ಪುಸ್ತಕಾವಲೋಕನ ‘ಉತ್ತರಕಾಂಡ’ : ಲೇಖಕರು: ಎಸ್.ಎಲ್.ಭೈರಪ್ಪ.
ಡಾ.ಎಸ್.ಎಲ್.ಭೈರಪ್ಪನವರು ನಮ್ಮ ಕಾಲದ, ನಮ್ಮೊಡನಿರುವ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು. ಅವರು ಭಾಷಾಶಾಸ್ತ್ರ ವಿದ್ವಾಂಸರಾಗಿ, ಸಂಸ್ಕೃತಿಯ ಚಿಂತಕರಾಗಿ, ವಿಶಿಷ್ಟ ಸ್ಥಾನ ಗಳಿಸಿದವರು. ಕನ್ನಡದಲ್ಲಿ ಇವರಿಂದ ರಚನೆಯಾದ ಇಪ್ಪತ್ತೈದು ಕಾದಂಬರಿಗಳು ಓದುಗರ ಅಪಾರ ಒತ್ತಾಯದ ಮೇರೆಗೆ ಹಲವಾರು ಮರು ಮುದ್ರಣವಾಗಿರುವುದು ವಿಶೇಷ. ಅಷ್ಟೇ ಅಲ್ಲದೆ ಕೆಲವು ಕಾದಂಬರಿಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಇಂತಹ ಜನಪ್ರಿಯತೆ ಗಳಿಸಿಕೊಂಡ ಅಪರೂಪದ ಕನ್ನಡದ ಬರಹಗಾರರಿವರು ಎಂಬುದು ಹೆಮ್ಮೆಯ ವಿಷಯ. ಇವರ ಕಾದಂಬರಿಗಳಲ್ಲಿ ಪಾತ್ರಗಳು ತಮ್ಮ ಸಂಭಾಷಣೆಗಳ ಮೂಲಕ ಅತ್ಯಂತ ಗಹನವಾದ ವಿಷಯಗಳ ಬಗ್ಗೆ ಚರ್ಚೆ, ತರ್ಕ, ವಿಶ್ಲೇಷಣೆಗಳನ್ನು ಹುಟ್ಟುಹಾಕಿ ಓದುಗರನ್ನು ಕುತೂಹಲದಿಂದ ಹಿಡಿದಿರುವ ಶಕ್ತಿಹೊಂದಿರುತ್ತವೆ.
ವಾಲ್ಮೀಕಿ ಮಹರ್ಷಿಗಳು ಸಂಸ್ಕೃತದಲ್ಲಿ ಮೊಟ್ಟಮೊದಲಿಗೆ ರಚಿಸಿದರು ಎನ್ನಲಾದ ‘ರಾಮಾಯಣ’ ವನ್ನು ಆಧರಿಸಿ ಅಥವಾ ಅದರಿಂದ ಸ್ಫೂರ್ತಿಪಡೆದು ಜಗತ್ತಿನಲ್ಲಿ ರಚನೆಯಾಗಿರುವ ನೂರಾರು ರಾಮಾಯಣದ ಆವೃತ್ತಿಗಳು ಜನಜನಿತವಾಗಿವೆ. ಡಾ.ಎಸ್.ಎಲ್,ಭೈರಪ್ಪನವರು ವಾಲ್ಮೀಕಿ ರಾಮಾಯಣವನ್ನೇ ಆಧರಿಸಿ ತಮ್ಮದೇ ಆದ ವಿಶೇಷ ದೃಷ್ಟಿಕೋನದಿಂದ ಹೇಳ ಬಯಸಿರುವ ‘ಉತ್ತರಕಾಂಡ’ ಕಥೆಯು ಇಂತಹ ಇತ್ತೀಚಿನ ಕೃತಿ. ಇದಕ್ಕಾಗಿ ಅವರು ಅನುಸರಿಸಿರುವ ತಂತ್ರ ಶ್ರೀರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಸೀತಾದೇವಿ ತನ್ನ ಜೀವನವನ್ನು ಪುನರಾವಲೋಕನ ಮಾಡುತ್ತಾ ತನ್ನ ನೆನಪಿನ ಉಗ್ರಾಣದಿಂದ ರಾಮಾಯಣದ ಘಟನೆಗಳನ್ನು ಮೆಲುಕುಹಾಕುವಂತಹುದು. ‘ಉತ್ತರಕಾಂಡ’ ಮೂಲ ರಾಮಾಯಣ ಗ್ರಂಥದಲ್ಲಿ ಶ್ರೀರಾಮನು ಲೋಕಾಪವಾದಕ್ಕೆ ಹೆದರಿ ಗರ್ಭಿಣಿಯಾಗಿದ್ದ ಸೀತಾದೇವಿಯನ್ನು ಪರಿತ್ಯಾಗಮಾಡಿ ಅರಣ್ಯಕ್ಕೆ ಕಳುಹಿಸಿದ ನಂತರದ ಕಥೆಯನ್ನು ನಮಗೆ ಹೇಳುತ್ತದೆ. ಆದರೆ ಭೈರಪ್ಪನವರ ‘ಉತ್ತರಕಾಂಡ’ದ ರಾಮಾಯಣ ಕಥೆ ಪ್ರಾರಂಭವಾಗುವುದೇ ಅಲ್ಲಿಂದ.
ರಾಮಾಯಣದ ಕಥಾವಳಿ ಎಲ್ಲ ಓದುಗರಿಗೂ ಸಾಮಾನ್ಯವಾಗಿ ತಿಳಿದಿರುವಂತಹುದೇ. ಅದನ್ನು ಸೀತೆಯ ಬಾಯಿಂದ ಇಲ್ಲಿ ಹೇಳಿಸಲ್ಪಟ್ಟಿದೆ. ಅವಳ ವಿವಾಹಕ್ಕೆ ಮೊದಲಿನ ಘಟನೆಗಳನ್ನು, ಅಂದರೆ ದಶರಥನಿಗೆ ಪುತ್ರರ ಜನನ ಮುಂತಾದುವನ್ನು ಆಕೆ ಬೇರೆಯವರಿಂದ ಕೇಳಿ ತಿಳಿದುಕೊಂಡಂತೆ, ನಂತರದ ಘಟನೆಗಳನ್ನು ಪ್ರತ್ಯಕ್ಷದರ್ಶಿಯಾಗಿ ಕಂಡಂತೆ, ರಾಮನು ಲಂಕೆಗೆ ಬಂದು ರಾವಣನನ್ನು ಕೊಂದು ಜಯಗಳಿಸಿದ್ದನ್ನು ಹನುಮಂತ, ಮತ್ತು ವಿಭೀಷಣನ ಹೆಂಡತಿ ‘ಸರಮೆ’ಯಿಂದ ತಿಳಿದುಕೊಂಡ ಹಾಗೆ, ಅವಳಿಲ್ಲದಾಗ ಅಯೋಧ್ಯೆಯಲ್ಲಿನ ಘಟನೆಗಳನ್ನು ತನ್ನ ಸಖಿ ಸುಕೇಶಿ ಮತ್ತು ಊರ್ಮಿಳೆಯಿಂದ ಕೇಳಿದಂತೆ ಅನಾವರಣಗೊಳಿಸುತ್ತಾ ಹೋಗುತ್ತಾಳೆ.
