀರಕ್ಕೆ ಹೋಗಿ ಹೆಚ್ಚು ಕಡಿಮೆ ನಲವತ್ತಮೂರು ವರ್ಷಗಳಾಗಿದ್ದುವು. ನನ್ನ ಗೆಳತಿ ಬೆಂಗಳೂರಿನಿಂದ ಪ್ಯಾಕೇಜ್ ಟೂರಿನಲ್ಲಿ ಹೊರಟಿದ್ದಳು. ನನ್ನನ್ನು ಬರುತ್ತೀಯಾ ಎಂದು ವಿಚಾರಿಸಿದಳು. ಮೊದಲು ಅನುಮಾನದಿಂದ ‘ನೋಡೋಣ’ ಎಂದು ಉತ್ತರ ಕೊಟ್ಟೆ. ನಂತರ ನನ್ನ ಪತಿ ‘ನೋಡಿ ನಾಲ್ಕು ದಶಕಗಳ ಮೇಲಾಗಿದೆಯಲ್ಲಾ ಹೋಗೋಣ’ ಎಂದರು. ಸರಿ ಮುಂಗಡ ಹಣ ಕೊಟ್ಟಿದ್ದಾಯಿತು. 2025 ಏಪ್ರಿಲ್ 5 ರಿಂದ 12 ರವರೆಗೆ ಪ್ರವಾಸ.

ಪ್ರವಾಸ ಶುರುವಾಯಿತು. ಮೊದಲು ಕಾಲಿಟ್ಟಿದ್ದು ಶ್ರೀನಗರಕ್ಕೆ ಸೆಕ್ಯೂರಿಟಿ ಎಲ್ಲ ಕಡೆ ಜಾಸ್ತಿಯೇ ಇದೆ. ರಸ್ತೆಯಲ್ಲಿ 50-100 ಅಡಿಗಳಿಗೆ ಒಬ್ಬ ಸಿಆರ್‌ಪಿಎಫ್ ಯೋಧ ನಿಂತಿರುತ್ತಾನೆ. ಕೈಯಲ್ಲಿ ಬಂದೂಕ, ತಲೆಮೇಲೆ ಶಿರಸ್ತ್ರಾಣ. ಇಂತಹ ಸಾವಿರಾರು ಯೋಧರು ಮತ್ತು ಸೈನಿಕರು ಕಾಶ್ಮೀರವನ್ನು ಕಾಯುತ್ತಿದ್ದಾರೆ. ನಮ್ಮನ್ನೂ ರಕ್ಷಿಸುತ್ತಿದ್ದಾರೆ.

