ಇತ್ತೀಚೆಗೆ ನೋಡಿದ ಸಿನಿಮಾ: ಯುದ್ಧಕಾಂಡ ಭಾಗ 2

Share Button

ರಾಮಾಯಣದಲ್ಲಿ ಬರುವ ಯುದ್ಧಕಾಂಡ ಅಧ್ಯಾಯದಲ್ಲಿ ಹಾಗೂ ನಂತರದಲ್ಲಿ ದುಷ್ಟ ರಾವಣನ ಸಂಹಾರ ಹಾಗೂ ಶಿಷ್ಟ ರಕ್ಷಣೆ ಪ್ರಸಂಗಗಳು ಬರುತ್ತವೆ. ಅನೇಕ ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳಲ್ಲಿ ನಾನಾ ರೀತಿಯ ಯುದ್ಧಕಲೆಗಳು ವಿಜೃಂಭಿಸುತ್ತವೆ. ಸಾಮಾಜಿಕ ಹಾಗೂ ಜಾನಪದ ಚಲನಚಿತ್ರಗಳಲ್ಲಿ ಹಿಂದಿನಿಂದ ಕೋಲು ಹೊಡೆದಾಟ, ಕತ್ತಿವರಸೆ, ಕುಸ್ತಿ, ಬಾಕ್ಸಿಂಗ್ ಮುಂತಾದ ವೈವಿಧ್ಯಮಯ ಹೊಡೆದಾಟಗಳಲ್ಲಿ ಶೌರ್ಯ, ಧೈರ್ಯ, ಪರಾಕ್ರಮಗಳು ಮಿಂಚುತ್ತವೆ. ಬಾಂಡ್ ಶೈಲಿಯ ಚಲನಚಿತ್ರಗಳಲ್ಲಿ ಬಂದೂಕು ಗರ್ಜಿಸುತ್ತದೆ. ಆದರೆ ಇತ್ತೀಚಿನ ಕೆಲವು ಚಿತ್ರಗಳಲ್ಲಿ ದೈಹಿಕ ಫೈಟಿಂಗ್ ಇಲ್ಲದೇ, ಮಾತಿನ ಹೊಡೆದಾಟ ಮಿಂಚುತ್ತದೆ. ಬಹಳ ಹಿಂದೆ ಹಿಂದಿಯಲ್ಲಿ ಕಾನೂನು ಎಂಬ ಚಲನಚಿತ್ರದಲ್ಲಿ ಹಾಡು, ನೃತ್ಯಗಳಿಲ್ಲದೇ ಕೇವಲ ಕೋರ್ಟಿನ ವಾದ, ವಿವಾದಗಳಲ್ಲಿ ಕಥೆ ಮುಗಿದಿತ್ತು. ಭಾವನಾತ್ಮಕ ಕಥೆ,ನವರಸಗಳಲ್ಲಿರುವ ಶೃಂಗಾರ, ಹಾಸ್ಯ, ಕರುಣ, ಭಯಾನಕ, ರೌದ್ರ, ಭೀಭತ್ಸ, ಶಾಂತ ಇವುಗಳಲ್ಲಿ ಯಾವುದಾದರೂ ಒಂದು ರಸದ ಪ್ರತಿಪಾದನೆಯಿಂದ ಅಥವಾ ಇವುಗಳಲ್ಲಿ ಕೆಲವುಗಳ ಮಿಶ್ರಣದಿಂದ ಚಲನಚಿತ್ರಗಳ ಕಥೆ, ಸಂಭಾಷಣೆ, ಅಭಿನಯ, ವೈವಿಧ್ಯತೆ ತಾಳುತ್ತಿತ್ತು.

ಆದರೆ ಕೇವಲ ಕೋರ್ಟ್ ದೃಶ್ಯಗಳಿರುವ ಅಥವಾ ಹೆಚ್ಚಿನ ದೃಶ್ಯಗಳಿರುವ ಅನೇಕ ಚಲನಚಿತ್ರಗಳಿವೆ. ಇಂತ ಕೆಲವು ಚಿತ್ರಗಳನ್ನು ನೋಡುತ್ತಿರುವಾಗಿ ನನ್ನಂತ ಕೆಲವು ಪ್ರೇಕ್ಷಕರಿಗೆ ಅಲ್ಲಿಯ ವಾದ, ವಿವಾದಗಳ ಮಾತಿನ ಹೊಡೆದಾಟ, ನನ್ನಂಥ ಅನೇಕರಿಗೆ ಕುತೂಹಲ-ಆಸಕ್ತಿ- ಮುಂದೇನು? ಎಂಬ ಪ್ರಶ್ನೆ ಮೂಡಿಸುತ್ತಿರುತ್ತದೆ.