ನಾವು ಸಾಮಾನ್ಯವಾಗಿ ಓದಿ ಅಥವಾ ಕೇಳಿದ ರಾಮಾಯಣದಲ್ಲಿ ರಾಮ ಲಕ್ಷ್ಮಣರು ದೈವಾಂಶ ಸಂಭೂತರಾಗಿದ್ದು ವಿಷ್ಣುವಿನ ಅವತಾರವಾಗಿ ಭೂಮಿಯಲ್ಲಿ ಜನ್ಮತಾಳಿ ಶಾಪವಿಮೋಚನಾರ್ಥವಾಗಿ ರಾವಣ, ಕುಂಭಕರ್ಣರನ್ನು ಸಂಹಾರಮಾಡಿ ದುಷ್ಟಶಿಕ್ಷಣ, ಶಿಷ್ಟರಕ್ಷಣೆಯ ಕರ್ತವ್ಯವನ್ನು ನೆರವೇರಿಸಿ ತಮ್ಮ ಅವತಾರವನ್ನು ಸಮಾಪ್ತಿಗೊಳಿಸಿ ವೈಕುಂಠಕ್ಕೆ ಹಿಂದಿರುಗುತ್ತಾರೆ ಎಂಬುದು. ಈ ಕಾದಂಬರಿಯಲ್ಲಿ ಪಾತ್ರಗಳು ದೈವೀಶಕ್ತಿ ಹೊಂದಿದವರೇನೂ ಅಲ್ಲ. ಶ್ರೀರಾಮ ಲಕ್ಷ್ಮಣರು ಮಹಾವೀರರು. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅರಣ್ಯದಲ್ಲೇ ಬಹುಕಾಲ ವಾಸಮಾಡುತ್ತಾರೆ. ಶ್ರೀರಾಮನಿಗೆ ಧರ್ಮದ ಪ್ರತಿರೂಪವಾಗಿ ಕಾಣಿಸಿಕೊಂಡು, ಅದರ ಚಾಚೂತಪ್ಪದ ಆಚರಣೆಯೇ ತನ್ನ ಆದ್ಯ ಕರ್ತವ್ಯವೆಂಬಂತೆ ನಡೆದುಕೊಂಡು ಆದರ್ಶ ಪುರುಷನಾಗುವ ಹಂಬಲವಿದೆ. ತನ್ನ ಕಟ್ಟುನಿಟ್ಟಾದ ಆಚರಣೆಯ ಭರದಲ್ಲಿ ಆತ ತನ್ನ ತೀರ್ಮಾನಗಳಿಗೆ ಮಾತ್ರ ಬದ್ಧನಾಗಿದ್ದುಕೊಂಡು ಅನ್ಯರ ಭಾವನೆ, ಅಭಿಪ್ರಾಯಗಳಿಗೆ ಯಾವುದೇ ಮನ್ನಣೆಯನ್ನು ಕೊಡನು. ಇದರಿಂದ ಹಲವಾರು ಸಂದರ್ಭಗಳಲ್ಲಿ ಆತನ ಸಹಚರರ ಮನಸ್ಸುಗಳಿಗೆ ನೋವುಂಟಾದರೂ ಗಮನಿಸುವುದಿಲ್ಲ. ಇಂತಹ ಅಂಶಗಳನ್ನು ಇಲ್ಲಿ ಸೀತೆಯು ನಿರ್ಭಿಡೆಯಿಂದ ದಾಖಲಿಸುತ್ತಾಳೆ. ಇದೇ ‘ಉತ್ತರಕಾಂಡ’ದ ವಿಶೇಷತೆ. ಇವುಗಳನ್ನು ಮಂಡಿಸುವಾಗ ತರ್ಕಬದ್ಧವಾಗಿ ಓದುಗರೂ ದನಿಗೂಡಿಸಿ ಸರಿಯೆನ್ನಿಸುವಂತಹ ಮಾತುಗಳಿವೆ.
ಶ್ರೀರಾಮ ಲಕ್ಷ್ಮಣಣರು ವಿಶ್ವಾಮಿತ್ರ ಮಹರ್ಷಿಗಳ ಆಶ್ರಮದಿಂದ ಹೊರಟು ಅವರೊಡನೆ ಮಿಥಿಲೆಗೆ ಬರುತ್ತಿದ್ದಾರೆ ಎಂಬ ಸುದ್ಧಿ ಸೀತೆಗೆ ತಿಳಿಯುತ್ತದೆ. ಅಷ್ಟುಹೊತ್ತಿಗಾಗಲೇ ರಾಮ ಲಕ್ಷ್ಮಣರು ಬಲಶಾಲಿ ರಾಕ್ಷಸರನೇಕರನ್ನು ಕೊಂದ ಪರಾಕ್ರಮಿಗಳೆಂದು ಗೊತ್ತಾಗಿದ್ದು ಅವರನ್ನು ನೋಡುವ ಕುತೂಹಲ ಉಂಟಾಗಿರುತ್ತದೆ. ಶ್ರೀರಾಮನನ್ನು ಕಂಡಾಗ ಅವನ ಸುಂದರ ರೂಪಕ್ಕೆ ಮರುಳಾಗಿ ಅವನೇ ಜನಕರಾಜನು ಒಡ್ಡಿದ ಪಂಥಾಹ್ವಾನದಲ್ಲಿ ಜಯಶಾಲಿಯಾಗಲಿ ಎಂದು ಬಯಸುತ್ತಾಳೆ. ಅವಳ ಆತುರ ಎಷ್ಟಿತ್ತೆಂದರೆ ಶಿವನನ್ನೇ ಪ್ರಾರ್ಥಿಸಿ ಶ್ರೀರಾಮನು ಪ್ರಯತ್ನಿಸುವಾಗ ಧನುಸ್ಸು ಹಗುರವಾಗಲಿ, ಸುಲಭವಾಗಿ ಅವನ ಕೈವಶವಾಗಲಿ ಎಂದು ಕೋರುತ್ತಾಳೆ. ಅವನನ್ನೇ ವರಿಸಲು ಮಾನಸಿಕವಾಗಿ ಸಿದ್ಧವಾಗಿ ತುದಿಗಾಲಲ್ಲಿ ನಿಂತಿರುತ್ತಾಳೆ. ಸುಂದರಿ ಸೀತಾದೇವಿಯ ಯೌವ್ವನದ ಈ ಬಯಕೆ ಸಹಜವಾಗಿಯೇ ಇದೆ. ಸ್ಪರ್ಧೆ ಮುಗಿದಾಗ ಸುದ್ಧಿ ತಿಳಿದು ಆಗಮಿಸಿದ ದಶರಥನು ಮೊದಲು ವಿವಾಹಕ್ಕೆ ಸಮ್ಮತಿ ಸೂಚಿಸಿದವನು ನಂತರ ಸೀತೆಯು ಜನಕನ ಸಾಕುಮಗಳು ಎಂದು ತಿಳಿದುಬಂದಮೇಲೆ ಅವಳ ಪೂರ್ವಾಪರಗಳ ಬಗ್ಗೆ, ಹುಟ್ಟಿನ ಬಗ್ಗೆ ಅಪಸ್ವರ ಎತ್ತುತ್ತಾನೆ. ಆಗ ಕಿರಿವಯಸ್ಸಿನ ರಾಮನೇ ತಂದೆಗೆ ಧರ್ಮಸೂಕ್ಷಗಳ ಬಗ್ಗೆ ತಿಳಿಸಿ ಸಮಾಧಾನ ಪಡಿಸಿದ್ದನ್ನು ಕಂಡು ಸೀತೆಗೆ ರಾಮನ ಬಗ್ಗೆ ಅಭಿಮಾನ ಇನ್ನೂ ಹೆಚ್ಚಾಗುತ್ತದೆ.