ಇಂತಿಪ್ಪ ಕಾಶ್ಮೀರದಲ್ಲಿ ನಾವು ಏಪ್ರಿಲ್ 9ನೇ ತಾರೀಖು 2025 ರಂದು ಪಹಲ್‌ಗಾಮ್‌ಗೆ ಬೆಳಿಗ್ಗೆ ಒಂಭತ್ತಕ್ಕೆ ಹೊರಟೆವು. ರಾತ್ರಿ ಶ್ರೀ ನಗರದಲ್ಲಿ ಮಳೆ ಸುರಿದಿತ್ತು. ನಮ್ಮ ಪ್ರಯಾಣದ ಅವಧಿ ಸುಮಾರು ನಾಲ್ಕು ಗಂಟೆಗಳ ಕಾಲ, ದಾರಿಯುದ್ದಕ್ಕೂ ದೇವದಾರು, ಸೂಜಿಪರ್ಣ ಮರಗಳು ನಾವೂ ಯೋಧರಂತೆಯೇ ನೆಟ್ಟಗೆ ನಿಂತಿದ್ದೇವೆ ಎಂದು ಹೇಳುವಂತಿತ್ತು. ದಾರಿಯಲ್ಲೂ ನೂರಾರು ಯೋಧರು ದೇಶವನ್ನು ಕಾಯುತ್ತಾ ನಿಂತಿದ್ದರು. ರಸ್ತೆಯಲ್ಲಿ ಆಗಾಗ ಮಿಲಿಟರಿ ವಾಹನಗಳು ಹೋಗುತ್ತಿದ್ದವು. ಅವರು ಚಲಿಸುವಾಗ ಬೇರೆ ವಾಹನಗಳು ನಿಂತಿರಬೇಕು. ದಾರಿಯಲ್ಲಿ ಪುಲ್ವಾಮ ಸಿಕ್ಕಿತು. ಇದು ಬಹಳ ಕುಪ್ರಸಿದ್ಧ ಜಾಗ. ಏಕೆಂದರೆ ಕೆಲವು ವರ್ಷಗಳ ಹಿಂದೆ ಇಲ್ಲಿ ಸೈನಿಕರ ‘ಮಾರಣಹೋಮ’ ಆಯಿತಲ್ಲ. ಪುಲ್ವಾಮ ಕೇಸರಿ ಬೆಳೆಯುವ ಜಾಗ ಕೂಡ ಹೌದು. ನಮ್ಮ ಚಿಕ್ಕ ಬಸ್ಸುಗಳನ್ನು ಕೇಸರಿ ಮತ್ತು ಒಣ ಹಣ್ಣುಗಳನ್ನು ಕೊಳ್ಳಲು ಒಂದು ಅಂಗಡಿಯ ಮುಂದೆ ನಿಲ್ಲಿಸಲಾಯಿತು. ಡ್ರೈವರ್ ತನಗೆ ಬೇಕಾದ ಅಂಗಡಿಗೆ ಹೋಗುತ್ತಾನೆ ಎಂದು ಬೇರೆ ಹೇಳಬೇಕಿಲ್ಲ. ಏಕೆಂದರೆ ಅವನಿಗೆ ಕಮಿಷನ್ ಇರುತ್ತದೆ. ನಾವೆಲ್ಲಾ ಇಳಿದು ಸ್ವಲ್ಪಮಟ್ಟಿಗೆ ವ್ಯಾಪಾರ ಮಾಡಿದೆವು. ಇಷ್ಟ ಬಂದಹಾಗೆ ಎಲ್ಲೆಲ್ಲೂ ಹೋಗಬಾರದು ಎಂದು ನಮಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಮತ್ತೆ ನಮ್ಮ ಟಿಟಿಗಳನ್ನೇರಿ ಪ್ರಯಾಣ ಮುಂದುವರೆಸಿದೆವು. ಈಗ ಕೇಸರಿ ಹೂ ಬಿಡುವ ಕಾಲವಲ್ಲ. ಆದ್ದರಿಂದ ಅದು ಬೆಳೆಯುವ ಜಾಗವನ್ನು ಹತ್ತಿರಹೋಗಿ ನೋಡಲಿಲ್ಲ. ಮುಂದೆ ಹೋಗುತ್ತಾ ರಸ್ತೆಯ ಎರಡೂ ಬದಿಯಲ್ಲಿ ಚಿಕ್ಕ ಮರಗಳು ಒಡಲ ತುಂಬಾ ಬಿಳಿಯ ಹೂಗಳನ್ನು ಧರಿಸಿ ಸುಂದರವಾಗಿ ನಿಂತಿದ್ದವು. ಇವು ಸೇಬಿನ ಮರಗಳು. ಕಂದು-ಕರಿಯ ರೆಂಬೆಗಳ ತುಂಬಾ ಬಿಳಿಯ ಸುಂದರ ಹೂಗಳು. ಸೇಬು ಗುಲಾಬಿಯ ಕುಟುಂಬಕ್ಕೇ ಸೇರಿದೆ. ಹತ್ತಿರದಿಂದ ಹೂಗಳನ್ನು ಮತ್ತು ತೋಟವನ್ನು ನೋಡುವ ಆಸೆ ಆಯಿತು. ಮುಂದೆ ನಿಲ್ಲಿಸುವುದಾಗಿ ನಮ್ಮ ಚಕ್ರಪಾಣಿ ಅರ್ಥಾತ್ ಚಾಲಕ ಹೇಳಿದ. ಅಂತೆಯೇ ಬಸ್ಸು ನಿಂತಿತು. ನಾವು ಸೇಬಿನ ತೋಟವನ್ನು ಹೊಕ್ಕೆವು. ಹೋಗುತ್ತಿದ್ದಂತೆಯೇ ಸುಮಧುರ ಮತ್ತು ತಿಳಿಯಾದ ಪರಿಮಳ ನನ್ನನ್ನಾವರಿಸಿತು. ಹತ್ತಿರದಿಂದ ಈ ಬಿಳಿಯ ಹೂಗಳನ್ನು ನೋಡಿ ಆಘ್ರಾಣಿಸಿದೆ. ಜೊತೆಗೆ ಫೋಟೋ ಆಗಲೇಬೇಕಲ್ಲ! ಅದೂ ಆಯಿತು. ಸೇಬಿನ ಜ್ಯೂಸ್ ಕುಡಿದೆವು. ಮತ್ತೆ ಬಸ್ಸೇರಿ ಪಹಲ್‌ಗಾಮ್ ಕಡೆ ಪಯಣ.