ಈ ಹಿಂದೆ 1989ರಲ್ಲಿ ರವಿಚಂದ್ರನ್ ನಾಯಕತ್ವದ ಯುದ್ದಕಾಂಡ ಚಲನಚಿತ್ರ ಬಂದಿತ್ತು. ಈಗ ಕೃಷ್ಣ ಅಜಯ್‌ರಾವ್ ನಾಯಕತ್ವದ ”ಯುದ್ದಕಾಂಡ ಚಾಪ್ಟರ್ 2” ಬಂದಿದೆ. ಇದರಲ್ಲಿ ಭರತ್ ಹನುಮಂತನ ಪಾತ್ರ ವಹಿಸಿ ಈ ಚಿತ್ರ ನಿರ್ಮಿಸಿದ್ದಾರೆ ಅಜಯ್ ರಾವ್. ಚಿತ್ರದ ಆರಂಭದಲ್ಲಿ ನಾಯಕ ಕಾನೂನು ಪದವಿ ಹೊಂದಿದ್ದರೂ ಕೆಲಸವಿಲ್ಲದೇ ಹೋಟೆಲ್‌ನಲ್ಲಿ ಕ್ಯಾಶಿಯರ್ ಆಗಿರುತ್ತಾನೆ. ಪದವಿ ಪಡೆದ ನಂತರ ಅನೇಕ ಲಾಯರ್‌ಗಳ ಬಳಿ ಜ್ಯೂನಿಯರ್ ಆಗಿ ಸೇರಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಮುಂದೆ ಸಿಕ್ಕ ಒಂದು ಲಾಯರ್ ಕಛೇರಿಯಲ್ಲಿ ಸಂಬಳವಿಲ್ಲದೇ ದುಡಿಯುವ, ಆದರೆ ಕೇಸ್ ಗೆದ್ದಾಗ ಸಿಕ್ಕ ಹಣದ ಭಾಗಶಃ ಹಣಕ್ಕಾಗಿ ಕೆಲಸ ಮಾಡಲು ಒಪ್ಪುತ್ತಾನೆ. ಆ ಕಂಪನಿ ಕೊಟ್ಟ ಪುಡಿ ಕೇಸ್‌ಗಳನ್ನು ಗೆಲ್ಲಲು ಈತ ತಯಾರು ಮಾಡಿದ ಪಾಯಿಂಟ್‌ಗಳನ್ನು ಇನ್ನೊಬ್ಬರು ವಾದಿಸುವಂತಹ ಸನ್ನಿವೇಶ. ಸಂಬಳವಿಲ್ಲದ ಯುವ ವಕೀಲನಾಗಿ ನಾಯಕ ಪಡುವ ಪಾಡು ಹಾಸ್ಯ ಸೃಷ್ಟಿಸುತ್ತದೆ. ಈತ ಕೇಳಿದಂತೆ ಯಾವುದೇ ಮುಖ್ಯ ಕೇಸನ್ನು ಈತನಿಗೆ ಹಿರಿಯ ವಕೀಲ ಕೊಡುವುದಿಲ್ಲ.