ನವದಂಪತಿಗಳು ಅಯೋಧ್ಯೆಯನ್ನು ತಲುಪಿದ ನಂತರ ಅಲ್ಪಕಾಲದಲ್ಲೇ ರಾಜ್ಯದ ಯುವರಾಣಿಯಾಗಿ ಮೆರೆಯುವ ಆಕೆಯ ಬಯಕೆಗೆ ತಣ್ಣೀರೆರೆಚುವಂತಹ ಘಟನೆ ನಡೆಯುತ್ತದೆ. ಇದರ ವರ್ಣನೆಯನ್ನು ಭೈರಪ್ಪನವರು ಬೇರೆ ರೀತಿಯಲ್ಲಿ ಮಾಡಿದ್ದಾರೆ. ಇಬ್ಬರು ರಾಣಿಯರನ್ನು ವಿವಾಹವಾಗಿ ಬಹುಕಾಲವಾದರೂ ಮಕ್ಕಳಾಗಲಿಲ್ಲವೆಂಬ ಕಾರಣಕ್ಕಾಗಿ ವಯಸ್ಸಾದ ದಶರಥ ಮಹಾರಾಜನು ಕೇಕಯದೇಶದ ಕಿರಿಯ ವಯಸ್ಸಿನ ರಾಜಕುಮಾರಿ ಕೈಕೇಯಿಯನ್ನು ವರಿಸಿರುತ್ತಾನೆ. ವಿವಾಹವಾಗುವಾಗಲೇ ಆಕೆಗೆ ವಾಗ್ದಾನ ಮಾಡಿದಂತೆ ಆಕೆಯ ಮಗ ಭರತನನ್ನೇ ರಾಜ್ಯಕ್ಕೆ ಯುವರಾಜನನ್ನಾಗಿ ಮಾಡಲು ಬದ್ಧನಾಗಿರುತ್ತಾನೆ. ಕೈಕೇಯಿಯ ಶೃಂಗಾರಕೇಳಿಗೆ ಮರುಳಾಗಿ ರಾಜನು ಸಂಪೂರ್ಣವಾಗಿ ಅವಳ ಕೈವಶನಾಗಿರುತ್ತಾನೆ. ಹಿರಿಯ ಮಗ ಶ್ರೀರಾಮನನ್ನು ಹದಿನಾಲ್ಕು ವರ್ಷಗಳ ಕಾಲ ವನವಾಸಕ್ಕಟ್ಟಿ ಭರತನಿಗೆ ಪಟ್ಟಕಟ್ಟಲು ಆಕೆ ಒತ್ತಡಹಾಕಿದಾಗ ದಶರಥನ ದೈನ್ಯಾವಸ್ಥೆ, ಮತ್ತು ಕೈಕೇಯಿಯ ಅಟ್ಟಹಾಸ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಪಿತೃವಾಕ್ಯ ಪರಿಪಾಲನೆಯನ್ನು ಆದ್ಯ ಕರ್ತವ್ಯವೆಂಬಂತೆ ಪರಿಗಣಿಸಿ ಶ್ರೀರಾಮ ಅರಣ್ಯಕ್ಕೆ ಹೊರಡಲು ಸಿದ್ಧನಾಗುತ್ತಾನೆ. ಲಕ್ಷ್ಮಣನೂ ಅಣ್ಣನೊಡನೆ ಹೊರಡಲುದ್ಯುಕ್ತನಾಗುತ್ತಾನೆ. ಪತಿಯೊಡನೆ ಅರಣ್ಯವಾದರೂ ಲೇಸು ಎಂದುಕೊಂಡು ಸೀತಾದೇವಿಯೂ ಹೊರಡುತ್ತಾಳೆ. ಆದರೆ ಕೈಕೇಯಿಯ ನಿಬಂಧನೆಗಳು ಒಂದಾದ ಮೇಲೆ ಇನ್ನೊಂದು ರಾಮನ ಮೇಲೆ ಹೇರಲ್ಪಡುತ್ತವೆ. ನಾರುಮಡಿಯನ್ನುಡಬೇಕು, ಸೀತೆಯೂ ಯಾವುದೇ ಆಭರಣಗಳನ್ನು ಧರಿಸಬಾರದು, ಕಂದಮೂಲಗಳನ್ನೇ ಭಕ್ಷಿಸಬೇಕು, ಬ್ರಹ್ಮಚರ್ಯ ವ್ರತದಲ್ಲಿರಬೇಕು, ಕಾಡಿನ ಕಷ್ಟನಷ್ಟಗಳನ್ನು ಅನುಭವಿಸಬೇಕು ಮುಂತಾದವು. ರಾಮನು ಎಲ್ಲಕ್ಕೂ ಬದ್ಧತೆಯನ್ನು ತೋರುತ್ತಾನೆ. ಈ ಸಂದರ್ಭದಲ್ಲಿ ಕೈಕೇಯಿ ತನ್ನ ಪತಿಯೊಡನೆ ನಡೆದುಕೊಳ್ಳುವ ಸೌಜನ್ಯರಹಿತ ನಡವಳಿಕೆ ಅವಳನ್ನು ಅನಾಗರಿಕ ಹೆಣ್ಣಿನಂತೆ ತೋರುತ್ತದೆ. ರಾಮನನ್ನು ಕಾಡಿಗಟ್ಟಿದ ಅವಳ ಬಗ್ಗೆ ಜನರಿಂದ, ಸ್ವತಃ ಆಕೆಯ ಮಗ ಭರತನಿಂದ ಬರುವ ಪ್ರತಿಕ್ರಿಯೆ ತುಂಬ ಗ್ರಾಮ್ಯವಾಗಿದೆ. ಭೈರಪ್ಪನವರು ಇಲ್ಲಿ ಉಪಯೋಗಿಸಿರುವ ಭಾಷೆಕೂಡ ಅದೇ ತೆರನಾಗಿದೆ.
ವನವಾಸವನ್ನು ಮೊದಲು ಮೊದಲು ಹೊಸ ಅನುಭವವೆಂದು ಸ್ವೀಕರಿಸುವ ಸೀತೆ ಅಲ್ಪಕಾಲದಲ್ಲೇ ಬೇಸರಗೊಳ್ಳುತ್ತಾಳೆ. ಬರಿಗಾಲಿನ ನಡಿಗೆ, ಗೆಡ್ಡಗೆಣಸುಗಳ ಭಕ್ಷಣೆ, ಕ್ರಮೇಣ ರಾಮನ ನೀರಸ ಸ್ವಭಾವ, ಎಲ್ಲವು ನಿರಾಸಕ್ತಿ ಮೂಡಿಸುತ್ತವೆ. ಇದ್ದುದರಲ್ಲಿ ಲಕ್ಷ್ಮಣನು ರಾಮನಷ್ಟು ಧರ್ಮಜಿಜ್ಞಾಸೆಗೆ ಹೋಗದೆ ಅಣ್ಣನು ಹೇಳಿದಂತೆ ಕೇಳಿಕೊಂಡು ಸೀತೆಗೆ ಸ್ವಲ್ಪಮಟ್ಟಿಗೆ ಸಹಾಯಕನಾಗಿ ವರ್ತಿಸುತ್ತಾನೆ. ರಾಮ ಮತ್ತು ಸೀತೆಯನ್ನು ಸಾಧ್ಯವಾದಷ್ಟೂ ಅರಣ್ಯವಾಸದಲ್ಲಿಯೂ ಸಹನೀಯವಾಗಿ ಇರಿಸಲು ಲಕ್ಷ್ಮಣನು ಸದಾ ಪ್ರಯತ್ನಿಸುತ್ತಲೇ ಇರುತ್ತಾನೆ. ಈ ಭಾಗದ ವರ್ಣನೆಯು ತುಂಬ ಮನತಟ್ಟುವಂತಿದೆ.
ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಾ ಅವರು ಭೇಟಿಯಾಗುವ ಅತ್ರಿಮಹರ್ಷಿ, ಅನಸೂಯಾದೇವಿ ದಂಪತಿಗಳೊಡನೆ ಕಳೆಯುವ ಕೆಲದಿನಗಳು ಹೊಸರೀತಿಯಲ್ಲಿ ವರ್ಣೀಸಲ್ಪಟ್ಟಿವೆ. ಅನಸೂಯಾದೇವಿ ತನ್ನ ರೇಶಿಮೆ ವಸ್ತ್ರಗಳನ್ನು, ಬಂಗಾರದ ಒಡವೆಗಳನ್ನು ಸೀತೆಗೆ ಉಡಿಸಿ ತೊಡಿಸಿ ಸಂತೋಷಪಡುತ್ತಾಳೆ. ನಾರುಮಡಿ ಉಡುವ ನಿಬಂಧನೆ ಸೀತೆಗೆ ಅನ್ವಯಿಸುವುದಿಲ್ಲವೆಂದು ಆಕೆ ಪ್ರತಿಪಾದಿಸುತ್ತಾಳೆ. ಅದಕ್ಕೆ ಶ್ರೀರಾಮನು ಆಕ್ಷೇಪಿಸದಿರುವುದು ಅದ್ಭುತ ಕಲ್ಪನೆ. ಮುಂದುವರೆದು ಪಂಚವಟಿಯನ್ನು ತಲುಪಿದ ಮೇಲೆ ಅವರ ಕುಟೀರದ ಪಕ್ಕದ ಸಮತಟ್ಟಾದ ಸ್ವಲ್ಪ ಭೂಮಿಯನ್ನು ಕೃಷಿಕೆಲಸಗಳಿಗೆ ಲಕ್ಷ್ಮಣ ಬಳಸಿಕೊಳ್ಳುತ್ತಾನೆ. ಅವನ ಜೊತೆ ಅಲ್ಪಮಟ್ಟಿಗೆ ಸಹಾಯಕಳಾಗಿ ಸೀತೆಯೂ ದುಡಿಯುತ್ತಾಳೆ. ಈ ಅನುಭವ ಮುಂದೆ ಇಬ್ಬರಿಗೂ ಉಪಯೋಗಕ್ಕೆ ಬರುತ್ತವೆ. ಇವರ ಚಟುವಟಿಕೆಯ ವಿವರಣೆ ಕುತೂಹಲಕರವಾಗಿದೆ.
ಶೂರ್ಪನಖಿಯ ಪ್ರಸಂಗ, ಮಾರೀಚ ಮಾಯಾಮೃಗವಾಗಿ ಬರುವುದು ಇವೆಲ್ಲ ಮೂಲ ರಾಮಾಯಣದಲ್ಲಿದಂತೆಯೇ ಇದ್ದರೂ ಸೀತಾಪಹರಣವು ಇಲ್ಲಿ ರಾವಣನ ಅನುಯಾಯಿಗಳಿಂದ ನಡೆಯುತ್ತದೆ. ಅವರು ಮನೆ ನುಗ್ಗಿ ಬಲಾತ್ಕಾರವಾಗಿ ಸೀತೆಯನ್ನು ಬಂಧಿಸಿ ಹೊತ್ತು ಹೋಗುವರೆಂಬುದು ಸಹಜವಾಗಿದೆ. ಸೀತೆಗೆ ಇತರರಿಂದ ತಿಳಿದುಬರುವ ವಿವರಗಳಂತೆ ಶಬರಿಯು ಅವಳಲ್ಲಿಗೆ ಬಂದ ರಾಮ ಲಕ್ಷ್ಮಣರಿಗೆ ಮಾರ್ಗದರ್ಶನ ಮಾಡಿ ಹರಸುತ್ತಾಳೆ. ನಂತರ ಅವರಿಗೆ ಕಿಷ್ಕಿಂದೆಯಲ್ಲಿ ಸುಗ್ರೀವನ ಭೇಟಿಯಾಗುತ್ತದೆ. ರಾಮನು ಸುಗ್ರೀವನ ನೆರವಿಗೆ ನಿಂತು ಅವನ ಅಣ್ಣ ವಾಲಿಯನ್ನು ಸಂಹರಿಸುತ್ತಾನೆ. ರಾಜನಾಗಿ ಅಧಿಕಾರ ವಹಿಸಿಕೊಂಡ ಸುಗ್ರೀವ ರಾಮನಿಗೆ ಅವನ ಹೆಂಡತಿಯನ್ನು ಹುಡುಕಲು ಮತ್ತು ಅವನ ಸೈನ್ಯದ ನೆರವಿನಿಂದ ರಾವಣನ ವಿರುದ್ಧ ಯುದ್ಧಮಾಡಲು ಭರವಸೆ ಕೊಡುತ್ತಾನೆ. ಧರ್ಮಪರಾಯಣನಾದ ರಾಮನು ತನಗೆ ಯಾವುದೇ ರೀತಿಯಲ್ಲಿ ಹಾನಿಮಾಡದ ವಾಲಿಯನ್ನು ಮರದ ಮರೆಯಲ್ಲಿ ನಿಂತು ಕೊಲ್ಲುತ್ತಾನೆ. ಅವನ ಹೆಂಡತಿ ತಾರೆ ಈ ಬಗ್ಗೆ ಕೇಳುವ ಪ್ರಶ್ನೆಗೆ ಸಮಂಜಸವಾದ ಉತ್ತರ ನೀಡಲು ಅವನಿಗೆ ಸಾಧ್ಯವಾಗುವುದಿಲ್ಲ. ತಮ್ಮನ ಹೆಂಡತಿಯನ್ನು ಬಲವಂತವಾಗಿ ವಶಪಡಿಸಿಕೊಂಡು ಭೋಗಿಸಿದವನಿಗೆ ಶಿಕ್ಷೆ ವಿಧಿಸಲು ಯಾವುದೇ ಯುದ್ಧನೀತಿಯ ಅಗತ್ಯವಿಲ್ಲವೆನ್ನುತ್ತಾನೆ. ಅದೇ ಸುಗ್ರೀವ ಅಣ್ಣನ ಹೆಂಡತಿಯಾದ ತಾರೆಯನ್ನು ರಾಜಾರೋಷವಾಗಿ ಅವನು ಕೆಲಕಾಲ ಕಣ್ಮರೆಯಾಗಿದ್ದಾಗ ಭೋಗಿಸಿದ್ದನ್ನು ಪ್ರಶ್ನಿಸುವುದಿಲ್ಲ. ಇಲ್ಲಿ ರಾಮನ ಅನುಕೂಲಸಿಂಧು ಧಾರ್ಮಿಕತೆಯ ಅರಿವಾಗುತ್ತದೆ.
ಸುಗ್ರೀವನ ಮಂತ್ರಿ ಹನುಮಂತನ ಬಗ್ಗೆ ಸೀತೆಗೆ ತುಂಬ ಗೌರವ. ಅವನು ಹಿರಿಯನೆಂದು ಮತ್ತು ರಾಮನ ಸುದ್ಧಿಯನ್ನು ತಂದು ಅವಳ ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡಿದನೆಂದು. ಆಕೆ ಅವನನ್ನು ಗೌರವಿಸುತ್ತಾಳೆ. ಭೈರಪ್ಪನವರು ಸುಗ್ರೀವನ ಸೈನ್ಯವನ್ನು ಕಪಿಸೈನ್ಯವೆಂದು ವರ್ಣಿಸುವುದಿಲ್ಲ. ಗುಡ್ಡಗಾಡುಗಳ ಪ್ರದೇಶದ ಜನರು ಅತಿಕಾಯರು, ಮಹಾ ಬಲಶಾಲಿಗಳು ಎಂದು ಪರಿಗಣಿಸಿದ್ದಾರೆ. ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುವುದು, ಅವನು ಅದರಿಂದ ಲಂಕೆಯ ಭವನಗಳನ್ನು ಸುಡುವುದು ಎಂಬ ಅಸಹಜ ಕಲ್ಪನೆಗಳಿಲ್ಲಿಲ್ಲ.
ಅಶೋಕವನದಲ್ಲಿ ಬಂದಿಯಾಗಿದ್ದ ಅವಳ ಅನುಭವಗಳೂ ಬೇರೆಯಾಗಿವೆ. ರಾವಣನು ಸೀತೆಯನ್ನು ಒಲಿಸಿಕೊಳ್ಳಲು ಹೂಡುವ ಅನೇಕ ರೀತಿಯ ಉಪಾಯಗಳು, ಅವಳ ಕಾವಲಿನ ಹೆಂಗಸರು ತಮ್ಮ ರಾಜನ ಪರಾಕ್ರಮಗಳನ್ನು ಹೊಗಳುತ್ತಾ ಅವನನ್ನು ವರಿಸುಂತೆ ಪ್ರಚೋದಿಸುವುದು, ರಾವಣನ ಪತ್ನಿ ಮಂಡೋದರಿ ಸ್ವತಃ ತಾನೇ ಸೀತೆಯ ಬಳಿಗೆ ಬಂದು ತನ್ನ ಪತಿಯ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಾ ಅವಳನ್ನು ನಿಂದಿಸುವುದು, ಶೂರ್ಪನಖಿಯು ಸೀತೆಯ ಬಳಿಗೆ ಬಂದು ತನ್ನ ಬಯಕೆಯಂತೆ ರಾಮ ಅಥವ ಲಕ್ಷ್ಮಣರೊಂದಿಗೆ ಒಮ್ಮೆ ಅವಳೊಡನೆ ರಮಿಸುವಂತೆ ಅವರನ್ನೊಪ್ಪಿಸಿಕೊಟ್ಟರೆ ತಾನೇ ಸೀತೆಯನ್ನು ಸುರಕ್ಷಿತವಾಗಿ ಕೊಂಡೊಯ್ದು ರಾಮನಿಗೆ ಒಪ್ಪಿಸುವುದಾಗಿ ಪ್ರಲೋಭನೆಯೊಡ್ಡುವುದು, ಇವೆಲ್ಲ ಪರಿಕಲ್ಪನೆಗಳು ರೋಚಕವಾಗಿವೆ. ವಿಭೀಷಣನ ಪತ್ನಿ ‘ಸರಮೆ’ ಕೂಡ ಸೀತೆಯ ಬಗ್ಗೆ ಅನುಕಂಪ ತೋರುತ್ತಾಳೆ. ಅವಳನ್ನು ಆಗೀಗ ಭೇಟಿಮಾಡಿ ತನ್ನ ಗಂಡನಿಂದ ತಿಳಿದುಬಂದ ವಿಷಯಗಳಾದ ರಾಮನು ಲಂಕೆಗೆ ಬಂದಿದ್ದಾನೆ, ಅವನು ಖಂಡಿತವಾಗಿ ರಾವಣನನ್ನು ಕೊಂದು ಅವಳನ್ನು ಬಿಡಿಸಿಕೊಂಡು ಹೋಗುವನೆಂಬ ಸುದ್ಧಿನೀಡಿ ಭರವಸೆ ಮೂಡಿಸುವುದು ಇಲ್ಲಿ ಹೊಸ ದೃಷ್ಟಿಯಾಗಿದೆ. ಹನುಮಂತನಂತೂ ತಾನೇ ಸೀತಾದೇವಿಯನ್ನು ಯಾರಿಗೂ ತಿಳಿಯದಂತೆ ರಾಮನಲ್ಲಿಗೆ ಕರೆದೊಯ್ಯಲು ಶಕ್ತನೆಂಬುದನ್ನು ಹೇಳಿಕೊಂಡಾಗ ಸೀತೆಯು ಹಾಗೆ ಮಾಡಿದರೆ ಇದರಿಂದ ಶ್ರೀರಾಮನ ಶೌರ್ಯಕ್ಕೆ, ಗೌರವಕ್ಕೆ ಚ್ಯುತಿಯುಂಟಾಗುವುದು, ಆತನು ಗೆದ್ದುಬಂದೇ ತನ್ನನ್ನು ಕರೆದೊಯ್ಯಲಿ ಎಂದು ವೀರಪತ್ನಿಯಂತೆ ಉತ್ತರಿಸುತ್ತಾಳೆ.
ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುವಾಗ ರಾವಣನು ಮಗ ಇಂದ್ರಜಿತು, ಮತ್ತು ತಮ್ಮ ಕುಂಭಕರ್ಣನೊಡನೆ ಆಲೋಚನೆ ಮಾಡುವುದೂ ಹೊಸರೀತಿಯಲ್ಲಿದೆ. ಕುಂಭಕರ್ಣನು ಯುದ್ಧಮಾಡಲೊಪ್ಪುವುದಿಲ್ಲ. ಅಣ್ಣನಿಗೆ ಬುದ್ಧಿಹೇಳಿ ಅದನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಇಂದ್ರಜಿತು ಮಾತ್ರ ರಕ್ತಗತವಾಗಿ ತಂದೆಯಂತೆಯೇ ಸ್ತ್ರೀಲೋಲುಪ್ತತೆಯನ್ನು ಪಡೆದಿದ್ದಾನೇನೋ ಎಂಬಂತೆ ಸೀತೆಯ ಪಾತಿವ್ರತ್ಯವನ್ನು ಹರಣಮಾಡಿ ಸುದ್ಧಿ ಹರಡಿದರೆ ಅದನ್ನು ಕೇಳಿದ ರಾಮನು ಯುದ್ಧ ಮಾಡದೇ ಹಿಂದಕ್ಕೆ ಹೋಗಿಬಿಡುತ್ತಾನೆ, ಆದ್ದರಿಂದ ತನಗೆ ಅನುಮತಿ ಕೊಟ್ಟರೆ ತಾನೇ ಆಕೆಯ ಪಾತಿವ್ರತ್ಯ ಹರಣ ಮಾಡುವುದಾಗಿ ಹೇಳುತ್ತಾನೆ. ತಂದೆಗೆ ತಕ್ಕ ಮಗ. ಏಕೋ ರಾವಣನೇ ಅವನನ್ನು ತಡೆಯುತ್ತಾನೆ.
ಯುದ್ಧ ಪ್ರಾರಂಭಕ್ಕೆ ಮೊದಲೇ ರಾಮನು ವಿಭೀಷಣನಿಗೆ ಲಂಕೆಯ ರಾಜ್ಯಾಭಿಷೇಕದ ಶಾಸ್ತ್ರವನ್ನು ಮಾಡಿ ಯುದ್ಧತಂತ್ರವನ್ನು ಹೆಣೆಯುತ್ತಾನೆ. ಯುದ್ಧದಲ್ಲಿ ರಾವಣ, ಕುಂಭಕರ್ಣ, ಇಂದ್ರಜಿತ್ತು ಎಲ್ಲರೂ ಮಡಿಯುತ್ತಾರೆ. ರಾವಣನ ಪತ್ನಿಯು ವಿಭೀಷಣನನ್ನು ಅವನ ಪತ್ನಿ ಸರಮೆಯನ್ನು ಕೆಟ್ಟದಾಗಿ ನಿಂದಿಸುತ್ತಾಳೆ. ಶ್ರೀರಾಮನೇ ಒತ್ತಾಯಮಾಡಿ ಶತ್ರುವಾದರೂ ರಾಜನಾದ ರಾವಣನಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡಿಸಿ ತಾನೂ ತರ್ಪಣ ಕೊಡುತ್ತಾನೆ. ಈ ವಿವರಣೆಗಳು ಸಮಂಜಸವಾಗಿ ಮೂಡಿವೆ.
ವಿಭೀಷಣನ ಪತ್ನಿಯೊಡನೆ ಅನಸೂಯಾದೇವಿ ಕೊಟ್ಟ ವಸ್ತ್ರಾಭರಣಗಳನ್ನು ಧರಿಸಿ ತನ್ನ ಸಮ್ಮುಖಕ್ಕೆ ಬಂದ ಪತ್ನಿ ಸೀತಾದೇವಿಯನ್ನು ಸ್ವೀಕರಿಸುವುದೂ ಹೊಸರೀತಿಯಲ್ಲಿ. ಅವಳನ್ನು ಕುರಿತು ರಾಮನು ನಿಷ್ಠುರವಾಗಿ “ಜನಕರಾಜಪುತ್ರಿ, ನಿನ್ನನ್ನು ಹೊತ್ತೊಯ್ದ ರಾವಣನನ್ನು ಕೊಂದು ಇಕ್ಶ್ವಾಕು ವಂಶದ ಗೌರವವನ್ನು ಕಾಪಾಡಿಕೊಂಡಿದ್ದೇನೆ. ನಾನು ನಿನಗಾಗಿ ಯುದ್ಧ ಮಾಡಲಿಲ್ಲ. ನನ್ನ ವಂಶದ ಕೀರ್ತಿಯನ್ನು ಉಳಿಸಿಕೊಳ್ಳಲು ಮಾಡಿದೆ. ನನ್ನ ಕೆಲಸ ಮುಗಿದಿದೆ. ಇಷ್ಟು ದೀರ್ಘಕಾಲ ಪರಪುರುಷನ, ಅದರಲ್ಲೂ ಅತಿಕಾಮಿಯೆಂದು ಅಪಕೀರ್ತಿ ಪಡೆದ ರಾವಣನ ಅಧೀನದಲ್ಲಿದ್ದ ನಿನ್ನ ಮೇಲೆ ನನಗೆ ನಂಬಿಕೆಯಿಲ್ಲ. ನೀನು ಈಗ ಸ್ವತಂತ್ರಳು. ಎಲ್ಲಿಗೆ ಬೇಕಾದರೂ ಹೋಗಿ, ಯಾರ ಆಶ್ರಯದಲ್ಲಿ ಬೇಕಾದರೂ ಇರಬಹುದು, ನಿನ್ನಿಷ್ಟ”. ಎನ್ನುತ್ತಾನೆ. ಇದರಿಂದ ಅತೀವವಾಗಿ ಉದ್ವಿಗ್ನಳಾದ ಸೀತಾದೇವಿ ಅಗ್ನಿಪ್ರವೇಶ ಮಾಡಿ ಪ್ರಾಣತ್ಯಾಗಮಾಡಲು ಸಿದ್ಧಳಾದಾಗ ಲಕ್ಷ್ಮಣ ತೋರುವ ಸಮಯ ಪ್ರಜ್ಞೆ ಮತ್ತು ರಾಮನಿಗೆ ಆತ ಹೇಳುವ ಬಿರುಸಾದ ವಿವೇಕದ ಮಾತುಗಳು ರಾಮನ ಮುಖಕ್ಕೆ ರಾಚುವಂತಿವೆ. ರಾಮನು ಧರ್ಮವೆಂದೆನ್ನುವ ಯಾವುದೋ ಗೊಡ್ಡು ಸಂಪ್ರದಾಯದ ಅವಿವೇಕಿಯಂತೆ ನಡೆದುಕೊಳ್ಳುವುದನ್ನು ವಿರೋಧಿಸುತ್ತಾನೆ. ಇಬ್ಬರನ್ನೂ ಪಾಣಿಗ್ರಹಣ ಮಾಡಿಸಿ ಮತ್ತೊಮ್ಮೆ ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಸ್ವೀಕರಿಸಿ ಪತ್ನಿಯೊಡನೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವಂತೆ ಮಾಡುತ್ತಾನೆ. ಎಲ್ಲರೂ ಅಯೋಧ್ಯೆಗೆ ಹಿಂದಿರುಗುತ್ತಾರೆ. ಹದಿನಾಲ್ಕು ವರ್ಷದ ಅವಧಿಗೆ ಇನ್ನೂ ಕೆಲವು ದಿನಗಳು ಬಾಕಿಯಿವೆಯೆಂದು ರಾಮನು ತನ್ನ ಮೊದಲಿನ ಕಾಲುನಡಿಗೆ, ಕಂದಮೂಲ ಸೇವನೆ ನಿಬಂಧನೆಗಳಿಗೆ ಬದ್ಧನಾಗಿಯೇ ಪ್ರಯಾಣಿಸುತ್ತಾನೆ.
ಅಯೋಧ್ಯೆಯ ಮಹಾರಾಜನ ಪದವಿಯನ್ನು ಸ್ವೀಕರಿಸಿದ ನಂತರವೂ ರಾಮನು ತನ್ನ ಧರ್ಮಾಚರಣೆಯಲ್ಲಿ ವಿಪರೀತ ಅರ್ಥವಿಶ್ಲೇಷಣೆ ಮಾಡುವ ಚಾಳಿ ಬಿಡುವುದಿಲ್ಲ. ಎರಡನೇ ಬಾರಿ ಅಗ್ನಿಸಾಕ್ಷಿಯಾಗಿ ಪತ್ನಿಯೊಡನೆ ಪ್ರತಿಜ್ಞಾವಿಧಿಗೆ ಒಳಪಟ್ಟರೂ ಅವನಿಗೆ ಜನಾಪವಾದದ ಭೂತ ಸವಾರಿಯಾಗುತ್ತದೆ. ಯಾವನೋ ಪ್ರಜೆಯೊಬ್ಬ ಸೀತಾದೇವಿ ಪರಿಶುದ್ಧತೆಯ ಬಗ್ಗೆ ಅಪಸ್ವರವೆತ್ತಿದನೆಂಬ ಸುದ್ಧಿ ಹರಡಲು, ಅದನ್ನೇ ಕಾರಣಮಾಡಿಕೊಂಡು ಆದರ್ಶ ಪುರುಷ ಶ್ರೀರಾಮನು ತನ್ನ ಗರ್ಭಿಣಿ ಪತ್ನಿಯನ್ನು ಯಾವುದೇ ವಿವರಣೆ ನೀಡದೆ ತನ್ನ ರಾಜ್ಯದ ಎಲ್ಲೆಯಾಚೆಗೆ ಅರಣ್ಯದಲ್ಲಿ ಬಿಟ್ಟುಬರುವಂತೆ ಲಕ್ಷ್ಮಣನಿಗೇ ಇದು ರಾಜಾಜ್ಞೆಯೆಂದು ಆದೇಶಿಸುತ್ತಾನೆ. ಅನುಕಂಪದಿಂದ ಲ್ಮೀಕಿ ಮಹರ್ಷಿಗಳು ಮತ್ತು ಅಲ್ಲಿನ ಆಶ್ರಮವಾಸಿಗಳು ಆಕೆಗೆ ಆಶ್ರಯನೀಡಿ ನೋಡಿಕೊಳ್ಳುತ್ತಾರೆ. ಆಕೆಯ ಮಕ್ಕಳಿಬ್ಬರೂ ಅಲ್ಲಿಯೇ ಬೆಳೆದು ರಾಮನು ಕೈಗೊಳ್ಳುವ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿಹಾಕುವಷ್ಟು ದೊಡ್ಡವರಾಗುತ್ತಾರೆ. ಸೀತಾದೇವಿಯ ಮತ್ತು ಮಕ್ಕಳ ಯೋಗಕ್ಷೇಮವನ್ನು ಒಮ್ಮೆಯೂ ವಿಚಾರಿಸದ ಶ್ರಿರಾಮನನ್ನು ಲಕ್ಷ್ಮಣನೂ ತೊರೆದುಹೋಗಿ ಕೌಸಲ್ಯಾದೇವಿಗೆ ಅವಳ ತವರಿನಿಂದ ಬಂದಿದ್ದ ಬಳುವಳಿಯ ಭೂಮಿಯನ್ನು ಉಳುಮೆಮಾಡಿಕೊಂಡು ಕೃಷಿಕನಾಗಿ ಬದುಕುತ್ತಾನೆ. ರಾಮನ ರಾಜ್ಯದ ಪ್ರಜೆಯಾಗಿ ಉಳಿಯಲೂ ಅವನು ಇಷ್ಟಪಡುವುದಿಲ್ಲ.
ವಾಲ್ಮೀಕಿ ಆಶ್ರಮದಲ್ಲಿರುವಾಗ ಆಗೀಗ ಅಲ್ಲಿಗೆ ಬಂದು ಸೀತಾದೇವಿಯನ್ನು ಮಾತನಾಡಿಸಿ ಕೆಲವು ದಿನ ಅವಳೊಡನಿದ್ದು ಸ್ವಲ್ಪ ಮಟ್ಟಿಗೆ ಅವಳಿಗೆ ಸಾಂತ್ವನ ನೀಡುತ್ತಿದ್ದವಳೆಂದರೆ ಲಕ್ಷ್ಮಣನ ಹೆಂಡತಿ ಊರ್ಮಿಳೆ ಮಾತ್ರ. ಅವಳಿಗೂ ಮಹಾರಾಜನಾದ ತನ್ನ ಭಾವನ ಹುಚ್ಚಾಟದ ವರ್ತನೆಗಳು ಇಷ್ಟವಾಗುವುದಿಲ್ಲ. ರಾಜ್ಯದಲ್ಲಿ ಯಾರೋ ಒಬ್ಬ ಪ್ರಜೆಯ ಮಗನು ಚಿಕ್ಕವಯಸ್ಸಿನಲ್ಲಿ ಮರಣಹೊಂದಿದರೆ ರಾಜನು ಅದು ರಾಜ್ಯದಲ್ಲಿ ಏನೋ ಆಧರ್ಮಕೃತ್ಯ ನಡೆದದ್ದರಿಂದಲೇ ಆಗಿರಬಹುದೆಂದು ಅದರ ಪತ್ತೆಗೆ ಚಾರರನ್ನು ನೇಮಿಸುತ್ತಾನೆ . ಅವರು ತಂದ ವರದಿಯೆಂದರೆ ರಾಜ್ಯದ ಪ್ರಜೆಯಾಗಿದ್ದರೂ ಗಡಿಯಾಚೆಗಿನ ಒಂದು ಪ್ರದೇಶದಲ್ಲಿ ಶೂದ್ರನೊಬ್ಬ ತಪಸ್ಸಿನಲ್ಲಿ ತೊಡಗಿದ್ದಾನೆ. ಅವನು ವರ್ಣನೀತಿಯನ್ನು ಮೀರಿ ಈ ಕೆಲಸದಲ್ಲಿ ತೊಡಗಿರುವುದರಿಂದಲೇ ರಾಜ್ಯದಲ್ಲಿ ಕ್ಷಾಮ ತಲೆದೋರಿದೆ ಎಂಬುದು. ಹಿಂದುಮುಂದು ಯೋಚಿಸದೆ ಶ್ರೀರಾಮನೇ ಖುದ್ದಾಗಿ ಅವನಲ್ಲಿಗೆ ಹೋಗಿ ಅವನು ಮಾಡುತ್ತಿರುವುದು ಧರ್ಮಕ್ಕೆ ಬಾಹಿರವಾದ ಕೃತ್ಯ. ಅದರಿಂದ ರಾಜ್ಯಕ್ಕೆ ಬರವುಂಟಾಗಲು ಕಾರಣವಾಗಿದೆ. ಇದನ್ನು ತಪ್ಪಿಸುವುದು ರಾಜನಾದ ನನ್ನ ಕರ್ತವ್ಯವೆಂದು ಶಂಬೂಕನೆಂಬ ಆ ಶೂದ್ರನನ್ನು ಕತ್ತರಿಸಿಹಾಕುತ್ತಾನೆ. ಕೃಷಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬೆಟ್ಟದ ತಪ್ಪಲಿನಲ್ಲಿ ಕೊಂಚ ಜಾಗವನ್ನು ಸಾಗುವಳಿಮಾಡುತ್ತಾ ಇದ್ದ ಸೀತೆಯನ್ನು ಹೇಗಾದರೂ ಮಾಡಿ ಅಯೊಧ್ಯೆಗೆ ಹಿಂದಿರುಗಿ ಮಹಾರಾಣಿಯಾಗಿ ಪ್ರತಿಷ್ಠಾಪಿಸಬೇಕೆಂಬ ಹಂಬಲದಿಂದ ವಾಲ್ಮೀಕಿ ಮಹರ್ಷಿಗಳು ಅಶ್ವಮೇಧಯಾಗದ ನೆವದಲ್ಲಿ ರಾಜಧಾನಿಗೆ ಹೋಗಿ ಅಲ್ಲಿ ಧರ್ಮಜಿಜ್ಞಾಸು ಸಭೆಯೊಂದನ್ನು ಏರ್ಪಡಿಸುತ್ತಾರೆ. ಅದಕ್ಕೆ ಸೀತೆ, ಲಕ್ಷ್ಮಣ, ಎಲ್ಲ ರಾಜಕುಮಾರರು ಮತ್ತು ಬಹಳಷ್ಟು ಪಂಡಿತೋತ್ತಮರು, ಋಷಿಗಳನ್ನು ಆಹ್ವಾನಿಸಲಾಗುತ್ತದೆ. ಅಲ್ಲಿ ವಾಲ್ಮೀಕಿ ಮಹರ್ಷಿಗಳು ಸೀತಾದೇವಿ ಮಹಾರಾಣಿಯಾಗಿ ಅಯೋಧ್ಯೆಗೆ ಹಿಂದಿರುಗಬೇಕೇ ಎಂಬ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕೋರುತ್ತಾರೆ. ಎಲ್ಲರು ಒಕ್ಕೊರಲಿನಿಂದ ಬರಬೇಕೆನ್ನುತ್ತಾರೆ. ರಾಮನಿಗೆ ಸೀತೆಯನ್ನು ಪರಿತ್ಯಾಗ ಮಾಡಿದ್ದಕ್ಕೆ ಕಾರಣವನ್ನೂ ಕೇಳಲಾಗುತ್ತದೆ. ಅವನು ನೀಡಿದ ಉತ್ತರ ಅವನ ಮೂಗಿನ ನೇರಕ್ಕೇ ಇರುತ್ತದೆ. ಆದರ್ಶ ಪುರುಷನೆಂದು ಕರೆಸಿಕೊಳ್ಳುವ ಶ್ರೀರಾಮನಿಗೆ ಸದಾ ತನ್ನ ವ್ಯಕ್ತಿತ್ವಕ್ಕೆ ಯಾವುದಾದರೂ ಕಪ್ಪುಚುಕ್ಕೆ ಹತ್ತಬಾರದೆಂಬ ಸ್ವಪ್ರತಿಷ್ಠೆಯೇ ಎದ್ದು ಕಾಣುತ್ತದೆ. ಇದರಿಂದಾಗಿ ಸೀತೆ ಅಯೋಧ್ಯೆಗೆ ಹಿಂದಿರುಗಲು ಒಪ್ಪದೇ ತನ್ನ ಕೃಷಿಭೂಮಿಗೇ ಹಿಂದಿರುಗುತ್ತಾಳೆ. ರಾಮನು ತನ್ನ ಪಕ್ಕದಲ್ಲಿ ಸೀತೆಯ ಸುವರ್ಣ ಪುತ್ಥಳಿಯನ್ನಿಟ್ಟುಕೊಂಡೇ ಯಾಗ ಪೂರ್ತಿಗೊಳಿಸುತ್ತಾನೆ. ತನ್ನ ಮಕ್ಕಳನ್ನು ಒಪ್ಪಿಕೊಂಡು ಕುಶ , ಲವರನ್ನು ತನ್ನ ನಂತರ ರಾಜ್ಯಕ್ಕೆ ಉತ್ತರಾಧಿಕಾರಿಗಳನ್ನಾಗಿ ಪ್ರತಿಷ್ಠಾಪಿಸುತ್ತಾನೆ. ತಾನು ಎಲ್ಲ ಕರ್ತವ್ಯಗಳಿಂದ ಮುಕ್ತನಾಗಿ ಯೋಗಿಯಂತೆ ಜೀವನ ನಡೆಸುತ್ತಾನೆ. ಒಂದುದಿನ ಸರಯೂ ನದಿಯಲ್ಲಿ ಸ್ನಾನಕ್ಕೆಂದು ಇಳಿದವನು ಮೇಲಕ್ಕೆ ಬರುವುದಿಲ್ಲ. ಹುಡುಕಾಡಿ ಅವನ ಶವವನ್ನು ಮೇಲಕ್ಕೆ ತರುತ್ತಾರೆ. ಸುದ್ಧಿ ತಿಳಿದರೂ ಸೀತೆ ಅವನ ಅಂತಿಮ ದರ್ಶನಕ್ಕೂ ಹೋಗುವುದಿಲ್ಲ. ಹತ್ತನೆಯ ದಿನ ಯಾವ ಶಾಸ್ತ್ರಗಳಿಗೂ ಒಳಪಡದೆ ಅನಸೂಯಾದೇವಿ ನೀಡಿದ್ದ ವಸ್ತ್ರಾಭರಣಗಳಿಂದ ಅಲಂಕೃತಳಾಗಿ ಮುಂಜಾನೆಯೇ ತಾನು ಉತ್ತು ಬಿತ್ತಿದ್ದ ಭೂತಾಯಿಯ ಮಡಿಲಿನಲ್ಲಿ ಧರಾಶಾಯಿಯಾಗಿ ಗತಪ್ರಾಣಳಾಗಿ ದೊರೆಯುತ್ತಾಳೆ.
ಸಾಯುವ ಹಿಂದಿನ ಅವಳ ಮನಸ್ಸಿನಲ್ಲಿ ಈ ವಾಕ್ಯಗಳು ಹೊಯ್ದಾಡುತ್ತಿದ್ದವು. “ಗಂಡನ ಪ್ರಯೋಜನಕ್ಕಾಗಿ ಅವನು ಹೆಂಡತಿಗೆ ಪ್ರಿಯನಾಗುವುದಿಲ್ಲ, ಅವನ ಪ್ರಯೋಜನಕ್ಕಾಗಿ ಪ್ರಿಯನಾಗಿರುತ್ತಾನೆ. ಹಾಗೆಯೇ ಹೆಂಡತಿಯ ಪ್ರಯೋಜನಕ್ಕಾಗಿ ಅವಳು ಗಂಡನಿಗೆ ಪ್ರಿಯಳಾಗಿರುವುದಿಲ್ಲ, ತನ್ನ ಪ್ರಯೋಜನಕ್ಕಾಗಿ ಪ್ರಿಯಳಾಗಿರುತ್ತಾಳೆ. ಮಕ್ಕಳ ಪ್ರಯೋಜನಕ್ಕಾಗಿ ತಂದೆತಾಯಿಗಳು ಅವರನ್ನು ಪ್ರೀತಿಸುವುದಿಲ್ಲ, ತಮ್ಮ ಪ್ರಯೋಜನಕ್ಕಾಗಿ ಪ್ರೀತಿಸುತ್ತಾರೆ. ಹಾಗೆಯೇ ಧನ, ಪಶು ಇತ್ಯಾದಿ ಎಲ್ಲವೂ ತನಗಾಗುವ ಸಂತೋಷಕ್ಕಾಗಿ ಎಲ್ಲರೂ ಇತರ ಎಲ್ಲರನ್ನೂ ಪ್ರೀತಿಸುತ್ತಾರೆ. ಎಂದರೆ ಎಲ್ಲ ಪ್ರೀತಿಯೂ ಸ್ವಕೇಂದ್ರಿತವಾದದ್ದೇ. ಇದೇ ಸತ್ಯ. ಸ್ವಾರ್ಥ ಪರಾರ್ಥಗಳಲ್ಲಿ ವ್ಯತ್ಯಾಸವೇ ಇಲ್ಲದಮೇಲೆ ಜೀವನಕ್ಕೆ ಯಾವ ಅರ್ಥವಿದೆ?” ಈ ಮಾತುಗಳಲ್ಲಿ ಇಡೀ ರಾಮಾಯಣದ ಎಲ್ಲ ಸಂಬಂಧಗಳ ಮೂಲವೇನೆಂದು ಅರಿವಾಗಿ ಹೊಸದಾದ ಚಿಂತನೆಯೇ ವೇದ್ಯವಾಗುತ್ತದೆ.
ಎಸ್.ಎಲ್.ಭೈರಪ್ಪನವರು ಇಂತಹ ನವ್ಯದರ್ಶನಗಳನ್ನು, ತಾರ್ಕಿಕ ವಿಶ್ಲೇಷಣೆಗಳನ್ನು ತಮ್ಮ ಬರಹಗಳ ಮೂಲಕ ನೀಡುವುದರಲ್ಲಿ ಸಿದ್ಧಹಸ್ತರು. ‘ಉತ್ತರಕಾಂಡ’ವು ಇಂತಹದೊಂದು ಸಫಲ ಪ್ರಯತ್ನವಾಗಿದೆ ಮತ್ತು ಓದುಗರನ್ನು ಆಸಕ್ತಿಯಿಂದ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.
–ಬಿ.ಆರ್.ನಾಗರತ್ನ, ಮೈಸೂರು
ಬಹಳ ಸೊಗಸಾಗಿದೆ ಅವಲೋಕನ
ಧನ್ಯವಾದಗಳು ನಯನ ಮೇಡಂ
ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ
ಪುಸ್ತಕಾವಲೋಕನ ಪ್ರಬುದ್ಧವಾಗಿ ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತದೆ, ಓದಿದವರನ್ನು ಮತ್ತಷ್ಟು ಚಿಂತನೆಗೆ ಹಚ್ಚುವಂತಿದೆ.
ನಿಮ್ಮ ಸ್ಪಂದನೆಗೆ ಧನ್ಯವಾದಗಳು ಪದ್ಮಾ ಮೇಡಂ
ಈ ಪುಸ್ತಕವನ್ನು ಹಿಂದೊಮ್ಮೆ ಓದಿದ್ದೆ. ಈಗ ಪುನ: ಮೆಲುಕು ಹಾಕಿದ ಹಾಗೆ ಆಯಿತು. ಧನ್ಯವಾದಗಳು.
ನಿಮ್ಮ ಪ್ರತಿಕ್ರಿಯೆ ಗೆ ಧನ್ಯವಾದಗಳು ಗೆಳತಿ ಹೇಮಾ
ಪ್ರಸಿದ್ಧ ಕಾದಂಬರಿಕಾರರ ಪುಸ್ತಕಾವಲೋಕನವನ್ನು ಸಮರ್ಥವಾಗಿ ಓದುಗರಿಗೆ ನೀಡಿದ ನಿಮ್ಮ ಪ್ರಯತ್ನ ಶ್ಲಾಘನೀಯ…ನಾಗರತ್ನ ಮೇಡಂ. ಬಹಳ ಚೆನ್ನಾಗಿ ಮೂಡಿಬಂದಿದೆ.
ಧನ್ಯವಾದಗಳು ಶಂಕರಿ ಮೇಡಂ