ಪಹಲ್‌ಗಾಮ್ ತಲುಪಿದಾಗ ಮಧ್ಯಾಹ್ನ ಒಂದು ಗಂಟೆಯ ಮೇಲಾಗಿತ್ತು. ಅಲ್ಲಿಯ ಜನಸಾಗರ, ವಾಹನಗಳು, ಪೋನಿಗಳನ್ನು ನೋಡಿಯೇ ಸಾಕಾಯಿತು. ಸಾವಿರಾರು ಜನ ನೆರೆದಿದ್ದರು. ಸುತ್ತಮುತ್ತ ನೋಡಲು ಕಾರಿನಲ್ಲಿ ಅಥವಾ ಪೋನಿಯ (ಕುದುರೆ) ಮೇಲೆ ಹೋಗಬಹುದಿತ್ತು. ಮೇಘಗಳು ತಲೆಯ ಮೇಲೇ ಅಟಕಾಯಿಸಿಕೊಂಡಿದ್ದವು. ನಮ್ಮಂತಹ ಹಿರಿಯರಿಗೆ ಕಾರೇ ಸರಿ ಎಂದುಕೊಂಡೆವು. ಆದರೆ ಒಂದು ಕಾರು ಕೂಡ ಸಿಗುವ ಸ್ಥಿತಿ ಇರಲಿಲ್ಲ. ಒಂದು ಗಂಟೆಯಷ್ಟಾದರೂ ಕಾದು, ಕಡೆಗೆ ಒಂದು ಕಾರಿನಲ್ಲಿ ನಾಲ್ಕು ಜನ ಕುಳಿತು ಹೊರಟೆವು. ನಾವಿಬ್ಬರು ಮತ್ತು ಇಬ್ಬರು ಗೆಳತಿಯರು. ಆಗಲೇ ಸಣ್ಣಗೆ ಮಳೆ ಶುರುವಾಗಿತ್ತು. ನಮ್ಮನ್ನು ಇನ್ನೂ ಎತ್ತರದ ಪರ್ವತದ ಮೇಲೆ ಕರೆದುಕೊಂಡು ಹೋಗಿ 3-4 ಸ್ಥಳಗಳನ್ನು ತೋರಿಸಬೇಕಿತ್ತು. ಪಹಲ್‌ಗಾಮ್‌ನಲ್ಲಿ ತುಂಬಾ ಚಳಿಯಿತ್ತು. ಸ್ವಲ್ಪ ದೂರದಲ್ಲಿಯೇ ಹಿಮ ಬಿದ್ದಿತ್ತು. ದೂರದಲ್ಲಂತೂ ಹಿಮಾಚ್ಛಾದಿತ ಪರ್ವತಗಳೇ ಶ್ವೇತಧಾರಿಗಳಾಗಿ ನಿಂತಿದ್ದುವು. ಅವುಗಳ ಮಧ್ಯೆ ಸೂಜಿಪರ್ಣ ಮರಗಳು ಹಸಿರಾಗಿದ್ದವು. ಎರಡೂ ಬಣ್ಣಗಳು ಶಾಂತಿಯ ದ್ಯೋತಕಗಳೇ, ಆದರೆ……. ಮೊದಲು ನಾವು ‘ಆರು’ ಕಣಿವೆ ಎನ್ನುವ ಸ್ಥಳವನ್ನು ನೋಡಿದೆವು. ಮೇಲೆ ಹೇಳಿದ ಚಿತ್ರಗಳೇ ಕಾಣಿಸಿದುವು. ನಾವು ಯಾರೂ ಕಾರಿನಿಂದ ಇಳಿಯಲಿಲ್ಲ. ನಮ್ಮ ಪಕ್ಕದ ರಸ್ತೆ ಬದಿಯಲ್ಲೇ ಹಿಮ ಅಲ್ಲಲ್ಲೇ ಬಿದ್ದಿತ್ತು, ಮುಂದಕ್ಕೆ ಬೇತಾಬ್ ಕಣಿವೆಯನ್ನು ಡ್ರೈವರ್ ತೋರಿಸಿದ. ಅಲ್ಲೊಂದು ಪಾರ್ಕ್, ಬೇತಾಬ್ ಸಿನಿಮಾದ ಚಿತ್ರೀಕರಣ ಆಗಿದ್ದರಿಂದ ಈ ಸ್ಥಳಕ್ಕೆ ಅದೇ ಹೆಸರು ಬಂದಿದೆ. ಇಲ್ಲಿ ಕೂಡ ನಾವು ಇಳಿದು ಮಳೆಯಲ್ಲಿ ನೆನೆಯಲು ತಯಾರಿರಲಿಲ್ಲ. ಇನ್ನೊಂದು ಸ್ಥಳಕ್ಕೆ ಮಾತ್ರ ಹೋಗಬಹುದು ಎಂದು ಹೇಳಿದ ಡ್ರೈವರ್. ನಾವೂ ‘ಹ್ಞೂ’ ಗುಟ್ಟಿದೆವು. ಮಧ್ಯದಲ್ಲಿ ಮೋದಿಯನ್ನು ಬೈಯಲು ಶುರುಮಾಡಿದ. ಆದರೆ ನಾವ್ಯಾರೂ ಪ್ರತಿಕ್ರಿಯಿಸಲಿಲ್ಲ. ಆಗ ಸುಮ್ಮನಾದ. ನಾವು ಹೋಗಿದ್ದು ಚಂದನವಾರಿ. ಇದು ಅಮರನಾಥ್ ಯಾತ್ರೆಯ ಲಾಸ್ಟ್ ಸ್ಟಾಪ್ . ಇಲ್ಲಿಂದ 32 ಕಿ.ಮೀ. ದೂರದಲ್ಲಿ ಅಮರನಾಥ ಗುಹೆ ಇದೆ. ಕಾರನ್ನು ನಿಲ್ಲಿಸುತ್ತೇನೆ ಎಂದು ಪಾರ್ಕ್ ಮಾಡಿದ. ಮಳೆ ಧೋ ಎಂದು ಶುರುವಾಯಿತು. ಹತ್ತಿರದಲ್ಲೇ ಒಂದು ಟಾರ್ಪಾಲ್ ಹಾಕಿದ ಟೀ ಅಂಗಡಿ ಇತ್ತು, ನಮ್ಮ ಪುಣ್ಯ. ಅಲ್ಲಿಗೆ ಹೋಗಿ ನಿಂತು ಟೀ ಕುಡಿದೆವು. ಮೈ ಸ್ವಲ್ಪ ಬೆಚ್ಚಗಾಯಿತು. ಮತ್ತೆ ಮಳೆಯಲ್ಲೇ ವಾಪಸ್ ಪಹಲ್‌ಗಾಮ್‌ಗೆ ಹೊರಟೆವು.


ವಾಪಸ್ಸು ಬಂದಾಗ ಅಂದಾಜು ನಾಲ್ಕು ಗಂಟೆ. ನಮ್ಮ ಊಟ ಪ್ಯಾಕ್ ಆಗಿ ಬಂದಿತ್ತು. ಅಲ್ಲೇ ಒಂದು ಹೋಟೆಲ್‌ನಲ್ಲಿ ಕೂತು ಊಟ ಮಾಡಿದೆವು. ಒಂದು ಭಾತ್ ಮತ್ತು ಮೊಸರನ್ನ ಇರಬೇಕು. ವಾಶ್‌ರೂಂ ಕೂಡ ಇತ್ತು. ಅದಕ್ಕೊಂದು ಕ್ಯೂ. ನನ್ನ ಸರತಿಯೂ ಬಂದಿತು. ಸರಿ, ಎಲ್ಲ ಮುಗಿಸಿ ನಾನು ಮತ್ತು ಪತಿ ಹೋಟೆಲ್‌ನಿಂದ ಹೊರಟೆವು. ಹಾಗೇ ಸುಮ್ಮನೆ ಎಡಗೈ ನೋಡಿದಾಗ ನವರತ್ನಗಳ ಉಂಗುರವೇ ಇರಲಿಲ್ಲ! ತಕ್ಷಣ ಇಬ್ಬರೂ ಕಷ್ಟಪಟ್ಟು ಮತ್ತೆ ಕೊಚ್ಚೆ ಹಾಗೂ ಮಳೆಯಲ್ಲಿ ವಾಪಾಸ್ ಬಂದೆವು. ಬರುತ್ತಾ ಹೋದ ದಾರಿಯನ್ನು ಕಣ್ಣಿಟ್ಟು ಉಂಗುರಕ್ಕಾಗಿ ನೋಡಿದೆವು. ಕಾಣಲಿಲ್ಲ. ಎಲ್ಲಿ ಬಿತ್ತೋ? ನನಗೆ ಬೇಜಾರೇ ಆಗಲಿಲ್ಲ. ಸಿಕ್ಕಿದರೆ ಓಕೆ, ಇಲ್ಲದಿದ್ದಲ್ಲಿ ಇಲ್ಲ ಎಂದುಕೊಂಡೆ. ಈಗ ಮೂವತ್ತೈದು ವರ್ಷಗಳಿಂದ ನನಗೆ ಈ ಮನೋಭಾವ ಬಂದುಬಿಟ್ಟಿದೆ.