ಈ ಸಂದರ್ಭದಲ್ಲಿ ಪೋಕ್ಸೋ ಕಾಯಿದೆಯ ಹಿನ್ನೆಲೆಯ ಒಂದು ಕೇಸ್ ಬರುತ್ತದೆ. ಶಾಸಕನ ತಮ್ಮ 8-9 ವರ್ಷದ ಬಾಲೆಯ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ಬಗೆಗಿನ ಕೇಸ್. ಆದರೆ ಅಧಿಕಾರಶಾಹಿ ವರ್ತುಲದಲ್ಲಿ ಶಾಸಕನ ಚೇಲಾಗಳು, ಪೋಲೀಸರು, ಮಗುವಿಗಾದ ನೋವು, ಅನ್ಯಾಯದ ಬಗ್ಗೆ ಚಿಂತಿಸದೇ, ಅತ್ಯಾಚಾರಿಗೆ ಶಿಕ್ಷೆಯಾಗದಂತೆ ಪ್ರತಿಬಾರಿ ಯಾವುದೋ ನೆವದಿಂದ ಹಿಯರಿಂಗ್‌ನ್ನು ವಾಯಿದೆ ತೆಗೆದುಕೊಂಡು ಮುಂದು ಮುಂದಿನ ದಿನಾಂಕಕ್ಕೆ ಹಾಕುತ್ತಾ ಬಂದು 2 ವರ್ಷ ಕಳೆಯುತ್ತದೆ. ಶಾರೀರಿಕವಾಗಿ ಮತ್ತೂ ಮಾನಸಿಕವಾಗಿ ಆಘಾತಕ್ಕೊಳಗಾದ ಮಗುವಿನ ಚಿಕಿತ್ಸೆ ಆಸ್ಪತ್ರೆಯಲ್ಲಿ ನಡೆದಿರುತ್ತದೆ. ಪತಿಯನ್ನು ಕಳೆದುಕೊಂಡು ಏಕಾಂಗಿಯಾಗಿರುವ ಈ ತಾಯಿಗಾದ ಸಂಕಟ, ಆಘಾತ ವರ್ಣನಾತೀತ. ಪ್ರತಿ ಸಂದರ್ಭದಲ್ಲೂ, ಅತ್ಯಾಚಾರಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದಾಗ ಆತ ಈ ತಾಯಿಯನ್ನು ನೋಡಿ ವ್ಯಂಗ್ಯವಾಗಿ ನಗುತ್ತಿರುತ್ತಾನೆ. 2 ವರ್ಷ ಸಹನೆಯಿಂದಿದ್ದ ಈ ತಾಯಿ ಕೋರ್ಟಿನ ಆವರಣದಲ್ಲೇ ಅತ್ಯಾಚಾರಿಯನ್ನು ಪೋಲೀಸರ ಜೇಬಿನಿಂದ ಸೆಳೆದುಕೊಂಡ ಪಿಸ್ತೂಲಿನಿಂದ ಗುಂಡು ಹೊಡೆದು ಕೊಲ್ಲುತ್ತಾಳೆ ಹಾಗೂ ಪೋಲೀಸರಿಂದ ಬಂಧಿಸಲ್ಪಡುತ್ತಾಳೆ. ಆರಂಭದಲ್ಲಿಯ ಲಘು ಹಾಸ್ಯದ ಕಥೆಗೆ ಈಗ ತೀವ್ರತೆ ಬರುತ್ತದೆ. ಯಾವ ಹಿರಿಯ ವಕೀಲರೂ ಈ ಕೇಸ್ ಹಿಡಿಯದಿದ್ದಾಗ ಈ ಹೊಸ ವಕೀಲ ತನ್ನ ಮೊದಲನೇ ದೊಡ್ಡ ಕೇಸಾಗಿ ತೆಗೆದುಕೊಳ್ಳಲು ನಿರ್ಧರಿಸುತ್ತಾನೆ. ಮುಂದೇನು ಎಂಬುದರ ಬಗ್ಗೆ ಈ ಸಿನಿಮಾ ನೋಡಿರದ ಕನ್ನಡ ಪ್ರೇಕ್ಷಕರು ಚಿತ್ರ ನೋಡಿ ತಿಳಿಯಬೇಕೆಂದು ನನ್ನ ವಿನಂತಿ.

ಕೋರ್ಟಿನ ದೃಶ್ಯದ ವಕೀಲರ ವಾದಗಳಲ್ಲಿ ಭರತ್‌ನನ್ನು ಎದುರಿಸಿದವರು ಗಂಟೆಗೆ ಲಕ್ಷಾವಧಿ ರೂಪಾಯಿ ಪಡೆಯುವ ಪ್ರಸಿದ್ಧ ಲಾಯರ್ ರಾಬರ್ಟ್ ಡಿಸೋಜಾ (ಪ್ರಕಾಶ ಬೆಳವಾಡಿ). ಇವರಿಬ್ಬರ ಮಾತಿನ ವಾದದ ಚಕಮುಕಿ ಗಮನಿಸುವ ತಾಯಿ, (ಅರ್ಚನಾ ಜೋಯಿಸ್) ವಾದಗಳನ್ನು ಗಮನಿಸುವ ಜಡ್ಜ್ (ಟಿ.ಎಸ್.ನಾಗಾಭರಣ)ಇವುಗಳನ್ನು ಗಮನಿಸಲು ಟಾಕೀಸಿನಲ್ಲೇ ಈ ಚಿತ್ರ ನೋಡಿ. ಕೆ.ಬಿ ಪ್ರವೀಣ್ ಅವರ ಸಂಗೀತ ಸಂಯೋಜನೆ ಹಾಗೂ ಕಾರ್ತಿಕ್‌ಶರ್ಮಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪವನ್ ಭಟ್ ಈ ಚಿತ್ರದ ನಿರ್ದೇಶಕರು.

-ಎನ್.ವ್ಹಿ.ರಮೇಶ್, ಮೈಸೂರು

4 Responses

  1. ತಾವು ವೀಕ್ಷಿಸಿದ ಸಿನಿಮಾದ ಅವಲೋಕನ.. ಆ ಚಿತ್ರ ವನ್ನು ನಾವು ನೋಡಬೇಕು ಎಂದು ಪ್ರೇರೇಪಿಸುವಂತಿದೆ

  2. ಪದ್ಮಾ ಆನಂದ್ says:

    ಸಿನಿಮಾವಲೋಕನ ಅಚ್ಚುಕಟ್ಟಾಗಿ ಮೂಡಿ ಬಂದಿದೆ.

  3. ನಯನ ಬಜಕೂಡ್ಲು says:

    Nice

  4. ಶಂಕರಿ ಶರ್ಮ says:

    ಸಿನಿಮಾದ ಸಿಂಹಾವಲೋಕನ ಚೆನ್ನಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: