ಕಾವ್ಯ ಭಾಗವತ 42: ಸಮುದ್ರ ಮಥನ –4

42.ಅಷ್ಟಮ ಸ್ಕಂದ – ಅಧ್ಯಾಯ -2
ಸಮುದ್ರ ಮಥನ – 4
ರುದ್ರ ದೇವನು
ಕಾಲಕೂಟ ವಿಷವ
ಪಾನಮಾಡಿದ ಪರ್ಯಂತ
ನಿಶ್ಚಿಂತ ದೈತ್ಯ, ದೇವತೆಗಳು
ಮಥನ ಕಾರ್ಯ ಮುಂದುವರಿಸೆ
ಕಾಮಧೇನುವಿನ ಉದ್ಭವ
ಅದ ಋಷಿಮುನಿಗಳ
ಪಾಲಾಗಿಸಿದ ದೇವರಾಜ
ತದನಂತರ ಉದ್ಭವಿಸಿದ
ಉಚೈಶ್ರವ, ಶುಭವರ್ಣದಶ್ವ
ಬಲಿಯ ಪಾಲು
ಬಿಳಿಯಾನೆ ಐರಾವತ
ಇಂದ್ರನ ಪಾಲು
ಅಷ್ಟ ದಿಗ್ಗಜಗಳೂ
ಅಭ್ರಮವೆಂಬ ಎಂಟು
ಹೆಣ್ಣಾನೆಗಳೂ
ಉದ್ಭವಿಸಿದವು
ಕೌಸ್ತುಭರತ್ನ ಶ್ರೀಹರಿಯ
ಕಂಠಮಾಲಿಕೆಯ
ಪದಕ ಮಣಿಯಾಯ್ತು
ಪಾರಿಜಾತ ವೃಕ್ಷವೂ
ದೇವತೆಗಳ ಪಾಲು
ಸಕ್ಷಾತ್ ಲಕ್ಷ್ಮೀದೇವಿಯೂ
ಜಲಮಧ್ಯದಿಂ
ಮೇಲೆದ್ದು ಬಂದು
ದೇವೇಂದ್ರನ ದಿವ್ಯ ಮಣಿಪೀಠ,
ಮಹಾನದಿಗಳ ಪೂರ್ಣ ಕುಂಭಕಗಳು
ಭೂದೇವಿಯ ಮಂಗಳ ದ್ರವ್ಯಗಳು
ಗೋವುಗಳ ಪಂಚಗವ್ಯ
ಗಂಧರ್ವ ಅಪ್ಸರೆಯರ ಗಾನ ನೃತ್ಯ ಸೇವೆ
ವರುಣನ ದಿವ್ಯ ವೈಜಯಂತಿ ಮಾಲೆ
ಸರಸ್ವತಿಯ ದಿವ್ಯ ಹಾರ
ಬ್ರಹ್ಮದೇವನ ಕಮಲ ಪುಷ್ಪ
ಎಲ್ಲವ ಸ್ವೀಕರಿಸಿ
ನಂತರದಿ ಕೈಯಲ್ಲೊಂದು
ನೈದಿಲೆಯ ಪುಷ್ಪಹಾರವ ಪಿಡಿದು
ಅಲ್ಲಿ ನೆಲೆಸಿರ್ಪ
ದೇವ ದಾನವ ಯಕ್ಷ ಗಂಧರ್ವ
ಪರಿವಾರದಲಿ ಹರಿಯ
ಹುಡುಕಿದಂತೆ ಅಭಿನಯಿಸಿ
ನಂತರದಿಂ ಅವನ ಬಳಿಗೈದು
ಕೊರಳಿಗೆ ಪುಷ್ಪ ಹಾರವಂ ಸಮರ್ಪಿಸಿ
ಅವನ ವಕ್ಷ ಸ್ಥಳದಿ ಶಾಶ್ವತ
ನೆಲೆಸುವ ಇಚ್ಚೆಯಲಿ
ಹರಿಯ ಅನುಗ್ರಹದ ನಿರೀಕ್ಷೆಯಲಿ
ನಿಂತ ಮನದನ್ನೆಯ
ಇಚ್ಛೆಯನರಿತ
ಹರಿಯು ಲಕ್ಷ್ಮಿಯ
ತನ್ನ ವಕ್ಷಸ್ಥಳದಲಿ
ಸ್ವೀಕರಿಸಿದ ಕ್ಷಣ
ಜಗಕೆಲ್ಲ ಸಂಭ್ರಮದ ಕ್ಷಣ
ಋಷಿಮುನಿಗಳ ವೇದೋಕ್ತ ದಿವ್ಯ ಸ್ತೋತ್ರ
ಗಂಧರ್ವರ ದಿವ್ಯ ಗಾನ
ಸಕಲ ದೇವಗಣಗಳು
ವೀರ್ಯತೇಜಸ್ಸುಗಳಿಂದ
ಕಳೆಗೊಂಡ ಪರಿ
ಸಕಲ ಸಂಭ್ರಮಕೆ ಸಾಕ್ಷಿ
ಸಮುದ್ರ ಮಥನ ಕಾರ್ಯ
ಮುಂದಾಗಿ
ಶೀಲತ ಕಿರಣದಿಂ
ಜಗವ ಬೆಳಗಿಪ
ಚಂದ್ರನುದ್ಭವ
ನಂತರದಿ ಸುರೆಯ ಅಭಿಮಾನಿ
ವಾರುಣಿಯ ಉದ್ಭವ
ಅವಳು ಅಸುರರ ಪಾಲು
ನಂತರದಿ ಆಜಾನಬಾಹು ಧನ್ವಂತರಿ
ದೇವದಾನವರ ಬಹುಕಾಲದ ಪರಿಶ್ರಮ
ಅಪೇಕ್ಷೆಯ ಕಾರ್ಯದ ಫಲರೂಪಿ
ಅಮೃತ ಕುಂಭವ ಧರಿಸಿ
ಸಮುದ್ರ ಮಧ್ಯದಿಂ ಉದ್ಭವಿಸಿ
ಸಕಲರ ಪರಮಾನಂದಕೆ ಸಾಕ್ಷಿಯಾದನು
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42530
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಸಮುದ್ರ ಮಥನದ ಮುಂದುವರೆದ ಭಾಗ ಓದಿಸಿಕೊಂಡುಹೋಯಿತು.. ಕಾವ್ಯ ಭಾಗವತ ನನಗೆ ಭಾಗವತವನ್ನು ಓದುವಂತೆ ಪ್ರೇರೇಪಿಸುವಂತಿದೆ…ಅದಕ್ಕೆ ನಿಮಗೆ ನಮನಗಳು ಸಾರ್
ಸಮುದ್ರಮಥನದಿಂದ ಉದ್ಭವವಾದ ವಸ್ತುಗಳನ್ನು ಎಲ್ಲರೂ ಹಂಚಿಕೊಂಡ ಪರಿ ಕೌತುಕತೆಯಿಂದ ಕೂಡಿತ್ತು.
ಚೆನ್ನಾಗಿದೆ
ಸಮುದ್ರ ಮಥನದಲ್ಲಿ ಉದ್ಭವಿಸಿದ ಸುವಸ್ತುಗಳು ಮತ್ತು ಅವುಗಳು ಯಾರ ಪಾಲಾದವು ಎಂಬುದನ್ನು ತಿಳಿಯಪಡಿಸಿದ ಕಾವ್ಯ ಭಾಗವತದ ಭಾಗ ಬಹಳ ಕುತೂಹಲಪೂರ್ಣವಾಗಿದೆ….ಧನ್ಯವಾದಗಳು ಸರ್.