ಮುಂದೆ ಹೋಟೆಲೊಳಗೆ ಹೆಜ್ಜೆಯಿಟ್ಟೆವು. ನಾನು ವಾಶ್‌ರೂಂ ತನಕ ಹೋದೆ. ಊಹೂಂ ಉಂಗುರ ಎಲ್ಲಿಯೂ ಇಲ್ಲ. ಈಗ ನನ್ನ ಗೆಳತಿ ಅಲ್ಲಿ ಕ್ಯೂನಲ್ಲಿ ನಿಂತಿದ್ದಳು. ಒಳಗಿದ್ದವರು ಬಂದ ಮೇಲೆ ನೋಡುವ ಎಂದು ಹೇಳಿ ಅವಳೊಟ್ಟಿಗೆ ನಿಂತೆ. ಒಳಗಿದ್ದವರು ಬಂದರು. ನನ್ನ ಗೆಳತಿ ಒಳಗೆ ಕಾಲಿಟ್ಟಳು. ‘ಓ, ನೋಡು ಇಲ್ಲಿ ಬಿದ್ದಿದೆ’ ಎಂದು ಉಂಗುರವನ್ನು ಕೈಗಿತ್ತಳು. ಇದು ಎಷ್ಟು ಆಶ್ಚರ್ಯಕರ. ನನಗೆ ನೂರಕ್ಕೆ ಒಂದು ಭಾಗವೂ ಆಸೆ ಇರಲಿಲ್ಲ. ನನ್ನ ಪತಿಯ ಉಡುಗೊರೆ ಈ ಉಂಗುರ. ಅಂತೂ ಮತ್ತೆ ನನ್ನ ಬೆರಳಲ್ಲಿ ತೂರಿ ಕುಳಿತುಕೊಂಡಿತು. ನನ್ನ ಮೂರು ಪದರದ ಬಟ್ಟೆಗಳಲ್ಲಿ ಎಲ್ಲಿಯೋ ಸಿಕ್ಕಿಕೊಂಡು ಕೆಳಗೆ ಬಿದ್ದಿದೆ. ಯಾರೂ ಅದನ್ನು ನೋಡಿಲ್ಲ, ತೆಗೆದಿಲ್ಲ. ಆಶ್ಚರ್ಯವಲ್ಲವೇ?

ನಾವು ವಾಪಾಸು ಬಂದ ಒಂದು ವಾರದಲ್ಲಿ ಪಹಲ್‌ಗಾಮ್‌ನಲ್ಲಿ ನರಮೇಧವೇ ನಡೆದಿದೆ. ನನ್ನ ಹೃದಯ ರೋಧಿಸುತ್ತಿದೆ. ಕಾಶ್ಮೀರದಲ್ಲಿ ಇದಕ್ಕೆಲ್ಲಾ ಎಂದಿಗೆ ಕೊನೆ?

ನನಗನ್ನಿಸಿತು ಜೀವನ ಮತ್ತುಉಂಗುರ, ಎರಡೂ ಕ್ಷಣ ಭಂಗುರ.

ಡಾ.ಎಸ್. ಸುಧಾ, ಮೈಸೂರು

9 Responses

  1. S.sudha says:

    ಧನ್ಯವಾದಗಳು ಹೇಮಾಮಾಲಾ ಪ್ರಕಟಿಸಿದ್ದಕ್ಕೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ

  2. ಪ್ರವಾಸ ಕಥನ ದಲ್ಲಿ ತಮ್ಮ ದೊಂದು ಅನುಭವ.. ಕಳೆದ ಉಂಗುರ ಸಿಕ್ಕಿದಾಗ ಆದ ಸಂತಸ ಅದರ ಹಿಂದೆ ಇದ್ದಂತಹ ಭಾವನಾತ್ಮಕ ಸಂಬಂಧಿಸಿದ ಎಳೆ.ಸಿಕ್ಕಾಗ ಆದ ನಿರಾಳ ಚೆನ್ನಾಗಿ ಮೂಡುಬಂದಿದೆ..ಮೇಡಂ

  3. ಪದ್ಮಾ ಆನಂದ್ says:

    ಪ್ರವಾಸ ಕಥನ ಆಪ್ತವಾಗಿ ಮೂಡಿ ಬಂದಿದೆ.

  4. Nirmala G V says:

    ಚೆನ್ನಾಗಿ ಬರೆದಿರುವಿ ಸುಧಾ. ಮರೆಯಲಾರದ ನೆನಪುಗಳು ಅಂದರೆ ಹೀಗೇ. ಮತ್ತೊಮ್ಮೆ ಜೊತೆಯಾಗೋಣ. ಪ್ರವಾಸಕ್ಕೆ ಸಾಗೋಣ

    • S.sudha says:

      ಧನ್ಯವಾದಗಳು ನಿರ್ಮಲ. ಗೆಳೆತನಡ ಜೊತೆಗೆ ಪ್ರವಾಸ, ಒಳ್ಳೆ ಐಡಿಯಾ..

  5. ಶಂಕರಿ ಶರ್ಮ says:

    ಪಹಲ್ಗಾಮ್ ಸುತ್ತಾಟ, ಪರಿಮಳದ ಸೇಬು ಹೂಗಳ ವೈಭವ, ಕಳೆದು ಹೋದ ಉಂಗುರ…ಕ್ಷಣ ಭಂಗುರವಾದರೂ ಪುನಃ ತಮ್ಮ ಮಡಿಲಿಗೆ ಬಂದು ಬೆರಳಲ್ಲಿ ಕೂತು ನಕ್ಕ ಘಳಿಗೆ…ಎಲ್ಲವೂ ಆಪ್ತವಾಗಿ ಮೂಡಿಬಂದಿವೆ.

    • S.sudha says:

      ಧನ್ಯವಾದಗಳು ಶಂಕರಿಯವರೇ. ನಿಮ್ಮ ಮಾತುಗಳು ಮತ್ತಷ್ಟು ಬರೆಯುವಂತೆ ಮಾಡುತ್ತವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: